ಹಿಂದೂ ರಾಷ್ಟ್ರ ಹಾಗೂ ಮುಸ್ಲಿಮರ ಕುರಿತು ಹೇಳಿಕೆ: ಬಿಹಾರದಲ್ಲಿ ಬಾಬಾ ರಾಮದೇವ್ ವಿರುದ್ಧ ದೂರು ದಾಖಲು

ಹಿಂದೂ ರಾಷ್ಟ್ರದ ಪರಿಕಲ್ಪನೆ ಹಾಗೂ ಮುಸ್ಲಿಂ ಸಮುದಾಯದ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್ದೇವ್ ವಿರುದ್ಧ ಬಿಹಾರದ ಮುಜಾಫರ್‌ಪುರ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಹಕ್-ಎ-ಹಿಂದೂಸ್ತಾನ್ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತಮನ್ನಾ ಹಶ್ಮಿ ಈ ದೂರು ದಾಖಲಿಸಿದ್ದು, ರಾಮ್ದೇವ್ ಅವರ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯವು ದೂರನ್ನು ಸ್ವೀಕರಿಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 21 ಕ್ಕೆ ನಿಗದಿಪಡಿಸಿದೆ.

ದೂರಿನಲ್ಲಿ ರಾಮಕೃಷ್ಣ ಯಾದವ್ ಎಂದೂ ಕರೆಯಲ್ಪಡುವ ಬಾಬಾ ರಾಮ್ದೇವ್ ಅವರು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 299 ಮತ್ತು 302 ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 212 ರ ಅಡಿಯಲ್ಲಿ ಈ ದೂರು ದಾಖಲಿಸಲಾಗಿದೆ. ಜುಲೈ 13 ರ ರಾತ್ರಿ ದೂರದರ್ಶನವೊಂದರಲ್ಲಿ ಪ್ರಸಾರವಾದ ಭಾಷಣದ ವೇಳೆ ರಾಮ್ದೇವ್ ಅವರು ನೀಡಿದ ಹೇಳಿಕೆಗಳು ಸಮಾಜದಲ್ಲಿ ಧಾರ್ಮಿಕ ಅಶಾಂತಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಮನ್ನಾ ಹಶ್ಮಿ ಆರೋಪಿಸಿದ್ದಾರೆ.

ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಬಾಬಾ ರಾಮ್ದೇವ್ ಅವರು ದೇವಬಂದ್ ಉಲ್ಲೇಖಿಸಿ, “ಹರಿದ್ವಾರದ ಸಮೀಪ ನಮಗೊಂದು ದೇವಬಂದ್ ಇದೆ. 2009 ರಲ್ಲಿ ನನ್ನನ್ನು ಅಲ್ಲಿಗೆ ಆಹ್ವಾನಿಸಲಾಗಿತ್ತು. ನಮ್ಮ ಧರ್ಮಗಳು ಬೇರೆಯಾಗಿರಬಹುದು, ಆದರೆ ನಮ್ಮ ಪೂರ್ವಜರು ಒಬ್ಬರೇ ಎಂದು ನಾನು ಅಲ್ಲಿ ಅವರಿಗೆ ಹೇಳಿದ್ದೆ” ಎಂದಿದ್ದಾರೆ.

ಹಿಂದೂ ರಾಷ್ಟ್ರದ ಪರಿಕಲ್ಪನೆಯ ಬಗ್ಗೆ ಮಾತನಾಡುತ್ತಾ, “ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಯಾರೂ ಹೆದರುವ ಅಗತ್ಯವಿಲ್ಲ. ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂ ಆರ್ಯ-ವೈದಿಕರಾಗಿದ್ದರು. ಇದು ನಮ್ಮ ಮುಂದೆ ಅತ್ಯಂತ ಸ್ಪಷ್ಟವಾಗಿ ಬರೆಯಲ್ಪಟ್ಟಿದೆ” ಎಂದು ಸೇರಿಸಿದ್ದಾರೆ.

ಮುಂದುವರಿದು ಮಾತನಾಡಿದ ರಾಮ್ದೇವ್, “ಹಿಂದೂ ರಾಷ್ಟ್ರ ನಿರ್ಮಾಣವಾದರೆ ಮುಸ್ಲಿಮರು ಎಲ್ಲಿಗೆ ಹೋಗುತ್ತಾರೆ ಎಂದು ಕೆಲವರು ಪ್ರಶ್ನಿಸುತ್ತಾರೆ. ನಿಮ್ಮ ಪೂರ್ವಜರ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಿ. ನೀವು ಗಡ್ಡ ಕ್ಷೌರ ಮಾಡಿಕೊಳ್ಳಿ ಅಥವಾ ಸುನ್ನತಿ ಮಾಡಿಸಿಕೊಳ್ಳಿ, ನಿಮಗೆ ಇಷ್ಟ ಬಂದ ಉಡುಪನ್ನು ಧರಿಸಿ, ಆದರೆ ನಿಮ್ಮ ಚಾರಿತ್ರ್ಯವನ್ನು ನಿಮ್ಮ ಪೂರ್ವಜರಂತೆ ಇಟ್ಟುಕೊಳ್ಳಿ. ಹಿಂದುಸ್ತಾನದಲ್ಲಿ ಮುಸ್ಲಿಮರಿಗಾಗಲಿ ಅಥವಾ ಕ್ರಿಶ್ಚಿಯನ್ನರಿಗಾಗಲಿ ಯಾವುದೇ ಮುಖಭಂಗ ಅಥವಾ ಆಪತ್ತಿಲ್ಲ” ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದ್ದು, ಸಮಾಜದಲ್ಲಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ತಮನ್ನಾ ಹಶ್ಮಿ ತಮ್ಮ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು