ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ದಿಢೀರ್ ರಾಜೀನಾಮೆ: ಇನ್ನು ನನ್ನ ದಾರಿ ನನಗೆ ಎಂದ ಸಿಂಗಂ!

ದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಅವರು ಮಂಗಳವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಬೆನ್ನಲ್ಲೇ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಚೆನ್ನೈಗೆ ವಾಪಸಾಗಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನು ಕೆಳಗಿಳಿಸಿ ನೈನಾರ್ ನಾಗೇಂದ್ರನ್ ಅವರಿಗೆ ಜವಾಬ್ದಾರಿ ನೀಡಿದಾಗಿನಿಂದಲೂ ಅವರು ಪಕ್ಷದಿಂದ ದೂರ ಉಳಿದಿದ್ದರು. ಬಿಜೆಪಿಯಲ್ಲಿ ತಮಗೆ ಉಜ್ವಲ ಭವಿಷ್ಯವಿಲ್ಲ ಎಂದು ಭಾವಿಸಿದ್ದ ಅವರು ಸದ್ದಿಲ್ಲದೆ ಹೊರನಡೆಯಲಿದ್ದಾರೆ ಎಂಬ ಭಾರಿ ಊಹಾಪೋಹಗಳಿಗೆ ಈ ರಾಜೀನಾಮೆಯು ಇದೀಗ ಅಧಿಕೃತ ಮುದ್ರೆ ಒತ್ತಿದೆ. ದೆಹಲಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ನಿತಿನ್ ನಬಿನ್ ಹಾಗೂ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಅಣ್ಣಾಮಲೈ ಅವರು 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಪಕ್ಷದೊಂದಿಗೆ ಸೌಹಾರ್ದಯುತವಾಗಿಯೇ ಬಾಂಧವ್ಯ ಕಡಿದುಕೊಳ್ಳಲು ಇಚ್ಛಿಸಿರುವ ಅವರು, “ನಾನೀಗ ನನ್ನದೇ ಆದ ಸ್ವಂತ ಹಾದಿಯನ್ನು ರೂಪಿಸಿಕೊಳ್ಳಲು ಬಯಸುತ್ತೇನೆ,” ಎಂದು ಹಿರಿಯ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಆದಾಗ್ಯೂ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕೊನೆಯ ಹಂತದ ಪ್ರಯತ್ನಗಳನ್ನು ನಡೆಸುತ್ತಿದ್ದು, ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ವರಿಷ್ಠರ ಮುಂದಿನ ಸೂಚನೆ ಬರುವವರೆಗೂ ದೆಹಲಿಯಲ್ಲೇ ಉಳಿಯುವಂತೆ ಅಣ್ಣಾಮಲೈ ಅವರಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ.

ಖ್ಯಾತ ನಟ ವಿಜಯ್ (Vijay) ರಾಜಕೀಯಕ್ಕೆ ಪ್ರವೇಶಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಭರ್ಜರಿ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಬಿಜೆಪಿಯಿಂದ ಅಣ್ಣಾಮಲೈ ಅವರ ಈ ನಿರ್ಗಮನವು ಇಡೀ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗುವ ಮುನ್ಸೂಚನೆ ನೀಡಿದೆ.

ಅಣ್ಣಾಮಲೈ ಆಪ್ತ ಮೂಲಗಳ ಪ್ರಕಾರ, ತಮಿಳುನಾಡಿನಲ್ಲಿ ನಟ ವಿಜಯ್ ಅವರ ರಾಜಕೀಯ ಉದಯದ ನಂತರ ರಾಜ್ಯದ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ ಎಂದು ಅವರು ಬಲವಾಗಿ ನಂಬಿದ್ದಾರೆ. “ಇಂದು ವಿಜಯ್ ಅವರ ಜನಪ್ರಿಯತೆಯನ್ನು ಎದುರಿಸುವಂತಹ ಪ್ರಬಲ ನಾಯಕರು ರಾಜ್ಯದಲ್ಲಿ ಯಾರೂ ಇಲ್ಲ. ದ್ರಾವಿಡ ರಾಜಕಾರಣದ ಯುಗ ಮುಗಿದಿದೆ. ಕೇವಲ ಭಾಷಾ ನೀತಿಯನ್ನು ಇಟ್ಟುಕೊಂಡು ಮಾಡುವ ರಾಜಕೀಯ ಇನ್ನು ಮುಂದೆ ತಮಿಳುನಾಡಿನಲ್ಲಿ ನಡೆಯುವುದಿಲ್ಲ. ರಾಜ್ಯದ ರಾಜಕೀಯದ ಆಲೋಚನೆಗಳೇ ಬದಲಾಗಿವೆ,” ಎಂದು ಅಣ್ಣಾಮಲೈ ತಮ್ಮ ಆಪ್ತರ ವಲಯದಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಅಣ್ಣಾಮಲೈ ಪಕ್ಷ ತೊರೆಯುವ ವದಂತಿಗಳ ಬೆನ್ನಲ್ಲೇ, ಮದುರೈಯಾದ್ಯಂತ ಅವರ ಬೆಂಬಲಿಗರು ಭಾರಿ ಪೋಸ್ಟರ್‌ಗಳನ್ನು ಹಾಕಿದ್ದು, ತಮಿಳುನಾಡನ್ನು ರಕ್ಷಿಸಲು ಅಣ್ಣಾಮಲೈ ಅವರು ತಮ್ಮ “ಮುಂದಿನ ಅವತಾರ” (ಹೊಸ ರಾಜಕೀಯ ನಡೆ) ತಳೆಯಬೇಕು ಎಂದು ಒತ್ತಾಯಿಸಿದ್ದಾರೆ. ಕಳೆದ 2025 ರಲ್ಲಿ ಬಿಜೆಪಿಯು ಎಐಎಡಿಎಂಕೆ (AIADMK) ಜೊತೆಗಿನ ಮೈತ್ರಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು. ಈ ಹಿಂದೆ ಎಂಜಿಆರ್ ಮತ್ತು ಜಯಲಲಿತಾ ಅವರ ಕುರಿತು ಅಣ್ಣಾಮಲೈ ಮಾಡಿದ್ದ ಗಂಭೀರ ಟೀಕೆಗಳು ಮೈತ್ರಿ ಮುರಿಯಲು ಕಾರಣವಾಗಿದ್ದವು.

Related Articles

ಇತ್ತೀಚಿನ ಸುದ್ದಿಗಳು