ಜೈಪುರ: ಬಿಜೆಪಿಯ ಹಿರಿಯ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇರಳದಲ್ಲಿ ಗೋಹತ್ಯೆ ನಡೆಯುತ್ತದೆ ಇದೇ ಕಾರಣದಿಂದಾಗಿ ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅವರು ಹೇಳಿದರು.
ಎಲ್ಲಿ ಗೋಹತ್ಯೆ ನಡೆದರೂ ಇದೇ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದರು. ರಾಜಸ್ಥಾನದ ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಜ್ಞಾನದೇವ್ ಅಹುಜಾ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಕೇರಳದ ವಯನಾಡ್ ದುರಂತವು ಗೋಹತ್ಯೆಯೊಂದಿಗೆ ಸಂಬಂಧ ಹೊಂದಿದೆ. ಕೇರಳದಲ್ಲಿ ಈ ಪದ್ಧತಿ ನಿಲ್ಲದಿದ್ದರೆ ಇಂತಹ ದುರಂತಗಳು ನಡೆಯುತ್ತಲೇ ಇರುತ್ತವೆ ಎಂದರು.
ಇದೇ ವೇಳೆ, 2018ರಿಂದ ಗೋಹತ್ಯೆ ನಡೆದಿರುವ ಹಲವು ಪ್ರದೇಶಗಳಲ್ಲಿ ಕೇರಳ ಮಾದರಿಯ ಘಟನೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಜ್ಞಾನದೇವ್ ಅಹುಜಾ ಹೇಳಿದ್ದಾರೆ. ಆದರೆ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಪದೇ ಪದೇ ಸಂಭವಿಸುವ ಅನಾಹುತಗಳಿಗೂ ಗೋಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಪ್ರಕೃತಿ ವಿಕೋಪದಿಂದ ಅಲ್ಲಿ ಅನಾಹುತಗಳು ಸಂಭವಿಸುತ್ತವೆ ಎಂದರು.
ಆರಂಭದಿಂದಲೂ ಬಿಜೆಪಿ ನಾಯಕರು ಚಿತ್ರವಿಚಿತ್ರ ಹೇಳಿಕೆಗೆ ಖ್ಯಾತರು ಅವರ ಸಾಲಿಗೆ ಈಗ ಇನ್ನೊಬ್ಬ ನಾಯಕ ಸೇರಿಕೊಂಡಂತಾಗಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ.