Monday, March 16, 2026

ಸತ್ಯ | ನ್ಯಾಯ |ಧರ್ಮ

ಮತ್ತೊಂದು ಜಲಸಂಧಿ ಬಂದ್?: ಬಾಬ್ ಅಲ್-ಮಂಡೇಬ್ ಮುಚ್ಚುವುದಾಗಿ ಹೌತಿ ಸಂಘಟನೆ ಎಚ್ಚರಿಕೆ; ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ

ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ದಾಳಿಗಳ ಹಿನ್ನೆಲೆಯಲ್ಲಿ, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯುದ್ಧಕ್ಕೆ ಧುಮುಕುವ ಮುನ್ಸೂಚನೆ ನೀಡಿದ್ದಾರೆ. “ನಮ್ಮ ಬೆರಳುಗಳು ಟ್ರಿಗ್ಗರ್ ಮೇಲಿವೆ” ಎಂದು ಎಚ್ಚರಿಸಿರುವ ಸಂಘಟನೆ, ಪರಿಸ್ಥಿತಿ ಕೈಮೀರಿದರೆ ಕೆಂಪು ಸಮುದ್ರದ ಪ್ರಮುಖ ಮಾರ್ಗವಾದ ಬಾಬ್ ಅಲ್-ಮಂಡೇಬ್ ಅನ್ನು ಮುಚ್ಚುವುದಾಗಿ ಘೋಷಿಸಿದೆ.

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರಿಂದ ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತೈಲ ಮತ್ತು ಎಲ್‌ಪಿಜಿ ದರಗಳು ಗಗನಕ್ಕೇರಿವೆ. ಈಗ ಬಾಬ್ ಅಲ್-ಮಂಡೇಬ್ ಕೂಡ ಬಂದ್ ಆದರೆ ಜಾಗತಿಕ ಆರ್ಥಿಕತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ಬಾಬ್ ಅಲ್-ಮಂಡೇಬ್ ಜಲಸಂಧಿಯನ್ನು ‘ಕಣ್ಣೀರಿನ ದ್ವಾರ’ (Gate of Tears) ಎಂದು ಕರೆಯಲಾಗುತ್ತದೆ. ಇದು ಕೆಂಪು ಸಮುದ್ರವನ್ನು ಏಡನ್ ಕೊಲ್ಲಿ ಮತ್ತು ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುತ್ತದೆ. ಸೂಯೆಜ್ ಕಾಲುವೆಯ ಮೂಲಕ ಏಷ್ಯಾ ಮತ್ತು ಯುರೋಪ್ ನಡುವೆ ಸಂಚರಿಸುವ ಪ್ರತಿ ನೌಕೆಯೂ ಈ ಮಾರ್ಗವನ್ನೇ ಬಳಸಬೇಕು.

ಒಂದು ವೇಳೆ ಈ ಮಾರ್ಗ ಮುಚ್ಚಲ್ಪಟ್ಟರೆ, ಹಡಗುಗಳು ಆಫ್ರಿಕಾದ ‘ಕೇಪ್ ಆಫ್ ಗುಡ್ ಹೋಪ್’ ಮೂಲಕ ಸುತ್ತುಬಳಸಿ ಹೋಗಬೇಕಾಗುತ್ತದೆ. ಇದರಿಂದ 20-25 ದಿನಗಳ ಪ್ರಯಾಣವು 40 ದಿನಗಳವರೆಗೆ ವಿಸ್ತರಿಸುತ್ತದೆ. ಜಾಗತಿಕ ವ್ಯಾಪಾರದ ಶೇ. 12ರಷ್ಟು ಮತ್ತು ಶೇ. 10ರಷ್ಟು ತೈಲ ಹಾಗೂ ಎಲ್‌ಎನ್‌ಜಿ ರವಾಣೆ ಈ ಮಾರ್ಗದಲ್ಲೇ ನಡೆಯುವುದರಿಂದ ಇದರ ಮಹತ್ವ ಅತಿ ದೊಡ್ಡದಿದೆ.

ಹೌತಿಗಳು ಈ ಜಲಸಂಧಿಯನ್ನು ಮುಚ್ಚಿದರೆ ಕೇವಲ ಇಂಧನ ಮಾತ್ರವಲ್ಲದೆ ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಮತ್ತು ಆಹಾರ ಪದಾರ್ಥಗಳ ಪೂರೈಕೆ ಸರಪಳಿಯೂ ಕಡಿತಗೊಳ್ಳಲಿದೆ. ರವಾನೆ ವೆಚ್ಚ ಹೆಚ್ಚಾಗುವುದರಿಂದ ಹಣದುಬ್ಬರ ಏರಿಕೆಯಾಗಿ ವಿಶ್ವದಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಈಗಾಗಲೇ ಹಾರ್ಮುಜ್ ಸಂಘರ್ಷದಿಂದ ತತ್ತರಿಸಿರುವ ದೇಶಗಳಿಗೆ ಇದು ‘ಬಾಣಲೆಯಿಂದ ಒಲೆಗೆ ಬಿದ್ದಂತಾಗಲಿದೆ’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page