ಮಂಗಳೂರು : ಆಟೋರಿಕ್ಷಾವೊಂದರಲ್ಲಿ ಶನಿವಾರ ಸಂಜೆ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು ಇಬ್ಬರು ಗಾಯಗೊಂಡಿದ್ದು, ʼಇದೊಂದು ಭಯೋತ್ಪಾದನಾ ಕೃತ್ಯʼ ಎಂದು ಕರ್ನಾಟಕದ ಡೆಪ್ಯೂಟಿ ಜನರಲ್ ಆಫ್ ಪೊಲೀಸ್(ಡಿಜಿಪಿ) ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಗೋರಿ ಸಮೀಪದ ಗರೋಡಿ ಎಂಬಲ್ಲಿ ಆಟೋರಿಕ್ಷಾ ಸ್ಪೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಸ್ಪೋಟಗೊಂಡ ನಂತರ ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದರು. ಈ ಸ್ಪೋಟದಿಂದ ಸಾರ್ವಜನಿಕರು ಯಾವುದೇ ರೀತಿ ಆಂತಕ ಪಡುವ ಅಗತ್ಯ ಇಲ್ಲ. ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸಿ ಗೊಂದಲಕ್ಕೆ ಸೃಷ್ಟಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರದಂದು ಟ್ವೀಟ್ ಮಾಡಿರುವ ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಅವರು, ʼಈ ಸ್ಪೋಟ್ ಆಕಸ್ಮಿಕವಾದದ್ದಲ್ಲ, ಇದೊಂದು ಭಯೋತ್ಪಾದಕ ಕೃತ್ಯ ಎಂದು ದೃಢ ಪಟ್ಟಿದೆ. ಈ ಬಗ್ಗೆ ಹೆಚ್ಚಿನ ತನಿಖ ನಡೆಯುತ್ತಿದೆ. ಈ ಘಟನೆಯ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ಏಜೆನ್ಸಿಗಳೊಂದಿಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೆಲ ಮಾಧ್ಯಮ ವರದಿಗಳ ಪ್ರಕಾರ, ಆಟೋದಲ್ಲಿ ಪ್ರೆಶರ್ ಕುಕ್ಕರ್ ಮತ್ತು ಗ್ಯಾಸ್ ಸ್ಟೌವ್ ಬರ್ನರ್ ವಸ್ತುಗಳು ಆಟೋದಲ್ಲಿ ಪತ್ತೆಯಾಗಿವೆ. ಪೊಲೀಸರು ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಗಳಲ್ಲಿ, ಆಟೋರಿಕ್ಷಾಕ್ಕೆ ಬೆಂಕಿ ಹತ್ತಿ ಕೊಂಡಿರುವುದನ್ನು ಕಾಣಬಹುದು ಎಂದು ತಿಳಿಸಿದೆ.