Friday, June 20, 2025

ಸತ್ಯ | ನ್ಯಾಯ |ಧರ್ಮ

Atrocity Case : ಪುನೀತ್ ಕೆರೆಹಳ್ಳಿ ಬಂಧನ

ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ, ಹಿಂದುತ್ವದ ಹೆಸರಿನಲ್ಲಿ ಗೂಂಡಾಗಿರಿ ಹಾಗೂ ಕೊಲೆ ಆರೋಪದಲ್ಲೂ ಹೆಸರು ಕೇಳಿಬಂದ ಪುನೀತ್ ಕೆರೆಹಳ್ಳಿ ಬಂಧನವಾಗಿದೆ. ಮಹಿಳೆಯನ್ನು ತುಚ್ಛವಾಗಿ ಅವಮಾನಿಸಿ, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಮೇಲೆ ಜಾತಿ ನಿಂದನೆ ಮಾಡಿದ ಆರೋಪದ ಅಡಿಯಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಇದ್ರಿಸ್ ಪಾಷಾ ಕೊಲೆ ಆರೋಪದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಆರೋಪಿಯಾಗಿದ್ದು, ರಾಷ್ಟ್ರ ರಕ್ಷಣಾ ಪಡೆ ಎಂಬ ಪುಂಡರ ಗುಂಪು ಕಟ್ಟಿಕೊಂಡು, ಸಮಾಜದಲ್ಲಿ ಸಾಮರಸ್ಯ ಕದಡುವ, ಸಮಾಜ ವಿರೋಧಿ ಕಾರ್ಯಗಳ ಮೂಲಕವೇ ಈತ ಗುರುತಿಸಿಕೊಂಡಿದ್ದ. 2013ರಲ್ಲೇ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಸಿಲುಕಿ ಬಿದ್ದಿದ್ದ ಈತ ಇತ್ತೀಚೆಗೆ ಹಿಂದುತ್ವದ ಹೆಸರಿನಲ್ಲಿ ಗೂಂಡಾಗಿರಿಗೆ ತೊಡಗಿದ ಬಗ್ಗೆಯೂ ಸಾರ್ವಜನಿಕ ಆರೋಪಗಳಿವೆ. ಇತ್ತೀಚೆಗೆ ವಿಧಾನಸೌಧಕ್ಕೆ ಕಲ್ಲು ಹೊಡೆಯುವ ಮತ್ತು ಬಸ್ಸಿಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಹಾಕಿದ್ದರ ಕುರಿತು ಪ್ರಕರಣ ದಾಖಲಾಗಿತ್ತು.

ಸಧ್ಯಕ್ಕೆ ಮಹಿಳೆಯ ಘನತೆಗೆ ಧಕ್ಕೆ ಬರುವಂತೆ ಪೋಸ್ಟ್ ಹಾಕಿ, ಪರಿಶಿಷ್ಟ ಜಾತಿಗೆ ಸೇರಿದ ಕನ್ನಡಪರ ಹೋರಾಟಗಾರ, ದಲಿತ ಮುಖಂಡ ರಣಧೀರ ಪಡೆಯ ಹರೀಶ್ ಕುಮಾರ್ ಭೈರಪ್ಪ ಅವರ ಕುರಿತು ಕೀಳುಮಟ್ಟದ ಭಾಷೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿದ್ದ. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಧ್ಯ ಈ ಪ್ರಕರಣದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರೀಶ್ ಕುಮಾರ್ ಭೈರಪ್ಪನವರು, “ಕೊನೆಗೂ ನನ್ನ ದೂರಿನ ಮೇರೆಗೆ ಪುನೀತ್ ಕೆರೆಹಳ್ಳಿ ಎನ್ನುವ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ. ನನ್ನ ಹಾಗೂ ನನ್ನ ಕುಟುಂಬದ ಮೇಲೆ ವೈಯಕ್ತಿಕ ದಾಳಿಗೆ ಇಳಿದು ತನ್ನ ಹೀನ ಮನಸ್ಥಿತಿಯನ್ನು ಪ್ರದರ್ಶನ ಮಾಡಿದ, ಸಂಘ ಪರಿವಾರದ ಮುಖಂಡ ಎಂದು ಹೇಳಿಕೊಳ್ಳುವ ವಿಕೃತ ಮನಸ್ಸಿನ ಹಿಂದೂ ಮುಖವಾಡದ ಕೊಲೆ ಆರೋಪಿ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿ ಸಮಾಜಘಾತಕ ಪುನೀತ್ ಕೆರೆಹಳ್ಳಿಯನ್ನು ನೆನ್ನೆಯಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದರು. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳಿದರು. ಪೊಲೀಸರ ಬೇಡಿಕೆ ಪುರಸ್ಕರಿಸಿದ ನ್ಯಾಯಾಧೀಶರು ಪುನೀತ್ ಕೆರೆಹಳ್ಳಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page