ಹೊಸದಿಲ್ಲಿ: ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ ಅವರಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ( NIA ) ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇಂದು ಮಹತ್ವದ ತೀರ್ಪು ನೀಡಿ, ಬಾಂಬೆ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.
ಜಾಮೀನು ನೀಡುವ ಸಂದರ್ಭದಲ್ಲಿ ಬಾಂಬೆ ಹೈಕೋರ್ಟ್ ಮಾಡಿರುವ ಟಿಪ್ಪಣಿಯು, ಈ ಪ್ರಕರಣದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಪೀಠ ಹೇಳಿದೆ.
2018ರಲ್ಲಿ ನಡೆದ ಭೀಮಾ ಕೋರೆಗಾವ್ ಹಿಂಸಾಚಾರದಲ್ಲಿ ಆನಂದ್ ತೇಲ್ತುಂಬ್ಡೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿ, ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿದ್ದು, ಹಲವಾರು ಮಾನವ ಹಕ್ಕು ಹೋರಾಟಗಾರರು, ದಲಿತರ ಹಕ್ಕುಗಳ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಿದೆ. 2017ರ ಡಿಸೆಂಬರ್ ನಲ್ಲಿ ನಡೆದ ಎಲ್ಗಾರ್ ಪರಿಷತ್ ಕಾರ್ಯಕ್ರಮದಲ್ಲಿ ತೇಲ್ತುಂಬ್ಡೆ ಮತ್ತು ಇತರರು ಪ್ರಚೋದನಾಕಾರಿ ಭಾಷಣ ಮಾಡಿದ್ದರಿಂದಾಗಿ 2018ರ ಜ.1ರಂದು ಹಿಂಸಾಚಾರ ಸಂಭವಿಸಿತ್ತು ಎಂದು NIA ಆರೋಪಿಸಿ ಮೊಕದ್ದಮೆ ಹೂಡಿದೆ.
ಹೋರಾಟಗಾರರು, ವಿದ್ವಾಂಸರೂ ಆದ ಆನಂದ್ ತೇಲ್ತುಂಬ್ಡೆ ಕಳೆದ ವರ್ಷ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ NIA ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಆನಂದ್ ತೇಲ್ತುಂಬ್ಡೆ ಅವರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಸದಸ್ಯರಾಗಿರುವ ಕಾರಣಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಬಾಂಬೆ ಹೈಕೋರ್ಟ್ ಜಾಮೀನು ಅರ್ಜಿ ಕುರಿತಂತೆ ವಿಸ್ತ್ರತ ವಿಚಾರಣೆ ನಡೆಸಿ, ಕಳೆದ ನವೆಂಬರ್ 18ರಂದು ಜಾಮೀನು ನೀಡಿತ್ತು. ತೇಲ್ತುಂಬ್ಡೆ ಅವರ ಮೇಲೆ ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಕುರಿತಂತೆ ಮೇಲ್ನೋಟಕ್ಕೆ ಕಾಣುವಂಥ ಯಾವುದೇ ಸಾಕ್ಷಿಗಳಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ತೇಲ್ತುಂಬ್ಡೆಯವರ ವಿರುದ್ಧ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವುವುದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 38, 39 ರ ಅನ್ವಯ ಪ್ರಕರಣಗಳು ಕಂಡುಬಂದಿವೆಯೇ ಹೊರತು ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಕುರಿತು ಯಾವುದೇ ಸಾಕ್ಷಿ ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು. ಸೆಕ್ಷನ್ 38. 39ರ ಪ್ರಕರಣಗಳಲ್ಲಿ ಅತಿಹೆಚ್ಚು ಎಂದರೆ ಹತ್ತು ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಆನಂದ್ ತೇಲ್ತುಂಬ್ಡೆ ಅವರು ಈಗಾಗಲೇ ಎರಡು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಒಂದು ಲಕ್ಷ ರುಪಾಯಿಗಳ ಶ್ಯೂರಿಟಿ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿತ್ತು.
ಹೈಕೋರ್ಟ್ ಆದೇಶದ ವಿರುದ್ಧ NIA ಮೇಲ್ಮನವಿ ಸಲ್ಲಿಸಲು ಒಂದು ವಾರದ ಕಾಲಾವಕಾಶವನ್ನು ಬಾಂಬೆ ಹೈಕೋರ್ಟ್ ನೀಡಿತ್ತು. ನಂತರ NIA ಈ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ, ಬಾಂಬೆ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಮಿನಿ ಟ್ರಯಲ್ ರೀತಿಯಲ್ಲಿ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.
ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ತನಿಖೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಐದು ಪ್ರಮುಖ ದಾಖಲೆಗಳನ್ನು ಅತಿಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆಯಲ್ಲದೆ, ತನಿಖಾ ಸಂಸ್ಥೆ ಪಡೆದ ಹೇಳಿಕೆಗಳನ್ನು ಪರಿಶೀಲಿಸಿದೆ. ಈ ದಾಖಲೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ತನ್ನ ಅಭಿಪ್ರಾಯಗಳನ್ನು ಹೇಳಿರುವುದರಿಂದ ಪ್ರಕರಣದ ವಿಚಾರಣೆ ಮತ್ತು ತನಿಖೆಯ ಮೇಲೆ ಪರಿಣಾಮ ಬೀರಿದಂತಾಗಿದೆ ಎಂದು NIA ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಆನಂದ್ ತೇಲ್ತುಂಬ್ಡೆಯವರಿಗೆ ಜಾಮೀನು ನೀಡಿದರೆ, NIA ಇದುವರೆಗೆ ಮಾಡಿದ ಎಲ್ಲ ಪ್ರಯತ್ನಗಳಿಗೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ ಎಂದು ಅದು ಹೇಳಿತ್ತು.
ಇಂದು NIA ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಐಶ್ವರ್ಯಾ ಭಾಟಿ, ತೇಲ್ತುಂಬ್ಡೆ ಅವರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳಿಂದಾಗಿ ಅವರು ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನ ನಡೆಸಿದ್ದರು ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದಿಸಿದರು, ಒಂದು ಪತ್ರ ನಕ್ಸಲ್ ಬಾರಿ ಚಳವಳಿಯನ್ನು ಸಂಭ್ರಮಿಸಿ ಎಂದು ಹೇಳುತ್ತದೆ, ಇದಕ್ಕೆ ಪೂರಕವಾಗಿ ತೇಲ್ತುಂಬ್ಡೆಯವರು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
UAPA ಅಡಿಯಲ್ಲಿ ಮೊಕದ್ದಮೆ ದಾಖಲಿಸಲು ಇರುವ ಸ್ಪಷ್ಟ ಕಾರಣಗಳನ್ನು ತಿಳಿಸಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದಾಗ, ಅವರು ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದೇ ಇದ್ದರೂ ನಿಷೇಧಿಸಿದ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿ ಇದ್ದಿದ್ದು ಕೂಡ ಅಪರಾಧ ಎಂದು ಐಶ್ವರ್ಯಾ ಹೇಳಿದರು. ನಂತರ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ, NIA ಅರ್ಜಿಯನ್ನು ವಜಾಗೊಳಿಸಿ, ಬಾಂಬೆ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು.