ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್ ಮೀಡಿಯಾವು ಪ್ರಕಟಿಸುತ್ತಿರುವ ಎಂಟನೇ ಸರಣಿಯಲ್ಲಿ ಅಲೆಮಾರಿಗಳ ಅಕ್ಷರದವ್ವ ಹಂದಿಜೋಗಿ ರಾಮಕ್ಕ ಅವರ ಸಾಧನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ ಪತ್ರಕರ್ತರಾದ ಕವಿತಾ ಕಮ್ಮನಕೋಟೆ.
ರಾಮಕ್ಕ ತನ್ನ ಪರಿವಾರದ ಜೊತೆಗೆ ಚಿತ್ರದುರ್ಗದ ಚಿಕ್ಕಜಾಜೂರಿನಿಂದ ಹೊರಟು ತಿಪಟೂರು ರೈಲು ನಿಲ್ದಾಣ ತಲುಪಿದಾಗ ರಾತ್ರಿ 9 ಗಂಟೆ. ಅವರು ಆಗಿನ್ನೂ 8ರ ಪುಟ್ಟ ಬಾಲೆ. ರೈಲು ನಿಲ್ದಾಣವೇ ಆ ರಾತ್ರಿಯ ಆಶ್ರಯತಾಣ. ಹಂದಿಜೋಗಿ ಸಮುದಾಯದ ತಂದೆ ಸುಂಕಪ್ಪನವರು ಗಂಟುಮೂಟೆ ಕಟ್ಟಿಕೊಂಡು ಇಲ್ಲಿಗೆ ಬಂದ ಮೇಲೆ ಹೆಂಡತಿ ಮಕ್ಕಳನ್ನೆಲ್ಲ ಸರಿದೂಗುವುದು ಸುಲಭವೇನಾಗಿರಲಿಲ್ಲ. ಸ್ಥಳೀಯರ ಆಶ್ರಯ ಪಡೆದು, ತಂಗಲು ಜಾಗದ ವ್ಯವಸ್ಥೆ ಮಾಡಿಕೊಂಡು, ಹೊಟ್ಟೆಗೊಂದು ಮಾರ್ಗ ಹುಡುಕಿ ಕೊಳ್ಳುವುದು ತಕ್ಷಣಕ್ಕೇ ಸಾಧ್ಯವಾಗದ ಕೆಲಸ. ಹಂದಿ ಕಾಯಬೇಕು, ಭಿಕ್ಷೆ ಬೇಡಿಯೇ ಬದುಕು ನಿರ್ವಹಿಸಬೇಕು. ಈ ನಡುವೆ ಒಂದಿನ ಈಚಲು ಗರಿ ತರೋದಕ್ಕೆ ತೆರಳಿದ್ದ ಪುಟ್ಟ ರಾಮಕ್ಕನವರಿಗೆ ಇದ್ದಕ್ಕಿದ್ದಂತೆ ಎರಡು ಕಾಲುಗಳೂ ಸ್ವಾಧೀನ ಕಳೆದುಕೊಂಡವು. ಮಾಡಿದ ಔಷಧಿ ಫಲಿಸಲಿಲ್ಲ. ಮುಂದಿನ ಜೀವನ ಕಷ್ಟದಾಯಕವೇ ಆಯಿತು. ಕುಟುಂಬ ತುಮಕೂರಿಗೆ ಸ್ಥಳಾಂತರವಾದ ಮೇಲೆ ಹಂದಿ ಸಾಕಾಣಿಕೆಯನ್ನು ತಂದೆಯವರು ನೋಡಿಕೊಳ್ಳುತ್ತಿದ್ದರು. ರಾಮಕ್ಕ ಕೂತಲ್ಲಿಯೇ ಭಿಕ್ಷೆ ಬೇಡಿ ಹಣ ಮತ್ತು ಊಟ ಸಂಪಾದಿಸುತ್ತಿದ್ದರು. ಎಂಥಾ ಪರಿಸ್ಥಿತಿಯಲ್ಲೂ ಮಗಳನ್ನು ದೂಡದೇ ಕಾಳಜಿ ವಹಿಸಿದ್ದ ತಂದೆಯವರು ಮಗಳಿಗೊಂದು ಮದುವೆ ಮಾಡಿದರು. ಅವರ ಅಕಾಲ ಮರಣದ ನಂತರ ಕುಡುಕ ಗಂಡನ ಜೊತೆಗಿನ ಜೀವನ ತ್ರಾಸವೇ ಆಗಿತ್ತು. ದಿನವೂ ಊರೂರು ತಿರುಗಿ ಭಿಕ್ಷೆ ಬೇಡಿ ತರಲು ಅವರ ಗಂಡ ಒತ್ತಾಯಿಸುತ್ತಲೇ ಇದ್ದರು. ಇದರಿಂದ ಬೇಸತ್ತ ಇವರು ಗಂಡನನ್ನೇ ತೊರೆಯಬೇಕಾಯಿತು. ಮಕ್ಕಳೊಂದಿಗೆ ತನ್ನ ಸ್ವಾಭಿಮಾನದ ಜೀವನ ನಿರ್ವಹಿಸಲು ರಸ್ತೆ ಬದಿಗಳಲ್ಲಿ ಬ್ಯಾಟ್ ಮಾರುವುದು, ಮನೆ ಕೆಲಸ ಮಾಡಿಕೊಂಡು ಸಂಸಾರ ತೂಗಿಸತೊಡಗಿದರು.
ನನ್ನಂತೆ ಮಕ್ಕಳ ಭವಿಷ್ಯ ಆಗಬಾರದು, ಅವರಿಗೆ ಶಾಲೆ ಕಲಿಸಬೇಕು ಎಂಬ ಆಸೆ ಅವರಲ್ಲಿ ಚಿಗುರಿತು. ಇದು ಅಷ್ಟು ಸುಲಭವೇನಾಗಿರಲಿಲ್ಲ. ಊರೂರು ಅಲೆಯುತ್ತಾ ಜೀವನ ಕಟ್ಟಿಕೊಳ್ಳುವ ಅಲೆಮಾರಿ ಹಂದಿಜೋಗಿಗಳಿಗೆ ದಾಖಲೆಗಳು ಏನಿವೆ? ವ್ಯವಸ್ಥೆ ಕೇಳುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗೋದು ತುಂಬಾ ಕಷ್ಟವೇ ಆಗಿತ್ತು. ಅಲೆಮಾರಿ ಸಮುದಾಯದ ಮಕ್ಕಳು ಶನಿದೇವರ ಫೋಟೋ ಕಟ್ಟಿಕೊಂಡು ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುವುದು ಇವರಿಗೆ ಇಷ್ಟವೇ ಇರಲಿಲ್ಲ. ಶಿಕ್ಷಣದ ಹಿನ್ನೆಲೆಯೇ ಇರದ ರಾಮಕ್ಕನೊಳಗೆ ಒಬ್ಬ ಸಾವಿತ್ರಿಬಾಯಿ ಫುಲೆ ಉದಯಿಸಿದಳು. ಅವಮಾನದ ಅನುಭವಗಳು, ಹಠ, ಸ್ವಾಭಿಮಾನಗಳು ರಾಮಕ್ಕನೊಳಗೆ ಕ್ರಾಂತಿಯ ಕಿಡಿಯೆಬ್ಬಿಸಿದವು.
ಸಹೃದಯರ ಮೂಲಕ ಶಿಕ್ಷಣ ಇಲಾಖೆಯ ಸಹಕಾರ ಪಡೆದು ತುಮಕೂರಿನ ಬನಶಂಕರಿ ಸುತ್ತಮುತ್ತ ಭಿಕ್ಷಾಟನೆ ಮಾಡುವ ಅಲೆಮಾರಿಗಳ ಮಕ್ಕಳಿಗಾಗಿ ಟೆಂಟ್ ಶಾಲೆಯನ್ನು ಆರಂಭಿಸಿದರು. ಆರಂಭದಲ್ಲಿ ವಿವಿಧ ವಯೋಮಾನದ 20 ಮಕ್ಕಳಿಗೆ ಅಕ್ಷರ ಕಲಿಸುವ ಕೆಲಸ ಆರಂಭಗೊಂಡಿತು. ಆದರೆ ‘ವಿದ್ಯೆ ಕಲಿತರೆ ಸಮುದಾಯದ ಕಟ್ಟುಪಾಡುಗಳನ್ನು ಮೀರುತ್ತಾರೆಂಬ ಅಪನಂಬಿಕೆಯು’ ಮಕ್ಕಳನ್ನು ಶಾಲೆಗೆ ಕಳಿಸಲು ಅಡ್ಡಿಪಡಿಸಿತಾದರೂ ಸಮುದಾಯದೊಳಗೆ ಅರಿವು ಮೂಡಿಸುತ್ತಾ ಶಿಕ್ಷಣದ ಮಹತ್ತ್ವವನ್ನು ರಾಮಕ್ಕ ಸಾರಿದರು. ಮಕ್ಕಳು ಕಲಿಕೆಯಿಂದ ವಿಚಲಿತರಾಗದಂತೆ ಟೆಂಟ್ ಶಾಲೆಯಲ್ಲಿದ್ದುಕೊಂಡೇ ಹೆಚ್ಚು ಮುತುವರ್ಜಿ ವಹಿಸಿದರು. ಒಬ್ಬರು ಸರ್ಕಾರಿ ಶಿಕ್ಷಕಿಯನ್ನು ನಿಯೋಜನೆ ಮಾಡಿಸಿ ಕೊಳ್ಳಲಾಯಿತು. ವಿವಿಧ ಸಂಘ ಸಂಸ್ಥೆಗಳು ನೆರವು ನೀಡಿದವು. ಇದೇ ಟೆಂಟ್ಶಾಲೆಗೆ `ಕೇರಾಫ್ ಫುಟ್ಪಾತ್’ ಸಿನಿಮಾ ನಿರ್ದೇಶಕ ಮಾಸ್ಟರ್ ಕಿಶನ್ ಭೇಟಿ ನೀಡಿದರು. ಝೆನ್ ತಂಡದ ಸಹಯೋಗದೊಂದಿಗೆ ಟೆಂಟ್ ಶಾಲಾ ಮಕ್ಕಳು ಕಿಶನ್ ಜೊತೆಗೆ ಕೇರಾಫ್ ಫುಟ್ಪಾತ್ ಸಿನೆಮಾ ವೀಕ್ಷಣೆ ಮಾಡಿದರು. ಸತತ ಒಂದು ವರ್ಷಗಳ ಕಾಲ ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ ಅಕ್ಷರ ಕಲಿಕೆ ನಡೆಯಿತು. ಶಾಲೆ ಎತ್ತಂಗಡಿ ಮಾಡುವಂತೆ ಅನೇಕರು ತೊಂದರೆ ನೀಡಿದರು. ಆನಂತರ ಚಿಣ್ಣರ ಅಂಗಳಕ್ಕೆ ಈ ಮಕ್ಕಳು ಸೇರ್ಪಡೆ ಗೊಂಡರು. ಇಲ್ಲಿ ಕಲಿತ 50ಕ್ಕೂ ಹೆಚ್ಚು ಮಕ್ಕಳು ಶಾಲಾ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ.
ಮಂಡಿಪೇಟೆ, ಬಸ್ನಿಲ್ದಾಣ ಬಳಿ ಪೇಪರ್ ಆಯುವ ಹುಡುಗರಿಗೆ ಹಾಗೂ ಮಂಡ, ದಕ್ಲರು, ದೊಂಬಿದಾಸ ಅಲೆಮಾರಿ ಸಮುದಾಯದ ಮಕ್ಕಳಿಗೂ ಶಿಕ್ಷಣ ಕೊಡಿಸುವತ್ತ ರಾಮಕ್ಕ ಸರ್ಕಾರದ ಗಮನ ಸೆಳೆದಿದ್ದಾರೆ. ತುಮಕೂರಿನ ಇಸ್ಮಾಯಿಲ್ ನಗರದ ಅಲೆಮಾರಿ ಸಮುದಾಯದ ಜನರಿಗೆ ಈಕೆ ಅಕ್ಷರದವ್ವನೇ ಆಗಿದ್ದಾರೆ.
26 ವರ್ಷಗಳಿಂದ ಬನಶಂಕರಿ 2ನೇ ಹಂತದ ಇಸ್ಮಾಯಿಲ್ ನಗರದ ಕುಮಟಯ್ಯನ ತೋಟದಲ್ಲಿ ಹಂದಿ ಸಾಕುತ್ತಾ, ಕೆಲಸ ಮಾಡುತ್ತಾ ಅದೇ ಜಾಗದಲ್ಲಿ ಉಳಿದುಕೊಳ್ಳುವ ಅವಕಾಶಕ್ಕೆ ಹೋರಾಡುತ್ತಿದ್ದಾರೆ. 2004ರಲ್ಲಿ ಆ ಜಾಗ ಲೇಔಟ್ ಆಗಿ, ʼಟೂಡಾʼಗೆ ಅನುಮತಿ ಸಿಕ್ಕಿತು. ಆದಾಯ ಕೇಂದ್ರವೇ ಆಗಿದ್ದ ಆ ಜಾಗದಿಂದ ಒಕ್ಕಲೆಬ್ಬಿಸುವ ಸಲುವಾಗಿ ರಾತ್ರೋರಾತ್ರಿ ಹಂದಿಜೋಗಿಗಳ ಗುಡಿಸಲುಗಳಿಗೆ ಬೆಂಕಿ ಇಟ್ಟರು, ಬಸುರಿ ಬಾಣಂತಿಯರನ್ನು ಹೊರಗೆಳೆದು ಝಾಡಿಸಿದರು. ಈ ಪ್ರಕರಣ ಗಂಭೀರ ಸ್ವರೂಪ ಪಡೆಯಿತು. ಪೊಲೀಸ್ ಠಾಣೆ ಮೆಟ್ಟಿಲೇರಿ ತಪ್ಪಿಸ್ಥರಿಂದಲೇ ಆದ ನಷ್ಟ ಬರಿಸುವಂತೆ ಹೋರಾಟ ನಡೆಸಿದರು. ಕ್ಷಮೆ ಯಾಚಿಸಿ, ಈಗಿರುವ ಜಾಗಕ್ಕೇ ಅಧಿಕಾರಿಗಳು ಬಂದು ಹಕ್ಕುಪತ್ರ ವಿತರಿಸುವಂತಹ ಒತ್ತಡವೂ ನಿರ್ಮಾಣವಾಯಿತು.
ಶಿಕ್ಷಣದಿಂದ ಸಮುದಾಯದ ಏಳ್ಗೆ ಎಂಬುದನ್ನು ನಂಬಿರುವ ರಾಮಕ್ಕ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಆಶ್ರಯದಲ್ಲಿ ಹಂದಿ ಜೋಗಿ ಜನಾಂಗದ ಶಾಖೆಯನ್ನು 2008ರಲ್ಲಿ ತೆರೆದಿದ್ದಾರೆ. ಹಂದಿಜೋಗಿಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವುದು, ಅನ್ಯಾಯವನ್ನು ಖಂಡಿಸುವುದು, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪಡೆಯುವುದು, ಮೂಢನಂಬಿಕೆಗಳ ಜಾಗೃತಿ, ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಸಮುದಾಯಕ್ಕೆ ಅಗತ್ಯವಿರುವ ಮೂಲಭೂತ ಅಗತ್ಯಗಳನ್ನು ಪಡೆಯುವ ಸಂಬಂಧ ವಿವಿಧ ಪ್ರಗತಿಪರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಶಾಖೆಯನ್ನು ಸಕ್ರಿಯಗೊಳಿಸಿದ್ದಾರೆ.
ಮಾತ್ರವಲ್ಲದೇ ಅಲೆಮಾರಿ ಸಮುದಾಯಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಎಲ್ಲಾ ಅವಕಾಶಗಳನ್ನು ಪಡೆಯುವಲ್ಲಿ ಹಂತಹಂತವಾಗಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ 50ಕ್ಕೂ ಹೆಚ್ಚು ಅಲೆಮಾರಿಗಳಿಗೆ ಮತದಾರರ ಚೀಟಿಯನ್ನು ಮಾಡಿಸಿದರು. ಜೊತೆಗೆ ಮತದಾನದ ಮಹತ್ತ್ವವನ್ನು ತಾವೇ ಸಾರಿದರು. ಬಡಬಗ್ಗರಿಗೆ ರೇಷನ್ ಕಾರ್ಡ್, ಪೆನ್ಷನ್, ಆಧಾರ್ ಕಾರ್ಡ್ ಮಾಡಿಸಿ ಕೊಡುವಲ್ಲಿ ನೆರವಾಗಿದ್ದಾರೆ. ಹೀಗೆ ಹೋರಾಟದ ಬದುಕನ್ನು ರೂಪಿಸಿಕೊಂಡ ರಾಮಕ್ಕ ಕೊಳಗೇರಿ ಹಿತರಕ್ಷಣಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷೆಯಾಗಿ ಹಾಗೂ ರಾಜ್ಯ ಸಂಚಾಲಕಿಯಾಗಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಾ ಬಂದಿದ್ದಾರೆ. ಸಾಮಾಜಿಕ ಬದಲಾವಣೆಯ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಾ 100ಕ್ಕೂ ಹೆಚ್ಚೂ ಅಂತರ್ಜಾತಿ ಹಾಗೂ ಅಂತರ್ ಧರ್ಮೀಯ ಜೋಡಿಗಳ ಸರಳ ವಿವಾಹ ಹಾಗೂ ರಿಜಿಸ್ಟರ್ ಮದುವೆ ಮಾಡಿಸಿದ್ದಾರೆ. ಅವರೆಲ್ಲರೂ ಉತ್ತಮ ಜೀವನ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರಾಮಕ್ಕ.
ನಗರೀಕರಣ ಆದಂತೆ ಹಂದಿಜೋಗಿಗಳ ಬದುಕು ತುಂಬ ಸವಾಲುಗಳನ್ನು ಎದುರಿಸುತ್ತಿದೆ. ಹಂದಿಜ್ವರದ ಹೆಸರಿನಲ್ಲಿ ಸಮುದಾಯದ ಮೇಲೆ ನಾನಾ ದೌರ್ಜನ್ಯಗಳು ನಡೆದು ಬಿಟ್ಟಿವೆ. ಈ ಹಿಂದೆ ಹೆಚ್1ಎನ್1 ಕಾಯಿಲೆ ಕಾಣಿಸಿಕೊಂಡಿತ್ತು. ಹೆಲ್ತ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ನೇತೃತ್ವದಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ಲಾರಿಗಳು ಬಂದು ಹಂದಿಗಳನ್ನು ತುಂಬಿಕೊಂಡು ಹೋಗಿಬಿಟ್ಟರು. `ಹಂದಿಗಳನ್ನೇ ನಂಬಿ ಬದುಕುವ ನಮ್ಮ ಬದುಕು ಏನಾಗಬೇಕು. ಹಂದಿಯಿಂದ ಕಾಯಿಲೆ ಉತ್ಪತ್ತಿಯಾಗುತ್ತಿದ್ದರೆ ಮೊದಲು ನಮಗೆ ಬರಬೇಕಿತ್ತಲ್ಲವಾ! ಯಾಕೆ ಇಂಥಾ ಅನ್ಯಾಯ ಮಾಡುತ್ತೀರಾ?’ ಎಂದು ಪ್ರತಿಭಟಿಸಿದ ಅವರ ಮೇಲೆ ಸಿಕ್ಕಸಿಕ್ಕ ಕೇಸುಗಳನ್ನು ಫಿಟ್ ಮಾಡಿದರು. ಆದರೆ ಸಂಘಟನೆಗಳ ಬೆಂಬಲದಿಂದ ಹೋರಾಡಿ ಎಲ್ಲದನ್ನೂ ಗೆಲ್ಲುವ, ಪರಿಹಾರ ಹುಡುಕುವ ಹಂಬಲವನ್ನು ಇವತ್ತಿಗೂ ಉಳಿಸಿಕೊಂಡಿದ್ದಾರೆ ಅನಕ್ಷರಸ್ಥೆಯಾಗಿರುವ ರಾಮಕ್ಕ.
ಅವರ ದಿಟ್ಟ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಿದೆ. ಮಕ್ಕಳಿಗೆ ಶಿಕ್ಷಣ ಒದಗಿಸಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನು ಮನೆಬಾಗಿಲಿಗೇ ತಲುಪಿಸಿದ್ದಾರೆ. ಇಂದೂ ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಾರೆ, ಎಲ್ಲಾ ಸಾಂವಿಧಾನಿಕ ಹಕ್ಕು ಮತ್ತು ಅವಕಾಶಗಳನ್ನು ಪಡೆಯಲು ಸಂಘಟನೆ ಕಟ್ಟುತ್ತಾರೆ. ಮುಖ್ಯವಾಗಿ ಅಲೆಮಾರಿ ಸಮುದಾಯಗಳಾದ ಗೊಂದಳಿ, ಹೆಳವ, ದೊಂಬಿದಾಸ, ಸೋಲಿಗರು, ದರವೇಶಿ, ಪಿಂಜಾರ, ಮೊಂಡರು, ಹಾವಾಡಿಗ, ದಕ್ಕಲಿಗರು, ರಾಜಗೊಂಡ, ಬುಡ್ಗಜಂಗಮ, ಸುಡುಗಾಡು ಸಿದ್ಧರು, ಹಂದಿಜೋಗಿ, ಶಿಳ್ಳೆಕ್ಯಾತ, ಕೊರಮ, ಗಂಟಿಚೋರ್, ದೊಂಬರು ಸೇರಿದಂತೆ ಒಟ್ಟು 37 ಅಲೆಮಾರಿ ಜಾತಿಗಳಿಗೆ ಮತದಾನದ ಹಕ್ಕು ಕಲ್ಪಿಸುವಲ್ಲಿ ರಾಮಕ್ಕನವರ ಶ್ರಮ ಅಪಾರ.
ಅವರ ಹೋರಾಟಗಳಿಗೆ ಪೊಲೀಸ್ ಅಧಿಕಾರಿಗಳೇ ಮಣಿದದ್ದುಂಟು. ಪಾಲಿಕೆಯವರು ಹಂದಿಗಳನ್ನು ರಾತ್ರೋರಾತ್ರಿ ಹಿಡಿದು ಲಾರಿಗಳಲ್ಲಿ ತುಂಬಿಸಿ ಕಳಿಸಿದಾಗ ಪರಿಹಾರಕ್ಕೆ ಬೇಡಿಕೆ ಇಟ್ಟರು. ಅದಕ್ಕೆ ಸ್ಪಂದಿಸದಿದ್ದಾಗ ಕಾನೂನು ಬಾಹಿರವಾಗಿ ಗಡಿಪಾರು ಮಾಡಿರುವ ಹಂದಿಗಳನ್ನು ಹುಡುಕಿಕೊಡಿ ಎಂದು ಠಾಣೆಗೆ ದೂರು ನೀಡಿದರು. ಅದು ಪ್ರಯೋಜನವಾಗದೇ ಇದ್ದಾಗ ಪ್ರಧಾನಿಗೇ ನ್ಯಾಯ ಕೇಳಿ ಪತ್ರ ಬರೆಸಿದರು.
ರಾಮಕ್ಕನ ಈ ಎಲ್ಲಾ ಹೋರಾಟಗಳಿಗೆ ಒಂದು ಚೌಕಟ್ಟು ನೀಡಲು ಕರ್ನಾಟಕ ರಾಜ್ಯ ಮಹಿಳಾ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ಮಹಾಸಭಾ ರೂಪುಗೊಂಡಿದೆ. ಅದರ ಮೂಲಕ ಈಗ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಬಾಬಾಸಾಹೇಬ್ ಅಂಬೇಡ್ಕರರ ಚಿಂತನೆಯನ್ನು ಬದುಕಾಗಿಸಿಕೊಂಡ ಇವರು ನಮ್ಮೆಲ್ಲರ ಮಾದರಿಯೆನಿಸಿದ್ದಾರೆ. ಸಂಘರ್ಷದ ಹಾದಿಯಲ್ಲಿ ಅರಳಿದ ರಾಮಕ್ಕ ನಮ್ಮ ಅಕ್ಕ, ನಮ್ಮ ಹಿರಿಮೆಯಾಗಿದ್ದಾರೆ.
ಕವಿತಾ ಕಮ್ಮನಕೋಟೆ
ಪತ್ರಕರ್ತರು