ರಟಕಲ್: ಹಿಂದೂ ಮುಸ್ಲಿಂರ ಸೌಹಾರ್ದ ನೆಲವಾದ ರಟಕಲ್ ಗ್ರಾಮದಲ್ಲಿನ ಐತಿಹಾಸಿಕ ಮಹೆಬೂಬ್ ಸುಬಹಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಆವರಣ ಗೋಡೆ ಕಟ್ಟುವ ಮೂಲಕ ಪೊಲೀಸರಿಂದಲೇ ಗ್ರಾಮಸ್ಥರ ಮಧ್ಯೆ ಕೋಮು ದ್ವೇಶ ಬಿತ್ತುವ ಕೆಲಸ ನಡೆದಿದೆ ಎಂದು ನ್ಯಾಯವಾದಿ ಅಶ್ವಿನಿ ಮದನಕರ್ ಆರೋಪಿಸಿದರು.
ಗ್ರಾಮದ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಪೊಲೀಸರು ಕಟ್ಟಿರುವ ಆವರಣ ಗೋಡೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸೌಹಾರ್ದ ಸಮಿತಿ ವತಿಯಿಂದ ರಟಕಲ್ ಪೊಲೀಸ್ ಠಾಣೆಗೆ ಇಂದು ಮನವಿ ಸಲ್ಲಿಸಿ ಅವರು ಮಾತನಾಡಿದರು. ಶತಮಾನಗಳಷ್ಟು ಹಳೆಯದಾದ ಹಜರತ್ ಮಹೆಬೂಬ್ ಸುಬಾನಿ ದರ್ಗಾದ ಹಳೆಯ ಪ್ರವೇಶ ದ್ವಾರಕ್ಕೆ ಕಾಂಪೌಂಡ್ ಗೋಡೆ ಕಟ್ಟುವ ಮೂಲಕ ಪೊಲೀಸರು ಭಕ್ತರ ಭಾವನೆಗೆ ಮತ್ತು ಅವರ ನಂಬಿಕೆಗೆ ಅವಮಾನಿಸಿದ್ದಾರೆ ಎಂದು ಅವರು ದೂರಿದರು.

ಪೊಲೀಸ್ ಠಾಣೆಗೂ ಮೊದಲು ದರ್ಗಾ ಇತ್ತು. ಆದರೆ, ಆನಂತರದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಜಮೀನು ಖರೀದಿಸಿರಬಹುದು. ಆದರೆ ದರ್ಗಾ ಮತ್ತು ಭಕ್ತರ ಭಾವನೆ ಖರೀದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಮೇಶ್ ಕೆ ರಾಗಿ ಮಾತನಾಡಿ, ಪೊಲೀಸ್ ಇಲಾಖೆ ಸಾರ್ವಜನಿಕರ ಸಂಕಟಕ್ಕೆ ಸ್ಪಂದಿಸಲು ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು. ಆದರೆ, ಇಲ್ಲಿನ ಪೊಲೀಸ್ ಅಧಿಕಾರಿಗಳು ಹಜರತ್ ಮಹೆಬೂಬ್ ಸುಬಾನಿ ದರ್ಗಾಕ್ಕೆ ಹೋಗುವ ಅತ್ಯಂತ ಹಳೆಯ ರಸ್ತೆಗೆ ಕಾಂಪೌಂಡ್ ಗೋಡೆ ನಿರ್ಮಿಸುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕದಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರಿಗೆ ದೇವರ ದರ್ಶನ ಮಾಡಲು ಸಮಸ್ಯೆ ಉಂಟಾಗುತ್ತಿದೆ, ಹಾಗಾಗಿ, ಈ ಕೂಡಲೇ ಕಾಂಪೌಂಡ್ ಗೋಡೆ ತೆರವುಗೊಳಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶಮಾಡಿಕೊಡಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಶ್ವಿನಿ ಮದನಕರ್, ಸಾಮಾಜಿಕ ಕಾರ್ಯಕರ್ತ ವಿಕ್ರಮ್ ತೇಜಸ್, ಪ್ರಿಯಾಂಕಾ ಮಾವಿನಕರ್ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.