ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಮರುವಿಂಗಡಣೆಯ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಲಾಗಿದೆ.
ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ವಾರ್ಡು ಮರುವಿಂಗಡಣೆ ಸಮಿತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ 243 ವಾರ್ಡ್ ಗಳನ್ನು ರದ್ದುಗೊಳಿಸಿ 225 ವಾರ್ಡ್ ಗಳನ್ನು ಪಟ್ಟಿ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ವಾರ್ಡು ಮರುವಿಂಗಡಣೆ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಬಿಜೆಪಿ ಪಕ್ಷದ ಅಧಿಕಾರಾವಧಿಯಲ್ಲಿ ಮಾಡಿರೋ ವಾರ್ಡ್ ವಿಂಗಡಣೆ ಸೂಕ್ತವಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿತ್ತು. ಇದೀಗ ಕಾಂಗ್ರೆಸ್ ಪಕ್ಷ ವಾರ್ಡ್ಗಳನ್ನು ಮರುವಿಂಗಡಣೆ ಮಾಡಿದೆ. 15 ವಾರ್ಡ್ಗಳನ್ನು ಕಡಿಮೆ ಮಾಡಿ ಸಾರ್ವಜನಿಕ ಆಕ್ಷೇಪಕ್ಕೆ 15 ದಿನಗಳ ಗಡುವು ನೀಡಿದೆ.
ಬಿಬಿಎಂಪಿ ಸದಸ್ಯರ ಅಧಿಕಾರದ ಅವಧಿ 2020 ಕ್ಕೆ ಮುಗಿದಿದ್ದರೂ ಇನ್ನೂ ಚುನಾವಣೆ ನಡೆದಿಲ್ಲ. ಈ ಸಂದರ್ಭದಲ್ಲಿ ಮಾಡಿದ್ದ 198 ವಾರ್ಡುಗಳ ಮರುವಿಂಗಡಣೆಯನ್ನು ರದ್ದು ಮಾಡಿ ಬಿಬಿಎಂಪಿ-2020 ಹೊಸ ಕಾಯ್ದೆಯನ್ನು ಜಾರಿಗೆ ತರಲಾಯಿತು. ಮತ್ತೆ ವಾರ್ಡುಗಳ ಸಂಖ್ಯೆಯನ್ನು 243 ಕ್ಕೆ ಏರಿಸಿದಾಗ ಆಕ್ಷೇಪ ಎತ್ತಿದ ಪಾಲಿಕೆಯ ಮಾಜೀ ಸದಸ್ಯರು ಹೈಕೋರ್ಟ್ ಗೆ ಹೋಗಿದ್ದರು. ಹೈಕೋರ್ಟ್ 12 ವಾರಗಳಲ್ಲಿ ಹೊಸದಾಗಿ ವಾರ್ಡುಗಳ ಪಟ್ಟಿ ತಯಾರಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ರಚಿಸಿತು.