ಚಿಕ್ಕಮಗಳೂರು: ಲವ್ ಜಿಹಾದ್ ಆರೋಪ ಹೋರಿಸಿ ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲೇ ಯುವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮುಸ್ಲಿಂ ಹುಡುಗ ಜಾಫರ್-ಹಿಂದೂ ಹುಡಗಿ ಚೈತ್ರಾ ಎಂಬುವರು ಮದುವೆಗೆ ಮುಂದಾಗಿದ್ದ ವೇಳೆ, ಮುಸ್ಲಿಂ ಯುವಕನ ಮೇಲೆ ಲವ್ ಜಿಹಾದ್ ಆರೋಪ ಹೊರಿಸಿದ ಹಿಂದುತ್ವ ಸಂಘಟನೆ ಕಾರ್ಯಕರ್ತರು ವಿವಾಹಕ್ಕೆ ತಡೆಯೊಡ್ಡಿದ್ದು, ಆತನಿಗೆ ಅವಾಚ್ಯ ಪದಗಳಿಂದ ನಿಂದಿಸಿ, ನಿನಗೆ ಹಿಂದೂ ಹುಡುಗಿ ಬೇಕಾ ಎಂದು ಆತನನ್ನು ಥಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಚೈತ್ರಾ ಅವರು, ನಾವಿಬ್ಬರು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇಬ್ಬರು ಇಷ್ಟಪಟ್ಟೆ ಮದುವೆಯಾಗುತ್ತಿದ್ದೇವೆ, ಮುಂದೆ ಚನ್ನಾಗಿ ಬಾಳುತ್ತೇವೆ ಅದನ್ನು ಕೇಳುವುದಕ್ಕೆ ಇವರುಗಳೆಲ್ಲಾ ಯಾರು ಎಂದು ಭಜರಂಗದಳದ ಕಾರ್ಯಕರ್ತರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ, ಆ ದಿನ ಭಜರಂಗದಳದ ಕಾರ್ಯಕರ್ತರು ನನಗೆ ಏನಾದರು ಮಾಡುತ್ತಾರೆ ಎಂದು ಪೊಲೀಸರು ನನ್ನನ್ನು ಮನೆಗೆ ಕಳಿಸಲಿಲ್ಲ, ಅದರ ಬದಲು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು ಮತ್ತು ಹಲ್ಲೆ ಮಾಡಿ ಅವಾಚ್ಯಾವಾಗಿ ನಿಂದನೆ ಮಾಡಿದವರ ಮೇಲೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳದೆ ಹಾಗೆ ಕಳುಹಿಸಿದರು ಎಂದು ಚೈತ್ರಾ ಪೊಲೀಸ್ ಇಲಾಖೆ ವಿರುದ್ಧ ಅಸಮಧಾನಗೊಂಡರು.
ನಂತರ ಮಾಧ್ಯಮದವರ ಮುಂದೆಯೇ ಹಲ್ಲೆ ನಡೆದ ಸ್ಥಳವಾದ ಚಿಕ್ಕಮಗಳೂರಿನ ಸಬ್ ರಿಜಿಸ್ಟ್ರಾರ್ ಕಛೇರಿ ಎದುರಲ್ಲೇ ಹಾರ ಬದಲಿಸುಕೊಂಡು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.