ದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ಗುರುವಾರ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ತಮ್ಮ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯನ್ನು ಭೇಟಿಯಾಗಲು ಅನುಮತಿ ನೀಡುವವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಸಿಸೋಡಿಯಾ ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಭೇಟಿಯಾಗಲು ಅವಕಾಶ ನೀಡುವಂತೆ ಕೋರಿದ್ದರು. ಇದಕ್ಕೂ ಮೊದಲು ಜೂನ್ನಲ್ಲಿ, ದೆಹಲಿ ಹೈಕೋರ್ಟ್ ಸಿಸೋಡಿಯಾ ಅವರ ಪತ್ನಿಯನ್ನು ಮಥುರಾ ರಸ್ತೆಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಒಂದು ದಿನದ ಮಟ್ಟಿಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಭೇಟಿ ಮಾಡಲು ಅನುಮತಿ ನೀಡಿತ್ತು. ಅಂದಿನಿಂದ ಸಿಸೋಡಿಯಾ ತನ್ನ ಪತ್ನಿಯನ್ನು ಭೇಟಿ ಮಾಡಿಲ್ಲ.
ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಅಕ್ಟೋಬರ್ನಲ್ಲಿ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆಯ ನಂತರ ನ್ಯಾಯಾಲಯವು ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ನವೆಂಬರ್ 22ರವರೆಗೆ ವಿಸ್ತರಿಸಿದೆ. ರೂಸ್ ಅವೆನ್ಯೂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಮನೀಶ್ ಸಿಸೋಡಿಯಾ ಕೂಡ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂಬುದು ಗಮನಾರ್ಹ. ಈ ಅರ್ಜಿಯ ಕುರಿತು ಕಳೆದ ಎರಡು ತಿಂಗಳಿಂದ ತನಿಖೆ ನಡೆಯುತ್ತಿದೆ. ಈ ನಡುವೆ, ಇಡಿ ಮತ್ತು ಸಿಬಿಐ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಹಲವಾರು ವಾದಗಳೊಂದಿಗೆ ವಿರೋಧಿಸಿದವು.
ಫೆಬ್ರವರಿ 26ರಂದು ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು ಮತ್ತು ನಂತರ ಮಾರ್ಚ್ 9ರಂದು ಇಡಿ ಅವರನ್ನು ತಿಹಾರ್ ಜೈಲಿನಿಂದ ಮತ್ತೆ ಬಂಧಿಸಿತು. ಅಂದಿನಿಂದ ಮನೀಶ್ ಸಿಸೋಡಿಯಾ ಎರಡು ಪ್ರಕರಣಗಳಲ್ಲಿ ತಿಹಾರ್ ಜೈಲಿನಲ್ಲಿದ್ದಾರೆ. ಈ ವೇಳೆ ಅವರ ಜಾಮೀನಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೆಳ ನ್ಯಾಯಾಲಯದಿಂದ ಮೇಲಿನ ನ್ಯಾಯಾಲಯದವರೆಗೆ ನಡೆಯುತ್ತಿದೆ. ಇದುವರೆಗೆ ಅಬಕಾರಿ ಹಗರಣ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಆದರೆ ಮನೀಶ್ ಸಿಸೋಡಿಯಾಗೆ ಇನ್ನೂ ಜಾಮೀನು ಸಿಕ್ಕಿಲ್ಲ.