ಗೋಧ್ರಾ, ಜ.22: ಬಿಲ್ಕಿಸ್ ಬಾನೊ ಪ್ರಕರಣದ ಎಲ್ಲಾ 11 ಅಪರಾಧಿಗಳು ಗುಜರಾತ್ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಕಾರಾಗೃಹದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಗಡುವಿಗೆ ಅನುಗುಣವಾಗಿ ಶರಣಾಗಿದ್ದಾರೆ.
11 ಅಪರಾಧಿಗಳು ಭಾನುವಾರ ತಡರಾತ್ರಿ ಜೈಲು ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಎನ್ಎಲ್ ದೇಸಾಯಿ ತಿಳಿಸಿದ್ದಾರೆ.
ಶರಣಾಗಲು ನಿಗದಿಪಡಿಸಿದ್ದ 21ರ ತಡ ರಾತ್ರಿ ಹನ್ನೆರಡು ಗಂಟೆಗೆ ಒಂದಷ್ಟು ಹೊತ್ತಿರುವಾಗ ಅಪರಾಧಿಗಳೆಲ್ಲರೂ ಶರಣಾದರು ಎಂದು ದೇಸಾಯಿ ತಿಳಿಸಿದರು.
ಜನವರಿ 8ರಂದು ಉನ್ನತ ನ್ಯಾಯಾಲಯವು ಗುಜರಾತ್ ಸರ್ಕಾರವು 11 ಅಪರಾಧಿಗಳಿಗೆ ನೀಡಿದ್ದ ವಿನಾಯತಿಯನ್ನು ರದ್ದುಗೊಳಿಸಿತು. ಜೊತೆಗೆ ರಾಜ್ಯ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಪರಾಧಿಗಳಿಗೆ ಸಹಕರಿಸಿದೆ ಎಂದು ಕೋರ್ಟ್ ಛೀಮಾರಿ ಹಾಕಿತ್ತು.
2022ರ ಸ್ವಾತಂತ್ರ್ಯ ದಿನದಂದು ಅಕಾಲಿಕವಾಗಿ ಬಿಡುಗಡೆಯಾದ ಅಪರಾಧಿಗಳನ್ನು ಎರಡು ವಾರಗಳಲ್ಲಿ ಶರಣಾಗುವಂತೆ ಆದೇಶಿಸಿತ್ತು.
ಶರಣಾಗತಿಗೆ ಹೆಚ್ಚಿನ ಸಮಯಾವಕಾಶ ನೀಡುವಂತೆ ಅಪರಾಧಿಗಳ ಮನವಿಯನ್ನು ಶುಕ್ರವಾರ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಭಾನುವಾರದೊಳಗೆ ಶರಣಾಗುವಂತೆ ತಿಳಿಸಿತ್ತು.
ಆ 11 ಅಪರಾಧಿಗಳೆಂದರೆ ಬಕಾಭಾಯಿ ವೋಹಾನಿಯಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಗೋವಿಂದ್ ನಾಯ್, ಜಸ್ವಂತ್ ನಾಯ್, ಮಿತೇಶ್ ಭಟ್, ಪ್ರದೀಪ್ ಮೋರ್ಧಿಯಾ, ರಾಧೇಶ್ಯಾಮ್ ಶಾ, ರಾಜುಭಾಯ್ ಸೋನಿ, ರಮೇಶ್ ಚಂದನಾ ಮತ್ತು ಶೈಲೇಶ್ ಭಟ್.
ಫೆಬ್ರವರಿ 2002ರಲ್ಲಿ ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಕೋಮು ಗಲಭೆಗಳ ಭಯಾನಕತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಬಿಲ್ಕಿಸ್ ಬಾನೋ 21 ಅವರಿಗೆ ವರ್ಷ ಮತ್ತು ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಆಕೆಯ ಮೂರು ವರ್ಷದ ಮಗಳು ಏಳು ಅಂದು ಕೊಲೆಯಾದ ಏಳು ಮಂದಿಯಲ್ಲಿ ಸೇರಿದ್ದಳು. ಕುಟುಂಬ ಸದಸ್ಯರು ಸಹ ಅಂದು ಕೊಲ್ಲಲ್ಪಟ್ಟರು.
ಆಗಸ್ಟ್ 15, 2022ರಂದು, ಜೀವಾವಧಿ ಶಿಕ್ಷೆಯ ಭಾಗವಾಗಿ 14 ವರ್ಷಗಳನ್ನು ಜೈಲಿನಲ್ಲಿ ಕಳೆದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ತನ್ನ 1992ರ ನೀತಿಗೆ ಅನುಗುಣವಾಗಿ ಅವರ ಕ್ಷಮಾದಾನ ಅರ್ಜಿಗಳನ್ನು ಸ್ವೀಕರಿಸಿದ ನಂತರ ಅಕಾಲಿಕವಾಗಿ ಬಿಡುಗಡೆ ಮಾಡಲಾಯಿತು. .
11 ಅಪರಾಧಿಗಳು ಪಂಚಮಹಲ್ ಬಳಿಯ ದಾಹೋದ್ ಜಿಲ್ಲೆಯ ಸಿಂಗ್ವಾಡ್ ತಾಲೂಕಿನ ಸಿಂಗ್ವಾಡ್ ಮತ್ತು ರಂಧಿಕ್ಪುರ್ ಗ್ರಾಮದ ನಿವಾಸಿಗಳು.
ಕ್ಷಮಾದಾನ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದರಿಂದ ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ನೀಡಲು ಗುಜರಾತ್ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ತೀರ್ಪು ನೀಡಿತ್ತು.
ಸುಪ್ರೀಂ ಆದೇಶದ ಕೆಲವು ದಿನಗಳ ನಂತರ, ದೋಷಿಗಳು ಆರೋಗ್ಯ ವೈಫಲ್ಯ, ಮುಂಬರುವ ಶಸ್ತ್ರಚಿಕಿತ್ಸೆ, ಮಗನ ಮದುವೆ ಮತ್ತು ಮಾಗಿದ ಬೆಳೆಗಳನ್ನು ಕೊಯ್ಲು ಮಾಡುವಂತಹ ವಿವಿಧ ಆಧಾರದ ಮೇಲೆ ಶರಣಾಗಲು ಹೆಚ್ಚಿನ ಸಮಯವನ್ನು ಕೋರಿ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಉಲ್ಲೇಖಿಸಿದ ಕಾರಣಗಳು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ತಿಳಿಸಿದೆ.