ಅಮರಾವತಿ: ವೈಎಸ್ಆರ್ಸಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಇದೇ ಮಾರ್ಚ್ 27ರಂದು ಕಡಪ ಜಿಲ್ಲೆಯಿಂದ 21 ದಿನಗಳ ‘ಮೇಮಂತ ಸಿದ್ದಂ’ (ನಾವೆಲ್ಲರೂ ಸಿದ್ಧರಿದ್ದೇವೆ) ಯಾತ್ರೆಯನ್ನು ಪ್ರಾರಂಭಿಸುವ ಮೂಲಕ ಲೋಕಸಭಾ ಹಾಗೂ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಕಡಪ ಜಿಲ್ಲೆಯ ಇಡುಪುಲುಪಾಯದಿಂದ ಪ್ರಚಾರ ಆರಂಭವಾಗಲಿದ್ದು, ಅಂದೇ ಪ್ರದ್ದತ್ತೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡನೇ ದಿನ ನಂದ್ಯಾಲ ಲೋಕಸಭಾ ಕ್ಷೇತ್ರಕ್ಕೆ ಬಸ್ ಯಾತ್ರೆಯು ಪ್ರವೇಶಿಸಲಿದೆ. ಈ ವೇಳೆ ಅನೇಕ ಸಮುದಾಯಗಳ ಜನರ ಜತೆ ಜಗನ್ ಮಾತನಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
‘ಮೇಮಂತ ಸಿದ್ದಂ’ ಯಾತ್ರೆಯು ಮೂರನೇ ದಿನ ಕರ್ನೂಲ್ ಲೋಕಸಭಾ ಕ್ಷೇತ್ರವನ್ನು ಪ್ರವೇಶಿಸಲಿದೆ. ವಿವಿಧ ಸಮುದಾಯಗಳ ಜನರೊಂದಿಗೆ ಸಂವಾದ ನಡೆಸಲಿದ್ದು, ಈ ವೇಳೆ ರಾಜ್ಯ ಸರ್ಕಾರದ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಜನರಿಂದ ಸಲಹೆಗಳನ್ನು ಪಡೆಯಲಾಗುವುದು. ಯಾತ್ರೆ ಸಾಗುವ ಹಾದಿಯಲ್ಲಿ ರಾತ್ರಿ ವೇಳೆ ಜನರೊಂದಿಗೆ ಜಗನ್ ತಂಗಲಿದ್ದಾರೆ.
ಇತ್ತೀಚೆಗೆ ಕೈಗೊಂಡಿದ್ದ ಬೃಹತ್ ‘ಸಿದ್ದಂ’ ಚುನಾವಣಾ ಪ್ರಚಾರ ರ್ಯಾಲಿ ನಡೆದಿದ್ದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ‘ಮೇಮಂತ ಸಿದ್ದಂ’ಯಾತ್ರೆಯು ಸಾಗಲಿದೆ. ಈಗಾಗಲೇ ಯಾತ್ರೆಯ ವಿನ್ಯಾಸ ಸಿದ್ದಗೊಂಡಿದೆ ಎಂದು ಜಗನಮೋಹನರೆಡ್ಡಿಯವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.