Friday, June 20, 2025

ಸತ್ಯ | ನ್ಯಾಯ |ಧರ್ಮ

ಪೊಲೀಸ್ ಮಹಾನಿರ್ದೇಶಕರ ಟ್ವಿಟ್ ಗೆ ಕಂಗಾಲಾದ ಆಕಾಂಕ್ಷಿಗಳು

ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರ (DGP) ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರಕಟವಾದ ಇವತ್ತಿನ ಸುದ್ದಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಟೀಕೆ ಅಷ್ಟೆ ಅಲ್ಲದೆ ಸಾಕಷ್ಟು ಮಂದಿ ಆ ಟ್ವಿಟ್ ಗೆ ಪ್ರತಿಕ್ರಯಿಸಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಟ್ವಿಟ್ ನಲ್ಲಿ ಏನಿದೆ.? ನೋಡೋಣ ಬನ್ನಿ.

ಸಧ್ಯ ಇದೊಂದು ಟ್ವಿಟ್ ಅವಕಾಶ ವಂಚಿತರ ನಿದ್ದೆಗೆಡಿಸಿದೆ. ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರ, ಕೋವಿಡ್ ಸಂಬಂಧ ತಡೆದ ನೇಮಕಾತಿಗೆ ಈಗ ಇಲಾಖೆಗೆ ಸೇರುವ ಕನಸು ಹೊತ್ತವರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

3484 ಸಶಸ್ತ್ರ ಪೊಲೀಸ್ ಪೇದೆ ನೇಮಕಾತಿಗೆ DGP ಕರ್ನಾಟಕ ಟ್ವಿಟ್ಟರ್ ಖಾತೆಯಿಂದ ಆಹ್ವಾನ ಕೊಡಲಾಗಿತ್ತು. ಅದರಲ್ಲಿ ವಯೋಮಿತಿ 27 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರ ಮತ್ತು ಇಲಾಖೆಯ ಈ ಒಂದು ನಿರ್ಧಾರಕ್ಕೆ ಬಂದ ಬಹುತೇಕ ಮಂದಿ ನೋವಿನಿಂದ ಪ್ರತಿಕ್ರಯಿಸಿದ್ದಾರೆ.

ಹೆಚ್ಚು ಬಡ ವರ್ಗಗಳ ಅಭ್ಯರ್ಥಿಗಳೇ ಆಯ್ಕೆ ಮಾಡಿಕೊಳ್ಳುವ ಈ ಹುದ್ದೆಯ ವಯೋಮಿತಿಯ ಕಾರಣಕ್ಕೆ ಆಕಾಂಕ್ಷಿಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. “ಸರ್ ದಯಮಾಡಿ ವಯೋಮಿತಿ ಸಡಿಲಿಕೆ ಮಾಡಿ ಈಗ ಹೊರಡಿಸಿರುವ ನೋಟಿಫಿಕೇಶನ್ ಅನ್ನು ಪ್ರಾರಂಭಿಸಿ ಏಕೆಂದರೆ ಎಷ್ಟೋ ಆಕಾಂಕ್ಷಿಗಳು ವಯೋಮಿತಿ ಜೂನ್ ಜುಲೈ ತಿಂಗಳಲ್ಲಿ ಮುಗಿದಿದ್ದು ಈ ನೋಟಿಫಿಕೇಶನ್ ನಿಂದ ವಂಚಿತರಾಗಿರುವರು. ದಯಮಾಡಿ ಒಂದು ಅವಕಾಶ ಮಾಡಿಕೊಡಿ” ಎಂದು ಆಕಾಂಕ್ಷಿಯೊಬ್ಬರು ಹೇಳಿದ್ದಾರೆ.

ಇದರ ಜೊತೆಗೆ “#PCವಯೋಮಿತಿಹೆಚ್ಚಿಸಿ

Policeವಯೋಮಿತಿಹೆಚ್ಚಿಸಿ ಪ್ರತಿ ಟ್ವಿಟ್ಟಿನಲ್ಲಿ ಮೇಲಿನ ಎರಡು ಹ್ಯಾಷ್ ಟ್ಯಾಗ್ ಗಳನ್ನು ಆದಷ್ಟು ಬಳಸಿ ಜೊತೆಗೆ ಸರ್ಕಾರದ ಮುಖ್ಯಸ್ಥರನ್ನು ಟ್ಯಾಗ್ ಮಾಡಿ @BSBommai @DgpKarnataka @JnanendraAraga” ಎಂಬುದಾಗಿ ಹ್ಯಾಶ್ ಟಾಗ್ ಅಭಿಯಾನಕ್ಕೆ ಕರೆ ನೀಡಿದ್ದಾರೆ.

ಭಾರತದ ಇನ್ನಿತರೆ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಆಂದ್ರಪ್ರದೇಶ, ಕೇರಳ ರಾಜ್ಯಗಳ ಪೊಲೀಸ್ ಪೇದೆಗಳ ವಯೋಮಿತಿ ಬಗ್ಗೆ ಪ್ರಸ್ತಾಪಿಸಿ, ಅವೆಲ್ಲ ರಾಜ್ಯಗಳಲ್ಲಿ ಇಲ್ಲದ ವಯೋಮಿತಿ ಸಮಸ್ಯೆ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಏಕೆ? ಅಲ್ಲೆಲ್ಲಾ 33, 34 ರಿಂದ 36 ವರ್ಷದ ವರೆಗೂ ವಯೋಮಿತಿ ಏರಿಕೆ ಇದೆ ಎಂದು ಪ್ರಸ್ತಾಪಿಸಿ ರಾಜ್ಯ ಸರ್ಕಾರ ಮತ್ತು ಇಲಾಖೆಯ ನಿರ್ಧಾರದ ಬಗ್ಗೆ ಆಕ್ರೋಶ ಮತ್ತು ನೋವನ್ನು ತೋಡಿಕೊಂಡಿದ್ದಾರೆ.

ಬಹುತೇಕ ಎಲ್ಲಾ ಇಲಾಖೆಗಳ ನೇಮಕಾತಿ, ಪದೋನ್ನತಿಗಳ ಬಗ್ಗೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಈ ನೇಮಕಾತಿ ವಯೋಮಿತಿ ಬಗ್ಗೆ ಬಹುತೇಕ ಬಡ ವರ್ಗಗಳ ಆಕಾಂಕ್ಷಿಗಳ ಹೊಟ್ಟೆ ಮೇಲೆ ಹೊಡೆದಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page