ಅದಾನಿ ಸಮೂಹವು ತನ್ನ ಕಂಪನಿಗಳ ಷೇರುಗಳ ಬೆಲೆಗಳನ್ನು ತಾರುಮಾರು ಮಾಡಿದೆ ಮತ್ತು ಆಸ್ತಿಗಳ ಮೌಲ್ಯವನ್ನು ಹೆಚ್ಚಿಸುವ ಅಕ್ರಮಗಳಲ್ಲಿ ತೊಡಗಿದೆ ಎಂಬುದಕ್ಕೆ ತಾಜಾ ಪುರಾವೆಗಳು ಹೊರಹೊಮ್ಮಿದ ನಂತರ ಈ ವಿಷಯದಲ್ಲಿ ಸಿಪಿಎಂ ಪಾಲಿಟ್ಬ್ಯುರೊ ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆಯನ್ನು ಕೋರಿದೆ.
ಪಕ್ಷದ ಪೊಲಿಟ್ಬ್ಯುರೊ ಗುರುವಾರ ಇಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಅದಾನಿ ಸಮೂಹದ ಅಕ್ರಮಗಳ ಕುರಿತು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ ಒದಗಿಸಿದ ಮಾಹಿತಿ (ಇನ್ಪುಟ್) ಆಧರಿಸಿ, ‘ದಿ ಫೈನಾನ್ಷಿಯಲ್ ಟೈಮ್ಸ್’ ಮತ್ತು ‘ದಿ ಗಾರ್ಡಿಯನ್’ ಸುದ್ದಿ ಲೇಖನಗಳನ್ನು ಪ್ರಕಟಿಸಿವೆ. ವಿನೋದ್ ಅದಾನಿಯವರ ಇಬ್ಬರು ನಿಕಟ ಸಹವರ್ತಿಗಳು ಬರ್ಮುಡಾದಲ್ಲಿ ಹೂಡಿಕೆ ನಿಧಿಯನ್ನು ಹೇಗೆ ಬಳಸಿದರು ಮತ್ತು ಅದಾನಿ ಕಂಪನಿಗಳಲ್ಲಿ ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಲು ಶೆಲ್ ಕಂಪನಿಗಳನ್ನು ಸ್ಥಾಪಿಸಿದರು ಎಂಬುದನ್ನು ಈ ಸುದ್ದಿಗಳು ಸ್ಪಷ್ಟವಾಗಿ ಬಹಿರಂಗಪಡಿಸಿವೆ ಎಂದು ಪೊಲಿಟ್ಬ್ಯುರೊ ಬಹಿರಂಗಪಡಿಸಿದೆ.
2014ರಲ್ಲಿ ಅದಾನಿ ಸಮೂಹದ ಕಂಪನಿಗಳ ವಿದೇಶಿ ನಿಧಿಯನ್ನು ಸೆಬಿ ಪರಿಶೀಲಿಸಿತ್ತು, ಆದರೆ ನಂತರ ತನಿಖೆಯನ್ನು ಮುಚ್ಚಿಹಾಕಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ. ಪ್ರಧಾನಿ ಮೋದಿಯವರ ಬೆಂಬಲದಿಂದಾಗಿ ಷೇರುಪೇಟೆಯಲ್ಲಿ ನಡೆದಿರುವ ದೊಡ್ಡ ಪ್ರಮಾಣದ ವಂಚನೆಗಳು ಮತ್ತು ಬೃಹತ್ ಅಕ್ರಮಗಳ ವಿರುದ್ಧ ಯಾವುದೇ ನಿಯಂತ್ರಣ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ಈ ಲೇಖನಗಳು ದೃಢಪಡಿಸಿವೆ ಎಂದು ಪೊಲಿಟ್ಬ್ಯುರೊ ಹೇಳಿದೆ. ಅದಾನಿ ಬಗ್ಗೆ ಬೆಳಕಿಗೆ ಬಂದಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಮಗ್ರ ತನಿಖೆಯ ಅಗತ್ಯವಿದೆ. ಇದರಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವಂತೆ ಪೊಲಿಟ್ ಬ್ಯುರೊ ಕೋರಿದೆ.