ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮೂಲಗಳು ತಿಳಿಸಿವೆ.
ಸದ್ಯ ಹಿಂಪಡೆಯಲಾಗಿರುವ ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಣೆ ಸಂಬಂಧ ಕೇಜ್ರಿವಾಲ್ ಅವರಿಗೆ ಬುಧವಾರ 5ನೇ ಸಮನ್ಸ್ ನೀಡಿದ್ದ ಇ.ಡಿ ಅಧಿಕಾರಿಗಳು, ಇಂದು (ಫೆ.2ರಂದು) ವಿಚಾರಣೆಗೆ ಬರುವಂತೆ ಸೂಚಿಸಿದ್ದರ
ಕೇಜ್ರಿವಾಲ್ ಅವರನ್ನು ಬಂಧಿಸುವ ಸಲುವಾಗಿ ಜಾರಿ ನಿರ್ದೇಶನಾಲಯವು ಮತ್ತೆ ಮತ್ತೆ ನೋಟಿಸ್ ನೀಡುತ್ತಿದೆ. ಅವರು ವಿಚಾರಣೆಗೆ ಹಾಜರಾಗುವುದಿಲ್ಲ. ತನಿಖಾ ಸಂಸ್ಥೆಯ ನೋಟಿಸ್ಗಳು ‘ಕಾನೂನುಬಾಹಿರ’ವಾಗಿವೆ ಬಿಜೆಪಿಯು ಕೇಜ್ರಿವಾಲ್ ಅವರನ್ನು ಬಂಧಿಸಿ, ದೆಹಲಿ ಸರ್ಕಾರವನ್ನು ಉರುಳಿಸಲು ಬಯಸುತ್ತಿದೆ ಎಂದು ಎಎಪಿ ಆರೋಪಿಸಿದೆ.
ಇ.ಡಿ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕೇಜ್ರಿವಾಲ್ ಅವರಿಗೆ 2023ರ ನವೆಂಬರ್ 2, ಡಿಸೆಂಬರ್ 21 ಹಾಗೂ ಈ ವರ್ಷ ಜನವರಿ 3 ಮತ್ತು 18ರಂದು ನೋಟಿಸ್ ನೀಡಲಾಗಿತ್ತು. ಎಲ್ಲ ನೋಟಿಸ್ಗಳು ಕಾನೂನುಬಾಹಿರವಾಗಿವೆ ಎಂದು ಆರೋಪಿಸಿರುವ ಅವರು, ಒಮ್ಮೆಯೂ ವಿಚಾರಣೆಗೆ ಹಾಜರಾಗಿಲ್ಲ.
ಚಂಡೀಗಢ ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಬಿಜೆಪಿಯ ಪ್ರಧಾನ ಕಚೇರಿ ಎದುರು ಎಎಪಿ ಇಂದು (ಫೆ.2ರಂದು) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೇಜ್ರಿವಾಲ್ ಪಾಲ್ಗೊಳ್ಳಲಿರುವುದರಿಂದ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂಬುದು ದೃಡಪಟ್ಟಂತಾಗಿದೆ.