Monday, June 17, 2024

ಸತ್ಯ | ನ್ಯಾಯ |ಧರ್ಮ

ದಲಿತರ ಮೇಲಿನ ದೌರ್ಜನ್ಯವೂ…ದಲಿತರ ಮನೆ ಭೇಟಿಯೂ…

ದಲಿತರ ಪರವಾಗಿಯೇ ಇರುವವರು ನಾನು ದಲಿತರ ಪರ ಎಂದು ಬಿಗುಮಾನದಿಂದ ಹೇಳಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ದಲಿತರ ಮನೆ ಪ್ರವೇಶದಿಂದ ಸಮಾನತೆಯನ್ನಾಗಲಿ ದಲಿತರ ಅಸ್ಮಿತೆಯನ್ನಾಗಲಿ ಸೃಷ್ಟಿಸಲು ಸಾಧ್ಯವಿಲ್ಲ… ಕ್ಯಾಂಪಸ್‌ ಕನ್ನಡಿಯಲ್ಲಿ  ಪತ್ರಿಕೋದ್ಯಮ ವಿದ್ಯಾರ್ಥಿ ಯಾದಗಿರಿಯ ಮಾಳಿಂಗರಾಯ ಕೆಂಭಾವಿಯವರು ಬರೆದಿದ್ದಾರೆ.

ಇತ್ತೀಚಿಗೆ ದಲಿತರ ಮನೆಗೆ ಹೋಗಿ ಅವರ ಆತಿಥ್ಯವನ್ನು ಸ್ವೀಕರಿಸುವುದು ರಾಜಕಾರಣಿಗಳ ಹೊಸತರಹದ ಶೋಕಿಯಾಗಿದೆ. ಚುಣಾವಣೆ ಹತ್ತಿರ ಬರುತ್ತಿದ್ದಂತೆ ಈ ರೀತಿಯ ಶೋಕಿಗಳು ಹೆಚ್ಚೆಚ್ಚು ಕಾಣುತ್ತವೆ. ಬೇರೆ ಯಾವುದಾದರು ಜಾತಿಯವರ ಮನೆಗೆ ಹೋದಾಗ ನಾನು ಈ ಜಾತಿಯವರ ಮನೆಗೆ ಹೋಗಿ ಊಟ ಮಾಡಿದೆ ಎಂದು ಹೇಳಿಕೊಳ್ಳುವುದಿಲ್ಲ. ಆದರೆ ದಲಿತರ ಮನೆಗೆ ಹೋದಾಗ ಮಾತ್ರ ದೊಡ್ಡ ಸುದ್ದಿ ಮಾಡಿ ಬಿಡುತ್ತಾರೆ. ದಲಿತರ ಮೇಲೆ ಆಗಾಗ ತೋರಿಸುವ ಈ ರೀತಿಯ ಅನುಕಂಪ, ತೋರಿಕೆಯ ಮಾತುಗಳು ಅವರ ಘನತೆಯನ್ನು ಕುಗ್ಗಿಸುತ್ತವೆಯೇ ಹೊರತು ಅವರ ಜೀವನದಲ್ಲಿ ಯಾವೊಂದು ಬದಲಾವಣೆಯನ್ನು ತರಲು ಸಾಧ್ಯವಿಲ್ಲ.

ಶತಮಾನಗಳೇ ಕಳೆದರು ಅಸ್ಪೃಶ್ಯತೆ ನಡೆಯುತ್ತಲೇ ಇದೇ. ಮನುಷ್ಯರನ್ನು ಮನುಷ್ಯರಂತೆ ನೋಡುವ ಸಮಾಜ ನಿರ್ಮಾಣದ ಕನಸು ಇನ್ನೂ ಕನಸಾಗಿ ಉಳಿದಿದೆ. ದಲಿತರ ಅಸ್ಮಿತೆಗಾಗಿ ಬಾಬಾ ಸಾಹೇಬರಾದಿಯಾಗಿ ಎಷ್ಟೋ ಜನ ತಮ್ಮ ಜೀವನ ಸವೆಸಿದ್ದಾರೆ. ಅದರ ಸಾರ್ಥಕ ಫಲ ಮಾತ್ರ ದೊರೆತಿಲ್ಲ. ಪ್ರತಿದಿನ ಎಲ್ಲಾದರೊಂದು ಕಡೆ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತವೆ. ಜಾತಿ ಸಮಸ್ಯೆ ಎನ್ನುವುದು ಭಾರತದಲ್ಲಿ ವಿಷಮ ಸ್ಥಿತಿಯಲ್ಲಿದೆ. ಇದಕ್ಕೆ ಪರಿಹಾರವನ್ನು ಕಂಡು ಹಿಡಿಯುವ, ಸಾಮರಸ್ಯವನ್ನು ಬಿತ್ತುವ ಕೆಲಸ ಮಾಡಬೇಕಿದ್ದ ಜನಪ್ರತಿನಿಧಿಗಳು ದಲಿತರ ಮನೆಗೆ ಪ್ರವೇಶ ಮಾಡಿ ಅಲ್ಲಿ ಊಟ ಮಾಡುವುದನ್ನೇ ದೊಡ್ಡ ಸಾಹಸವೆಂಬಂತೆ ತೋರಿಸುವುದು ಚುನಾವಣಾ ತಂತ್ರಗಾರಿಕೆಯಂತೆಯೇ ಭಾಸವಾಗುತ್ತಿದೆ.

ಇವರು ನಿಜವಾಗಲು ದಲಿತರ ಪರವೇ ?

ಆಗಾಗ ಮಾಧ್ಯಮಗಳಲ್ಲಿ ದಲಿತರ ಮನೆ ಪ್ರವೇಶ ಕುರಿತಾದ ವರದಿಗಳನ್ನು ನೋಡಿದಾಗ ನನಗೆ ಮೊದಲು ಹೊಳೆಯುವ ಪ್ರಶ್ನೆ ನಿಜವಾಗಲು ಇವರು ದಲಿತರ ಪರವೇ? ಎಂಬುದು. ದಲಿತರ ಪರವಾಗಿಯೇ ಇರುವವರು ನಾನು ದಲಿತರ ಪರ ಎಂದು ಬಿಗುಮಾನದಿಂದ ಹೇಳಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ದಲಿತರ ಮನೆ ಪ್ರವೇಶದಿಂದ ಸಮಾನತೆಯನ್ನಾಗಲಿ ದಲಿತರ ಅಸ್ಮಿತೆಯನ್ನಾಗಲಿ ಸೃಷ್ಟಿಸಲು ಸಾಧ್ಯವಿಲ್ಲ. ಅವರನ್ನು ಎಲ್ಲರಂತೆಯೇ ಗೌರವದಿಂದ ಕಾಣುವುದು ಅವಶ್ಯಕವಾಗಿದೆ. ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ಮತ್ತು ಅವರಿಗೆ ಅನ್ಯಾಯವಾದಾಗ ಯಾವ ಮೇಲ್ಜಾತಿಯ ಜನ ಪ್ರತಿನಿಧಿಗಳು ಬಂದು ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದಾರೆ ? ಯಾರು ಬೀದಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ ? ರಾಜಕಾರಣಿಗಳು ಭೇಟಿ ನೀಡಿದ ಮನೆಗಳು ಮಾತ್ರ ಒಂದಷ್ಟು ಬದಲಾವಣೆ ಕಂಡಿರಬಹುದು. ಇಲ್ಲವೇ ಅವರು ಹೋದ ಮನೆಯವರಿಗೆ ಎರಡು ಲಕ್ಷವೋ ಮೂರು ಲಕ್ಷವೋ ಹಣ ಕೊಟ್ಟು ಅವರನ್ನು ಸಮಾಧಾನ ಪಡಿಸಿರಬಹುದು. ಆದರೆ, ಅಂಥದ್ದೇ ಹಲವಾರು ಕುಟುಂಬಗಳಿಗೆ ಯಾವ ರೀತಿ ಸಹಕಾರಿಯಾಗಿದ್ದಾರೆ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕು. ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಲೇ ಇದೆ. ಈ ಬಾರಿ 75 ದಿನಗಳಿಂದ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿದ್ದಾರೆ. ಇಂತಹ ಶಾಶ್ವತ ಹಕ್ಕುಗಳನ್ನು ಒದಗಿಸಲು ಸಾಧ್ಯವಾಗದವರು ಎಷ್ಟು ಸಾರಿ ದಲಿತರ ಮನೆ ಪ್ರವೇಶ ಮಾಡಿದರೂ ಅಷ್ಟೇ…

ದಲಿತರ ಮೇಲಿನ ದೌರ್ಜನ್ಯಗಳು

ಪ್ರತಿ ವರ್ಷ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. 2021ರಲ್ಲಿ ರಾಷ್ಟ್ರೀಯ ಅಪರಾಧಗಳ ದಾಖಲೆಯ ಬ್ಯೂರೋ ವರದಿಯ ಪ್ರಕಾರ ಒಟ್ಟು 50,900 ಪ್ರಕಣಗಳು ದಾಖಲಾಗಿವೆ. ಇದರಲ್ಲಿ ಶೇ. 64ರಷ್ಟು ಪ್ರಕರಣಗಳು ಮಾತ್ರ ಆರೋಪ ಪಟ್ಟಿಗೆ ದಾಖಲಾಗಿದ್ದು, ಶೇ. 36 ರಷ್ಟು ಪ್ರಕರಣಗಳ ತನಿಖೆ ಆರಂಭವಾಗಿಲ್ಲ.

ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು

ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅನುಷ್ಟಾನ 2019ರ ವಾರ್ಷಿಕ ರಾಜ್ಯ ವರದಿಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ದಿನಕ್ಕೊಬ್ಬ ದಲಿತ ವ್ಯಕ್ತಿಯ ಕೊಲೆಯಾದರೆ ಪ್ರತಿ ಎರಡು ದಿನಕ್ಕೊಂದು ದಲಿತ ಮಹಿಳೆಯ ಮೇಲೆ ಅತ್ಯಾಚಾರವಾಗುತ್ತಿದೆ. ಎಸ್ ಸಿ, ಎಸ್ ಟಿ ಪ್ರಕರಣಗಳ ಪ್ರಮಾಣ ಶೇ. 11.92. ಅದರಲ್ಲಿ ಶಿಕ್ಷೆಯಾಗುವ ಪ್ರಮಾಣ ಶೇ. 3.79 ರಷ್ಟು ಮಾತ್ರ. ಇತ್ತೀಚಿನ ದಿನಗಳಲ್ಲಿ ಕೊಲೆಗಳಿಗಿಂತ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದ್ದು ಮಹಿಳೆಯರು ಭಯದಿಂದ ಬದುಕುವಂತಾಗಿದೆ.

ಇಂಥ ಸಮಸ್ಯೆಗಳು ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ದಲಿತರು ಅನುಭವಿಸುತ್ತಲೇ ಬರುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೆಲಸ ಮಾಡುವುದರ ಮೂಲಕ ತಾನು ದಲಿತ ಪರ ಎಂದು ಕರೆಸಿಕೊಳ್ಳಬೇಕು. ಹೀಗೆ ಕರೆಸಿಕೊಳ್ಳುವುದರಲ್ಲಿ ನ್ಯಾಯವಿದೆ.

ಮಾಳಿಂಗರಾಯ ಕೆಂಭಾವಿ, ಯಾದಗಿರಿ

ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ

Related Articles

ಇತ್ತೀಚಿನ ಸುದ್ದಿಗಳು