ಕಾಂಗ್ರೆಸ್ ಸರಕಾರದ ಮಹತ್ವದ ಗ್ಯಾರಂಟಿ ಯೋಜನೆ ‘ಅನ್ನಭಾಗ್ಯ’ ಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಹಿಂದೇಟು ಹಾಕಿದ ಪರಿಣಾಮ ಇನ್ನೇನು ಯೋಜನೆ ನೆನೆಗುದಿಗೆ ಬಿತ್ತು ಅಂತಲೇ ಕಾಂಗ್ರೆಸ್ ಪಕ್ಷದ ವಿರೋಧಿಗಳು ಆಡಿಕೊಂಡಿದ್ದರು. ಆದರೆ ಅಂದುಕೊಂಡ ಸಮಯಕ್ಕೆ ಅಕ್ಕಿ ವಿತರಣೆ ಮಾಡೇ ತೀರುತ್ತೇವೆ ಎಂದ ಸರ್ಕಾರ ಅಂತೂ ಅಕ್ಕಿಯ ಕೊರತೆಯ ಹಿನ್ನೆಲೆಯಲ್ಲಿ ಕಾರ್ಡುದಾರರ ಕುಟುಂಬಕ್ಕೆ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬಾಬ್ತು ಹಣ ನೀಡುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಸರ್ಕಾರದ ಕ್ಯಾಬಿನೆಟ್ ಸಭೆಯ ಪತ್ರಿಕಾಗೋಷ್ಠಿಯ ನಂತರ ಮಾತನಾಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಹೆಚ್.ಕೆ.ಪಾಟೀಲ್ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಹೊಂದಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ಬೇರೆ ರಾಜ್ಯಗಳಿಂದಲೂ ಅಕ್ಕಿ ಕೊಳ್ಳುವ ಬಗ್ಗೆಯೂ ಚರ್ಚೆ ಮಾಡಲಾಯಿತು.
ಕ್ಯಾಬಿನೆಟ್ ಸಭೆಯ ಬಳಿಕ 8 ಕೆಜಿ ಅಕ್ಕಿ, 2 ಕೆಜಿ ರಾಗಿ/ಗೋದಿ/ಜೋಳ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಅಂತಿಮವಾಗಿ 5 ಕೆಜಿ ಅಕ್ಕಿಯ ಜೊತೆಗೆ ಇನ್ನು 5 ಕೆಜಿ ಅಕ್ಕಿಯ ಬಾಬ್ತು ಹಣ ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಗಳಂತೆ ಪ್ರತಿ ವ್ಯಕ್ತಿಗೆ 170 ರೂ ಕೊಡಲಾಗುವುದು. ಹಣವನ್ನು ಬಿಪಿಎಲ್ ಕಾರ್ಡಿನಲ್ಲಿ ಮನೆಯ ಮುಖ್ಯಸ್ಥ ಎಂದು ನಮೂದಿಸಿದವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡಲು ಬೇಡಿಕೆ ಇಟ್ಟರೆ ರಾಜಕೀಯ ಮಾಡಿ ಅಕ್ಕಿ ಕೊಡಲು ಹಿಂದೇಟು ಹಾಕಿದೆ. ಆದರೆ ನಾವು ಕೊಟ್ಟ ಭರವಸೆಯನ್ನು ಈಡೇರಿಸದೇ ಇರುವುದಿಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಡದೇ ರಾಜಕೀಯ ಮಾಡುತ್ತಿದೆ ಎಂದು ಕೆ.ಹೆಚ್.ಮುನಿಯಪ್ಪ ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿ, ರಾಜ್ಯದ ಶೇ.95% ಜನರ ಬಿಪಿಲ್ ಕಾರ್ಡ್ಗೆ ಅವರ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ. ಹಾಗಾಗಿ ಜುಲೈ 1ರಿಂದಲೇ ಅನ್ನಭಾಗ್ಯ ಯೋಜನೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಮೊದಲಿಗೆ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ನಂತರ ಹಿಂದೇಟು ಹಾಕಿದೆ. ಇದು ಸ್ಪಷ್ಟವಾಗಿ ಕರ್ನಾಟಕದ ಜನರಿಗೆ ಮಾಡಿದ ಮೋಸ. ಈಗಾಗಲೇ ಬೇರೆ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮಾತುಕತೆ ನಡೆದಿದೆ. ಈಗಾಗಲೇ 95% ಬಿಪಿಎಲ್ ಕಾರ್ಡುದಾರರ ಬ್ಯಾಂಕ್ ಅಕೌಂಟ್ ಲಿಂಕ್ ಆದ ಹಿನ್ನೆಲೆಯಲ್ಲಿ, ಅಕ್ಕಿ ದಾಸ್ತಾನು ಅಗುವವರೆಗೂ ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ನೀಡುವ ಯೋಜನೆ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.