10,152 ಭಾರತೀಯ ಪ್ರಜೆಗಳು ಸದ್ಯ 86 ವಿದೇಶಗಳ ಜೈಲಿನಲ್ಲಿ ಬಂಧಿಗಳಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
ಈ ದೇಶಗಳಲ್ಲಿ 12 ದೇಶಗಳಲ್ಲಿ 100 ಕ್ಕೂ ಹೆಚ್ಚು ಭಾರತೀಯರು ಜೈಲಿನಲ್ಲಿದ್ದಾರೆ ಎಂದು ಸಚಿವಾಲಯವು ಅನಿವಾಸಿ ಭಾರತೀಯರು, ಭಾರತೀಯ ಮೂಲದ ವ್ಯಕ್ತಿಗಳು, ಭಾರತದ ಸಾಗರೋತ್ತರ ಪೌರತ್ವ ಕಾರ್ಡ್ದಾರರು ಮತ್ತು ವಲಸೆ ಕಾರ್ಮಿಕರ ಸ್ಥಿತಿಗತಿಗಳು ಮತ್ತು ಕಲ್ಯಾಣ ಕುರಿತ ವರದಿಯಲ್ಲಿ ತಿಳಿಸಿದೆ. ವರದಿಯು ವಲಸೆ ಮಸೂದೆಯ ಸ್ಥಿತಿಯನ್ನು ಸಹ ಚರ್ಚಿಸಿದೆ.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಡಿಸಲಾದ ವರದಿಯಲ್ಲಿ, ಅತಿ ಹೆಚ್ಚು (ವಿಚಾರಣಾಧೀನ ಕೈದಿಗಳು ಸೇರಿದಂತೆ 2,633 ಭಾರತೀಯರು) ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (2,518) ಜೈಲಿನಲ್ಲಿದ್ದಾರೆ ಎಂದು ಹೇಳಲಾಗಿದೆ.
ಬಹ್ರೇನ್ (181), ಕುವೈತ್ (387) ಮತ್ತು ಕತಾರ್ (611) ಸೇರಿದಂತೆ ಇತರ ಕೊಲ್ಲಿ ರಾಷ್ಟ್ರಗಳ ಜೈಲುಗಳಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದಾರೆ.
ಇದಲ್ಲದೆ, ನೇಪಾಳದಲ್ಲಿ 1,317 ಭಾರತೀಯರು ಮತ್ತು ಮಲೇಷ್ಯಾದಲ್ಲಿ 338 ಮಂದಿ ಜೈಲಿನಲ್ಲಿದ್ದಾರೆ. ಚೀನಾದಲ್ಲಿ ಕನಿಷ್ಠ 173 ಭಾರತೀಯರು ಜೈಲಿನಲ್ಲಿದ್ದಾರೆ ಎಂದು ದತ್ತಾಂಶ ತಿಳಿಸಿದೆ.
ಈ 12 ದೇಶಗಳಲ್ಲಿ ಒಂಬತ್ತು ದೇಶಗಳು ಶಿಕ್ಷೆಗೊಳಗಾದ ವ್ಯಕ್ತಿಗಳ ವರ್ಗಾವಣೆಯ ಕುರಿತಾದ ಅಸ್ತಿತ್ವದಲ್ಲಿರುವ ಒಪ್ಪಂದಗಳ ವ್ಯಾಪ್ತಿಗೆ ಬರುತ್ತವೆ ಎಂದು ಸಚಿವಾಲಯ ತಿಳಿಸಿದೆ. ಇದು ಅಪರಾಧದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಜೈಲು ಶಿಕ್ಷೆಯನ್ನು ಅನುಭವಿಸಲು ಅವನ/ಳ ತಾಯ್ನಾಡಿಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.
ಆದಾಗ್ಯೂ, 2023 ಮತ್ತು ಮಾರ್ಚ್ 2025 ರ ನಡುವೆ ಭಾರತದಲ್ಲಿ ತಮ್ಮ ಶಿಕ್ಷೆಯನ್ನು ಅನುಭವಿಸಲು ಕೇವಲ ಎಂಟು ಕೈದಿಗಳನ್ನು ಮಾತ್ರ ಮರಳಿ ಕರೆತರಲು ಸಾಧ್ಯವಾಯಿತು. ಇವರಲ್ಲಿ, ತಲಾ ಮೂವರು ಇರಾನ್ ಮತ್ತು ಯುನೈಟೆಡ್ ಕಿಂಗ್ಡಮ್ನಿಂದ ಮತ್ತು ಇಬ್ಬರು ಕಾಂಬೋಡಿಯಾ ಮತ್ತು ರಷ್ಯಾದಿಂದ ಬಂದವರು.
ಈ ಕೈದಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತ ಪ್ರಶ್ನೆಗೆ, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಪೋಸ್ಟ್ಗಳು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಈ ವಿಚಾರದಲ್ಲಿ ಮಾತುಕತೆಯಲ್ಲಿರುವುದಾಗಿ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
“ವಿದೇಶಗಳಲ್ಲಿ ಜೈಲಿನಲ್ಲಿರುವ ಭಾರತೀಯರಿಗೆ ಸಾಧ್ಯವಿರುವ ಎಲ್ಲಾ ಕಾನ್ಸುಲರ್ ಸಹಾಯವನ್ನು ವಿಸ್ತರಿಸುವುದರ ಜೊತೆಗೆ, ಅಗತ್ಯವಿರುವ ಕಡೆಗಳಲ್ಲಿ ಕಾನೂನು ನೆರವು ನೀಡುವಲ್ಲಿ ಭಾರತೀಯ ಮಿಷನ್ಗಳು ಮತ್ತು ಪೋಸ್ಟ್ಗಳು ಸಹ ಸಹಾಯ ಮಾಡುತ್ತವೆ. ಭಾರತೀಯ ಸಮುದಾಯವು ಗಣನೀಯ ಸಂಖ್ಯೆಯಲ್ಲಿರುವಂತಹ ಸ್ಥಳೀಯ ವಕೀಲರ ಸಮಿತಿಯನ್ನು ಸಹ ಮಿಷನ್ಗಳು ಮತ್ತು ಪೋಸ್ಟ್ಗಳು ನಿರ್ವಹಿಸುತ್ತವೆ,” ಎಂದು ಸಚಿವಾಲಯ ತಿಳಿಸಿದೆ.
ಸಂಬಂಧಪಟ್ಟ ಭಾರತೀಯ ರಾಯಭಾರ ಕಚೇರಿಯಿಂದ ಸೌಲಭ್ಯಗಳನ್ನು ವಿಸ್ತರಿಸುವುದಕ್ಕಾಗಿ ಯಾವುದೇ ಭಾರತೀಯ ಕೈದಿಯು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
“ಟಿಎಸ್ಪಿ [ಶಿಕ್ಷೆಗೊಳಗಾದ ವ್ಯಕ್ತಿಗಳ ವರ್ಗಾವಣೆ] ಒಪ್ಪಂದದ ಅಡಿಯಲ್ಲಿ ವರ್ಗಾವಣೆಗೆ ಕೈದಿ, ಆತಿಥೇಯ ದೇಶ ಮತ್ತು ವರ್ಗಾವಣೆ ಮಾಡುವ ದೇಶದ ಒಪ್ಪಿಗೆ ಅಗತ್ಯವಿದೆ,” ಎಂದು ಅದು ಹೇಳಿದೆ.
ಒಪ್ಪಂದದ ಅಡಿಯಲ್ಲಿ ಕೈದಿಗಳ ವರ್ಗಾವಣೆಯನ್ನು ಮೇಲ್ವಿಚಾರಣೆ ಮಾಡುವ ನೋಡಲ್ ಪ್ರಾಧಿಕಾರ ಗೃಹ ಸಚಿವಾಲಯವಾಗಿದ್ದು, ಪ್ರಸ್ತುತ ಹಲವಾರು ಪ್ರಕರಣಗಳನ್ನು ಪ್ರಕ್ರಿಯೆಗೊಳಿಸುತ್ತಿದೆ ಎಂದು ವರದಿ ತಿಳಿಸಿದೆ.