Friday, June 14, 2024

ಸತ್ಯ | ನ್ಯಾಯ |ಧರ್ಮ

ಎರಡು ವರ್ಷ ಪೂರೈಸಿದ `ಅಂಬೇಡ್ಕರ್ ಓದು’

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ ಮುನ್ನಡೆದಿದೆ. ಈತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ, ಈಗ ಅಂಬೇಡ್ಕರ್ ಚಿಂತನೆಗಳನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ವಿಶೇಷವಾಗಿದೆ.

 500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ರಾಜಕಾರಣಿ ಶ್ರೀಮತಿ ಮೋಟಮ್ಮ, ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಸಭಿಹಾ ಲೇಖಕರಾದ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಹೀಗೆ ಸಾಹಿತಿಗಳು, ಪತ್ರಕರ್ತರು, ನಟ ನಟಿಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.

2019 ರ ಏಪ್ರಿಲ್ 14 ರಂದು ನನ್ನ ಪೇಸ್ ಬುಕ್ ಪೇಜಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದೆ. ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಆಗ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ, ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು. ನಾನು ನೆಪಮಾತ್ರನಾಗಿದ್ದು `ಇದು ಸಹಭಾಗಿತ್ವದ ಯಶಸ್ಸು, `ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ.

ಡಾ. ಬಿ.ಆರ್‌ ಅಂಬೇಡ್ಕರ್‌ ಮತ್ತು ಅರುಣ್ ಜೋಳದಕೂಡ್ಲಿಗಿ

 ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ. ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ.

Related Articles

ಇತ್ತೀಚಿನ ಸುದ್ದಿಗಳು