ಬೆಂಗಳೂರು: ಆಶಾ ಕಾರ್ಯಕರ್ತರ ಮುಖಂಡರ ಕೆಲಸ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೆಲಸ ತಕ್ಕ ಪ್ರೋತ್ಸಾಹಧನ ಸಿಗಬೇಕೆಂದು ಕೋರಿ, ʼಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘʼವು ಬುಧವಾರದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಪತ್ರ ಸಲ್ಲಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರು ತಮ್ಮ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ- ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳ ಜೊತೆಗೆ ಕೊರೋನ ಸಾಂಕ್ರಾಮಿಕ ಕಾಲದಲ್ಲೂ ಕೊರೋನ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ್ದರು.
ನಿಗದಿ ಪಡಿಸಿದ ಕೆಲಸಗಳನ್ನು ಹೊರತು ಪಡಿಸಿ, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿದ್ದಾರೆ. ಅದಲ್ಲದೇ ಮುಖ್ಯವಾಗಿ ಮೊಬೈಲ್ ಆಪ್ಗಳನ್ನು ಹಾಕಿಕೊಂಡು ಅವರಿಗೆ ಮೊಬೈಲ್ ಮತ್ತು ಡೇಟಾವನ್ನೂ ಕೂಡ ನೀಡದೆ ಎನ್ಸಿಡಿ ಸರ್ವೆ, ಈ-ಸಂಜೀವಿನಿ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸುತ್ತಿರುವುದು ಆಶಾ ಕಾರ್ಯಕರ್ತೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ʼಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘʼದ ಜಿಲ್ಲಾ ಸಮಿತಿಯಿಂದ, ಕಳೆದ ಮೂರು ತಿಂಗಳಿಂದ ರಾಜ್ಯ ಸರ್ಕಾರದ ವತಿಯಿಂದ ಬರಬೇಕಾದ ನಿಗದಿತ ಗೌರವಧನ ಬಿಡುಗಡೆಯಾಗದೆ ಆಶಾ ಕಾರ್ಯಕರ್ತೆಯರು ಸಾಲ ಮಾಡಿ ಜೀವನ ನಡೆಸುವಂತ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಮ್ಮ ಸಮಸ್ಯೆಯನ್ನು ಮುಂದಿಟ್ಟಿದ್ದಾರೆ.
ಮೂರು ತಿಂಗಳಿಂದ ಬಾಕಿ ಉಳಿದಿರುವ ರಾಜ್ಯದ ನಿಗದಿತ ಪ್ರೋತ್ಸಾಹಧನವನ್ನು ಕೂಡಲೆ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5 ತಾರೀಖಿನ ಒಳಗೆ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಕೇಂದ್ರದ ಇನ್ಸೆಂಟಿವ್ ಮತ್ತು ಎನ್ಸಿಟಿ ಹಣವನ್ನು ಬಿಡುಗಡೆ ಮಾಡಬೇಕು. ಆಧಾರ್ ಕಾರ್ಡ್, ಮತದಾರರ ಚೀಟಿ ಜೋಡಣೆ(ಬಿಎಲ್ಒ ಕೆಲಸ), ಈ ಸಂಜೀವಿನಿ ಮುಂತಾದ ಮೊಬೈಲ್ ಆಧಾರಿತ ಕೆಲಸಗಳನ್ನು ಆಶಾಗಳಿಂದ ಒತ್ತಾಯಪೂರ್ವಕವಾಗಿ ಮಾಡಿಸಬಾರದು. ಬೆಂಗಳೂರು ನಗರದ ದುಬಾರಿ ಜೀವನ ವೆಚ್ಚಕ್ಕೆ ಅನುಗುಣವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಆಶಾಗಳಿಗೆ ಹೆಚ್ಚುವರಿಯಾಗಿ ರೂ.5000 ಇನ್ಸೆಂಟಿವ್ ನಿಗದಿ ಮಾಡಬೇಕು. ಮತ್ತು ಬೆಂಗಳೂರು ನಗರ ಮತ್ತು ಬಿಬಿಎಂಪಿ ಆಶಾಗಳಿಗೆ ಪ್ರತಿ ತಿಂಗಳು ಬಸ್ ಪಾಸ್ ಸೌಲಭ್ಯ ನೀಡಬೇಕು ಎಂದು ತಮ್ಮ ಹಕ್ಕೊತ್ತಾಯಗಳನ್ನು ಕೋರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಕುರಿತು ಪೀಪಲ್ ಮೀಡಿಯಾದೊಂದಿಗೆ ಮಾತನಾಡಿದ ಆಶಾ ಕಾರ್ಯಕರ್ತೆಯೊಬ್ಬರು, ʼಪ್ರತಿ ತಿಂಗಳು 10ನೇ ತಾರೀಖಿನಂದು ಸಂಬಳ ಬರಬೇಕಿತ್ತು ಆದರೆ ಸಂಬಳ ಬಂದೇ ಮೂರು ತಿಂಗಳಾಗಿದೆ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದೇವೆ. ಈ ಸಮಸ್ಯೆಯ ಕುರಿತು ಕಮೀಷರ್ ಬಳಿ ಪ್ರಸ್ತಾಪಿಸಿದಾಗ ಮೂರು ದಿನದಲ್ಲಿ ಸಂಬಳ ನೀಡುವ ಆಶ್ವಾಸನೆ ಕೊಟ್ಟಿದ್ದರು. ಆದರೆ 2 ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಶುಲ್ಕ ಕಟ್ಟುವುದು ಹೇಗೆ? ಮನೆ ಬಾಡಿಗೆ ಕಟ್ಟುವುದು ಹೇಗೆ? ಇದಕ್ಕೋಸ್ಕರ ನಮ್ಮನ್ನ ಪ್ರತೀ ಸಾರಿ ಬೀದಿಗಿಳಿಸುತ್ತಲೇ ಇರುತ್ತಾರೆ. 2 ಗಂಟೆ ಕೆಲಸ ಎಂದು ಹೇಳಿ ದಿನಪೂರ್ತಿ ಕೆಲಸ ಮಾಡಿಸುತ್ತಾರೆ. ಕೊಡುವ 5000 ಸಂಬಳವನ್ನು ಸರಿಯಾಗಿ ಕೊಡುವುದಿಲ್ಲ ಎಂದಾಗ ಜೀವನ ನಡೆಸುವುದು ಹೇಗೆ?ʼ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.