ಬೆಂಗಳೂರು: ನೊಂದ ಜನರು ಮೂರು ದಶಕಗಳಿಂದ ಒಳಮೀಸಲಾಗಿ ಹೋರಾಟ ನಡೆಸುತ್ತಿದ್ದು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಹಂಚಿ ತಿನ್ನುವುದು ಅಂಬೇಡ್ಕರ್ ವಾದ – ಕಿತ್ತು ತಿನ್ನುವುದು ಮನುವಾದ, ಜೈ ಮಾದಿಗ ಎಂಬ ಘೋಷಣೆಗಳೊಂದಿಗೆ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭೀಮಸಾಗರ ಹರಿದು ಬಂದಿತ್ತು.
ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ಬಳಿ ʼಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಟ ಸಮಿತಿʼ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶಕ್ಕೆ ಸಾವಿರಾರು ಜನರ ಸಾಗರ ಹರಿದು ಬಂದಿದ್ದು, ಈ ಚಂಡಮಾರುತದ ಕೊರಿವ ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಕ್ತವನ್ನು ಚೆಲ್ಲುತ್ತೇವೆ-ಒಳಮೀಸಲಾತಿ ಪಡೆಯುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ರವರ ನೇತೃತ್ವದಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯು ನವೆಂಬರ್ 28ರಿಂದ ಶುರುವಾಗಿದ್ದು, ಹರಿಹರದಲ್ಲಿರುವ ದಸಸಂ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಚೈತ್ಯ ಭೂಮಿಯಿಂದ ಹೊರಟಿದ್ದ ನೂರಕ್ಕೂ ಹೆಚ್ಚು ಪಾದಯಾತ್ರಿಗಳು ಇಂದಿನ ಸಮಾವೇಶಕ್ಕೆಂದು ಸಮಾವೇಶ ಶುರುವಾಗುವುದಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಿಂದ ಹೊರಟ ಮೆರವಣಿಯಲ್ಲಿ ಸೇರಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಅಂಬಣ್ಣ ಅರೋಲಿಕರ್ ಅವರು, ʼನೊಂದ ಜನರು ಮೂರು ದಶಕದಿಂದ ಒಳಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ ಮೂರೂ ಪಕ್ಷಗಳು ಕೇವಲ ಈ ಬಗ್ಗೆ ಆಶ್ವಾಸನೆ ಮಾತ್ರ ನೀಡಿದೆ ಹೊರತೂ ಈವರೆಗೂ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ನಂತರ ಕೇಂದ್ರ ಸರ್ಕಾರ ಸಂವಿಧಾನ ಅನುಚ್ಛೇದ 341(3)ಗೆ ತಿದ್ದುಪಡಿ ಮಾಡಬೇಕು. ಈ ಬಗ್ಗೆ ನಿಮ್ಮ ಸುಳ್ಳು ಭರವಸೆಗಳು ಸಾಕು , ಚುನಾವಣೆ ಹತ್ತಿರ ಬರುತ್ತಿದೆ . ಈಗ ನಾವು ಚುನಾವಣೆಯಲ್ಲಿ ನಾವು ಯಾರಿಗೆ ಮತ ಹಾಕಬೇಕೆಂದು ನಿರ್ಧಾರ ಮಾಡುವ ಸಮಯ. ಭರವಸೆಗಳು ಕಾರ್ಯರೂಪಕ್ಕೆ ಬರದಿದ್ದರೆ ಚುನಾವಣೆಯಲ್ಲಿ ನೋಟಾ ಒತ್ತಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೊನೆಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ನಮ್ಮ ಹಕ್ಕೊತ್ತಾಯಗಳನ್ನು ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಈ ತಿಂಗಳಿಡೀ ಹೋರಾಟ ನಡೆಸುತ್ತೇವೆ ಎಂದು ಕಿಡಿಕಾರಿದ್ದಾರೆ.