ತುಮಕೂರು: ಕಳೆದ ವಿಧಾನಸಭೆ ಸೋಲಿನ ನಂತರ ಲೋಕಸಭೆಗೆ ಸ್ಪರ್ಧಿಸಲು ಸಜ್ಜಾಗಿದ್ದ ಬಿಜೆಪಿ ಮಾಜಿ ಸಚಿವ ಮಾಧುಸ್ವಾಮಿಯವರಿಗೆ ಈ ಸಲ ಬಿಜೆಪಿಯಿಂದ ಟಿಕೇಟ್ ಕೈ ತಪ್ಪಿದೆ. ಅಸಮಾಧಾನಗೊಂಡಿರುವ ಮಾಧುಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ.
ಮಾಧುಸ್ವಾಮಿ ಕಾಂಗ್ರೆಸ್ಗೆ ಬಂದರೆ ನಿಯೋಜಿತ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಬದಲಾಗಿ ಮಾಧುಸ್ವಾಮಿಯವರನ್ನೇ ಕಣಕ್ಕೆ ಇಳಿಸುವ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚಿಂತನೆ ನಡೆದಿದೆ. ಲೋಕಸಭೆಗೆ ಟಿಕೆಟ್ ಕೊಡುವುದಾದರೆ ಪಕ್ಷ ಸೇರುವುದಾಗಿ ಮಾಧುಸ್ವಾಮಿ ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
ಮಾಧುಸ್ವಾಮಿಯವರು ಲೋಕಸಭೆ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡುವುದಕ್ಕೆ ತೀವ್ರ ವಿರೋಧ ಸಹ ವ್ಯಕ್ತಪಡಿಸಿದ್ದರು. ಜಿಲ್ಲೆಯವರನ್ನು ಬಿಟ್ಟು ಹೊರಗಿನವರಿಗೆ ಹೇಗೆ ಅವಕಾಶ ಕೊಡುತ್ತಿರಿ ಎಂದು ಬಹಿರಂಗವಾಗಿಯೆ ಬಿಜೆಪಿ ವರಿಷ್ಠರನ್ನು ಪ್ರಶ್ನಿಸಿದ್ದರು. ಸೋಮಣ್ಣ ಹೆಸರು ಪ್ರಕಟವಾಗುತ್ತಿದ್ದಂತೆ ಮತ್ತಷ್ಟು ಆಕ್ರೋಶ ಹೊರ ಹಾಕಿದ್ದರು. ಸೋಮಣ್ಣ ಅವರು ಮನವೊಲಿಸಲು ಮನೆಗೆ ಬರಲು ಸಿದ್ದರಾದಾಗ ಮಾಧುಸ್ವಾಮಿ ಕುಪಿತರಾಗಿ ತಮ್ಮ ಮನೆಗೆ ಬರುವುದು ಬೇಡ ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದರು ಎನ್ನಲಾಗಿದೆ.
ಇದೇ ಅವಕಾಶವನ್ನು ಬಳಸಿಕೊಂಡ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೂರವಾಣಿ ಮೂಲಕ ಸಂಪರ್ಕಿಸಿ ಆಹ್ವಾನ ನೀಡಿದ್ದಾರೆ. ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮಾಧುಸ್ವಾಮಿಯವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತಿತರ ನಾಯಕರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದಲ್ಲಿರುವ ಮಾಧುಸ್ವಾಮಿ ಮನೆಗೆ ಸೋಮವಾರ ರಾತ್ರಿ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ‘ಇಷ್ಟೆಲ್ಲ ಆದಮೇಲೆ ನಿಮ್ಮ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಇರುವುದಿಲ್ಲ’ ಎಂದು ನೇರವಾಗಿಯೇ ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
‘ಒಂದೆರಡು ದಿನ ಕಾದು ನೋಡಿ. ಎಲ್ಲವೂ ಒಳ್ಳೆಯದೇ ಆಗಲಿದೆ’ ಎಂದು ತಮ್ಮ ಬೆಂಬಲಿಗರು, ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಮುದ್ದಹನುಮೇಗೌಡ ಅವರಿಗೆ ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟು, ಮಾಧುಸ್ವಾಮಿ ಅವರಿಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ ನಡೆದಿದೆ ಎನ್ನಲಾಗಿದೆ.