ಮುಂಬೈ, ಜುಲೈ 31: ಜೀವ ವಿಮೆ ಮತ್ತು ಆರೋಗ್ಯ ವಿಮಾ ಕಂತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು, ನಾಗಪುರ ವಿಭಾಗೀಯ ಜೀವ ವಿಮಾ ನಿಗಮದ ನೌಕರರ ಸಂಘದ ಮುಖಂಡರು ವಿಮಾ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನನ್ನ ಬಳಿಸಿ ಚರ್ಚಸಿದರು. ಮುಖ್ಯವಾಗಿ ಜೀವ ಮತ್ತು ಆರೋಗ್ಯ ವಿಮಾ ಕಂತುಗಳ ಮೇಲಿನ ಜಿಎಸ್ಟಿ ಹಿಂಪಡೆಯಲು ಒತ್ತಾಯಿಸಿದ್ದಾರೆ ಎಂದು ಗಡ್ಕರಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಎರಡು ವಿಮಾ ಕಂತುಗಳ ಮೇಲಿನ ಜಿಎಸ್ಟಿ ಶೇ.18ರಷ್ಟಿದ್ದು, ಅವುಗಳ ಮೇಲೆ ಜಿಎಸ್ಟಿ ವಿಧಿಸುವುದು ಬದುಕಿನ ಅನಿಶ್ಚಿತತೆಯ ಮೇಲೆ ತೆರಿಗೆ ವಿಧಿಸಿದಂತೆ ಎಂದು ಅವರು ಹೇಳಿದ್ದಾರೆ. ಜನರು ಕುಟುಂಬಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಜೀವ ವಿಮೆ ಖರೀದಿಸುತ್ತಿದ್ದು, ಅಂತಹ ಪ್ರೀಮಿಯಂಗೆ ತೆರಿಗೆ ವಿಧಿಸಬಾರದು ಎಂದು ನೌಕರರ ಸಂಘ ಹೇಳಿದೆ.