ಕ್ಯಾನ್ಸರ್ನಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಬುಧವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಗಾಯಕ್ವಾಡ್ ಭಾರತಕ್ಕಾಗಿ 40 ಟೆಸ್ಟ್ ಮತ್ತು 15 ಒಂದು ದಿನದ ಪಂದ್ಯಗಳನ್ನು ಆಡಿದ್ದಾರೆ. ಅವರು 2000 ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಭಾರತೀಯ ತಂಡದ ಕೋಚ್ ಆಗಿದ್ದರು.
ಗಾಯಕ್ವಾಡ್ ಅವರು ಲಂಡನ್ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಲಂಡನ್ನಲ್ಲಿ ದೀರ್ಘಕಾಲ ಕಳೆದ ನಂತರ ಅವರು ಕಳೆದ ತಿಂಗಳು ಮನೆಗೆ ಮರಳಿದ್ದರು. ಗಾಯಕ್ವಾಡ್ ಚಿಕಿತ್ಸೆಗಾಗಿ ಬಿಸಿಸಿಐ 1 ಕೋಟಿ ರೂ. ನೀಡಿತ್ತು. ಇದರೊಂದಿಗೆ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರು ಸಹಾಯ ನೀಡಿದ್ದರು.
ಗಾಯಕ್ವಾಡ್ ಅವರು ತಮ್ಮ 22 ವರ್ಷಗಳ ವೃತ್ತಿಜೀವನದಲ್ಲಿ 205 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 1998ರಲ್ಲಿ ಶಾರ್ಜಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ನಲ್ಲಿ ಅವರ ತರಬೇತಿ ಅಡಿಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಗೆಲುವು ದಾಖಲಿಸಿತ್ತು. 1999ರಲ್ಲಿ ದೆಹಲಿಯ ಫಿರೋಜ್ಶಾ ಕೋಟ್ಲಾದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಇನ್ನಿಂಗ್ಸ್ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ಗಳನ್ನು ಪಡೆದ ಸಂದರ್ಭದಲ್ಲೂ ಅವರು ತಂಡದ ಕೋಚ್ ಆಗಿದ್ದರು.
ಆರಂಭಿಕ ಬ್ಯಾಟ್ಸ್ಮನ್ ಗಾಯಕ್ವಾಡ್ ತಮ್ಮ ರಕ್ಷಣಾತ್ಮಕ ಆಟಕ್ಕೆ ಪ್ರಸಿದ್ಧರಾಗಿದ್ದರು. 1974 ಮತ್ತು 1984ರ ನಡುವೆ ಭಾರತ ತಂಡದಲ್ಲಿ ಸುನಿಲ್ ಗವಾಸ್ಕರ್ ಅವರ ಪಾಲುದಾರರಾಗಿ ಎರಡನೇ ಆರಂಭಿಕ ಬ್ಯಾಟ್ಸ್ಮನ್ ಸ್ಥಾನಕ್ಕಾಗಿ ಚೇತನ್ ಚೌಹಾಣ್ ಮತ್ತು ಅವರ ನಡುವೆ ಪೈಪೋಟಿ ಇತ್ತು.