Wednesday, July 30, 2025

ಸತ್ಯ | ನ್ಯಾಯ |ಧರ್ಮ

ಸೌಜನ್ಯ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆಗೆ ಅಕ್ವಿಟಲ್ ಕಮಿಟಿ ರಚನೆಗೆ ಒಡನಾಡಿ ಸಂಸ್ಥೆ ಒತ್ತಾಯ

ಧರ್ಮಸ್ಥಳದ ಮೃತ ವಿದ್ಯಾರ್ಥಿನಿ ಸೌಜನ್ಯ ಸಾವಿನ ಪ್ರಕರಣದಲ್ಲಿ ತನಿಖೆಯ ಹಾದಿ ತಪ್ಪಿಸಿದ ಅಧಿಕಾರಿಗಳ ವಿರುದ್ಧ ಅಕ್ವಿಟಲ್ ಕಮಿಟಿ ರಚನೆ ಮಾಡಿ, ತನಿಖೆ ಮಾಡಬೇಕು ಎಂದು ಮೈಸೂರಿನ ಒಡನಾಡಿ ಸಂಸ್ಥೆ ಸರ್ಕಾರಕ್ಕೆ ಒತ್ತಾಯಿಸಿದೆ. ತನಿಖೆ ವೇಳೆಯಲ್ಲಿ ಆದಂತಹ ಹಲವು ಅದ್ವಾನಗಳ ಕಾರಣಕ್ಕೇ ಈ ಪ್ರಕರಣ ಇಷ್ಟು ಜಟಿಲವಾಗಿದೆ. ಹೀಗಾಗಿ ಅಧಿಕಾರಿಗಳನ್ನೇ ತನಿಖೆಗೆ ಒಳಪಡಿಸಬೇಕು ಎಂದು ಒಡನಾಡಿ ಸಂಸ್ಥೆ ಒತ್ತಾಯ ಮಾಡಿದೆ.

ಅಕ್ವಿಟಲ್ ಕಮಿಟಿ ಎಂದರೆ ತನಿಖೆ ವೇಳೆಯಲ್ಲಿ ಅಧಿಕಾರಿಗಳಿಂದ ಆದಂತಹ ಲೋಪದೋಷಗಳ ಬಗೆಗಿನ ತನಿಖೆ ನಡೆಸುವ ಕಮಿಟಿಯಾಗಿದೆ.

ಸಿಬಿಐ ತನಿಖೆಯಲ್ಲಿ ಪ್ರಾಥಮಿಕ ಹಂತದಲ್ಲಿ ಸೌಜನ್ಯ ಸಾವಿನ ತನಿಖೆಯಲ್ಲಿ ಅನೇಕ ಅದ್ವಾನಗಳು ಕಂಡುಬಂದಿದ್ದು, ಆ ಮೂಲಕ ತಪ್ಪಿತಸ್ಥ ಅಧಿಕಾರಿಗಳನ್ನು ತನಿಖೆಗೊಳಪಡಿಸಲು ಸಿಬಿಐ ಮತ್ತು ನ್ಯಾಯಾಲಯದ 2022 ರಲ್ಲೇ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರ ಇನ್ನೂ ಅಕ್ವಿಟಲ್ ಕಮಿಟಿ ರಚನೆ ಮಾಡದೇ ಮೀನಾಮೇಷ ಎಣಿಸುತ್ತಿದೆ. ಆ ಮೂಲಕ ಸರ್ಕಾರ ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಂಡು ಸರ್ಕಾರ ಆದಷ್ಟು ಬೇಗ ಅಕ್ವಿಟಲ್ ಕಮಿಟಿ ರಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ.

ಈಗಾಗಲೇ ತನಿಖೆ ವೇಳೆ ಸೇವೆ ಸಲ್ಲಿಸಿದ್ದ ವೈದ್ಯರೊಬ್ಬರು ನಿಧನ ಹೊಂದಿದ್ದಾರೆ. ಮತ್ತೊರ್ವ ವೈದ್ಯೆ ಮತ್ತು ಪೊಲೀಸ್ ಅಧಿಕಾರಿ ಯೋಗೇಶ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಒಡನಾಡಿ ಸಂಸ್ಥೆ ಹೇಳಿದೆ.

ತಪ್ಪಿತಸ್ಥ ಅಧಿಕಾರಿಗಳು ಮಾತ್ರ ಸರ್ಕಾರದಿಂದ ಬಡ್ತಿ ಪಡೆದು ಇನ್ನೂ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾದ ನಡೆಯಾಗಿದೆ. ಹೀಗಾಗಿ ಸರ್ಕಾರ ದಕ್ಷ ಅಧಿಕಾರಿಗಳ ಅಕ್ವಿಟಲ್ ಕಮಿಟಿ ರಚನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page