ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಈ ಹಂತದಲ್ಲೇ ಬಿಜೆಪಿ ಒಳಗೇ ಅಸಮಾಧಾನದ ಬೆಂಕಿಯ ಹೊಗೆಯಾಡಲು ಶುರುವಾಗಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಬರೆದ ಪತ್ರವೇ ಬಿಜೆಪಿ ಒಳಗಿನ ಅಸಮಾಧಾನಕ್ಕೆ ಕಾರಣವಾಗಿದೆ.
ವಿಧಾನಸಭೆ ಅಧಿವೇಶನದ ವೇಳೆ ಸಭಾಧ್ಯಕ್ಷರ ಪೀಠದ ಬಳಿ ಗದ್ದಲ ಮಾಡಿದ್ದ ಪಕ್ಷದ 18 ಶಾಸಕರ ಅಮಾನತು ಕ್ರಮವನ್ನು ಕೈಬಿಡಬೇಕು ಮತ್ತು ಅವರನ್ನು ಮತ್ತೆ ಶಾಸಕರಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಅಶೋಕ್ ಈ ರೀತಿಯಾಗಿ ಬರೆದ ಪತ್ರದ ವಿರುದ್ಧ ಬಿಜೆಪಿ ಒಳಗೇ ಅಶೋಕ್ ವಿರುದ್ಧ ತಿರುಗಿಬೀಳುವಂತಾಗಿದೆ.
ಸಧ್ಯ ಬಿಜೆಪಿ ಪಕ್ಷ ರಾಜ್ಯಾದ್ಯಂತ ಕಾಂಗ್ರೆಸ್ ಆಡಳಿತ ಹಾಗೂ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆಗೆ ರೂಪುರೇಷೆ ಸಿದ್ಧಗೊಳಿಸುತ್ತಿರುವಾಗಲೇ ಈ ಪತ್ರ ಪಕ್ಷದ ತೀರ್ಮಾನಕ್ಕೆ ವ್ಯತಿರಿಕ್ತವಾಗಿದೆ. ಹೋರಾಟದ ಸ್ಫೂರ್ತಿಗೆ ಹಿನ್ನಡೆ ಉಂಟು ಮಾಡಲಿದ್ದು; ಇದರಿಂದ ಪಕ್ಷ ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎಂದು ವಿಜಯೇಂದ್ರ ಬಣದ ಅನೇಕರು ಆರ್ ಅಶೋಕ್ ನಿರ್ಧಾರವನ್ನು ಖಂಡಿಸಿದ್ದಾರೆ. ವಿಶೇಷವಾಗಿ ಪ್ರತಿಭಟನೆಯ ಹಿಂದಿನ ದಿನವೇ ಈ ನಡೆ ಎಷ್ಟು ಸರಿ ಎಂಬಂತೆ ಪ್ರಶ್ನಿಸಲಾರಂಭಿಸಿದೆ.
ಅಷ್ಟಕ್ಕೂ ಅಶೋಕ್ ಅವರಿಗೆ ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಸ್ಪೀಕರ್ಗೆ ಪತ್ರ ಬರೆಯುವ ಉದ್ದೇಶವೇ ಇರಲಿಲ್ಲ. ಮಂಗಳವಾರ ಬೆಳಗ್ಗೆ ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದು 18 ಶಾಸಕರ ಉಚ್ಚಾಟನೆ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆ ಪತ್ರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಶೋಕ್ ಅವರೂ ಸ್ಪೀಕರ್ಗೆ ಪತ್ರ ಬರೆದು, ಅಮಾನತು ಆದೇಶವನ್ನು ಮರುಪರಿಶೀಲಿಸಬೇಕು ಮತ್ತು ಅಮಾನತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಕೋರಿದರು.
ಸಭಾಧ್ಯಕ್ಷರಿಗೆ ಬರೆದ ಪತ್ರದ ಸಾರಾಂಶ
‘ಮಾರ್ಚ್ 23 ರಂದು ನಡೆದ ಘಟನೆ ಉದ್ದೇಶ ಪೂರ್ವಕವಲ್ಲ. ನಿಮ್ಮ ಪೀಠಕ್ಕೆ ಅಗೌರವ ತರುವ ಉದ್ದೇಶವೂ ಯಾವುದೇ ಶಾಸಕರಿಗೆ ಇರಲಿಲ್ಲ. ಸದನದ ಘನತೆ ಮತ್ತು ಗೌರವವನ್ನು ಉಳಿಸಬೇಕಾಗಿದೆ ಎಂಬ ತತ್ವದಲ್ಲಿ ನಂಬಿಕೆ ಇರಿಸಿ 18 ಶಾಸಕರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಆರ್.ಅಶೋಕ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ‘ಕಳೆದ ಎರಡು ವರ್ಷಗಳಲ್ಲಿ ತಾವು ಸದನದ ಕಲಾಪ ನಿರ್ವಹಿಸುವುದನ್ನು ನಾವು ಅತ್ಯಂತ ಹತ್ತಿರದಿಂದ ನೋಡಿದ್ದೇವೆ. ಸಂಸದೀಯ ಚರ್ಚೆಯ ಗುಣಮಟ್ಟ ಭಾಷೆಯ ಬಳಕೆ ಕಲಾಪಗಳಲ್ಲಿನ ನಿಯಮಗಳ ಪಾಲನೆ ಇತ್ಯಾದಿಗಳೆಲ್ಲವೂ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ದಿನಗಳಲ್ಲಿ ಯಾರಿಗೇ ಆಗಲಿ ಇದು ಅತ್ಯಂತ ಕಷ್ಟದ ಕೆಲಸ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ’ ಎಂದು ಹೇಳಿದ್ದಾರೆ. ‘ಒಂದು ವೇಳೆ ಆ ದಿನ ತಾವು ನಮ್ಮ ಎಲ್ಲ ಶಾಸಕರನ್ನು ತಮ್ಮ ಕೊಠಡಿಗೆ ಕರೆದು ವಿವರಣೆ ಕೇಳಿದ್ದರೆ ನಾವು ಈ ಘಟನೆಯ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೆವು. ಅದಕ್ಕೆ ಅವಕಾಶ ಸಿಗಲಿಲ್ಲ. ಅಮಾನತಿನಿಂದಾಗಿ 18 ಶಾಸಕರು ಜನಪ್ರತಿನಿಧಿಯಾಗಿ ಕೆಲಸ ಮಾಡಲು ಹಲವು ನಿರ್ಬಂಧ ವಿಧಿಸಿದಂತಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವರಿಗೆ ಅವಕಾಶ ಕೊಡುವುದಕ್ಕಾಗಿ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು’ ಎಂದು ಆರ್ ಅಶೋಕ್ ಮನವಿ ಮಾಡಿದ್ದಾರೆ.