ಬೆಂಗಳೂರು: ಇಂದು ವಿದೇಶದಿಂದ ಆಗಮಿಸಿದ ಪ್ರಧಾನಿ ಮೋದಿಯವರನ್ನು ನೋಡಲು ಅಡಿ ಮೇಲೆ ಬಿದ್ದು ನೂಕು ನುಗ್ಗಲು ಮಾಡಿದ ಬಿಜೆಪಿ ನಾಯಕರು ಈಗ ನಗೆಪಾಟಲಿಗೀಡಾಗಿದ್ದಾರೆ.
ಇಸ್ರೋ ಚಂದ್ರಯಾನ ಯೋಜನೆ – 3ರ ಯಶಸ್ಸಿಗೆ ಅಭಿನಂದಿಸಲೆಂದು ಮೋದಿ ವಿದೇಶದಿಂದ ನೇರವಾಗಿ ಬೆಂಗಳೂರಿನಲ್ಲಿ ಬಂದಿಳಿದಿದ್ದರು. ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಬೀದಿ ಬದಿಯಲ್ಲಿ ನಿಂತು ಮೋದಿಯವರೆಡೆಗೆ ಕೈ ಬೀಸಲು ಪೈಪೋಟಿ ನಡೆಸುತ್ತಿರುವ ಬಿಜೆಪಿ ನಾಯಕರ ಫೋಟೊ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಸೃಷ್ಟಿಸಿದೆ.
ಬಿಜೆಪಿಯ ಶಾಸಕರಾದ ಗೋಪಾಲಯ್ಯ, ಮುನಿರತ್ನ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯದ ಹಲವು ಬಿಜೆಪಿ ನಾಯಕರನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಈ ಕುರಿತು ಟ್ವೀಟ್ (ಎಕ್ಸ್) ಮಾಡಿರುವ ರಾಜ್ಯ ಕಾಂಗ್ರೆಸ್ “ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಪ್ರಾಮುಖ್ಯತೆಯನ್ನೂ ಕೊಡುತ್ತಿಲ್ಲ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ! ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ!
@BJP4Karnataka ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ.” ಎಂದು ಟ್ವೀಟ್ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಸಾಕಷ್ಟು ಟ್ರೋಲ್ ನಡೆಯುತ್ತಿದ್ದ ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಬಿಜೆಪಿ ಬೆಂಬಲಿಗರು ಮೌನದ ಮೊರೆಹೋಗಿದ್ದಾರೆ.
ಈ ಕುರಿತು “ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಪ್ರಧಾನಿ ಅವರ ಬಳಿ ಎಲ್ಲರನ್ನೂ ಬಿಡಲು ಆಗಲ್ಲ, ಸೆಕ್ಯೂರಿಟಿ ಸಮಸ್ಯೆ ಇರುತ್ತದೆ ಹಾಗಾಗಿ ಹೊರಗಡೆ ನಿಂತಿದ್ದೆವು. ಜನ ಕಾಂಗ್ರೆಸ್ ಗೆ 5 ವರ್ಷ ಅಧಿಕಾರ ಕೊಟ್ಟದ್ದು ಬೆಳಿಗ್ಗೆ ಎದ್ದು ಮರ, ಗಿಡಗಳ ಮೇಲೆ ಕುಳಿತು ಕಾ..ಕಾ…ಅನ್ನೋದಿಕ್ಕಲ್ಲ, ಮೊದಲು ಕಾಂಗ್ರೆಸ್ ನವರಿಗೆ ಕೆಲಸ ಮಾಡಲು ಹೇಳಿ ಎಂದು ಗುಡುಗಿದ್ದಾರೆ.” ಎಂದು ಸಮಜಾಯಿಷಿ ನೀಡಿದ್ದಾರೆ.