ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರ್ಣಾವದಿ ಸಂಶೋಧನೆ ಕೈಗೊಂಡಿರುವ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸಿ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡಬೇಕೆಂದು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ವಿಶ್ವವಿದ್ಯಾಲಯದ ಕುಲಪತಿಯವರಿಗೆ ಆಗ್ರಹಿಸಿದೆ.
ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡ ಸಂಶೋಧನಾ ವಿದ್ಯಾರ್ಥಿಗಳು, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು.
ಹಳೆಯ ಸಂಶೋಧನಾ ವಿದ್ಯಾರ್ಥಿ ನಿಲಯ ಮಳೆ ಬಂದರೆ ಸೋರುತ್ತಿದ್ದು ಮತ್ತು ಮೇಲ್ಟಾವಣಿಯ ಸಿಮೆಂಟ್ ಸೀಲಿಂಗ್ ಬೀಳುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅಪಾಯವಿದೆ. ಹಾಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಶೋಧನ ವಿದ್ಯಾರ್ಥಿನಿಲಯವನ್ನು ಶೀಘ್ರವಾಗಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಸ್.ಸಿ/ಎಸ್.ಟಿ ಘಟಕದಿಂದ ಲ್ಯಾಪ್ ಟಾಪ್ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕುಲಪತಿಗಳ ನೇತೃತ್ವದಲ್ಲಿ ನಡೆದು ಉತ್ತಮ ಗುಣಮಟ್ಟ ಲ್ಯಾಪ್ ಟಾಪ್ನ್ನು ಶೀಘ್ರವಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡಬೇಕು. ಜೆ.ಆರ್.ಎಸ್ ವಿದ್ಯಾರ್ಥಿಗಳಿಗೆ ಹಿಂದೆ ಎಸ್.ಸಿ/ಎಸ್.ಟಿ ಘಟಕದಿಂದ ಲ್ಯಾಪ್ಪಾಪ್ ನೀಡಲಾಗಿದೆ ಇದನ್ನು ಈ ವರ್ಷವು ಮುಂದುವರಿಸಬೇಕು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ವಾರ್ಷಿಕ ಸಾಧಿಲ್ವಾರು ವೆಚ್ಚವನ್ನು ಕಿರಿಯ ಸಂಶೋಧಕರಿಗೆ 25 ಸಾವಿರ ಹಾಗು ಹಿರಿಯ ಸಂಶೋಧಕರಿಗೆ 30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸಂಶೋಧನಾ ವಿದ್ಯಾರ್ಥಿಗಳು ಒತ್ತಾಯಿಸಿದರು.
ವಿಶ್ವವಿದ್ಯಾಲಯದ ಶಿಷ್ಯವೇತನ ಪಡೆಯುತ್ತಿರುವ ಸಂಶೋಧನಾರ್ಥಿಗಳಿಗೆ ಮೊದಲ ಎರಡು ವರ್ಷ ಕಿರಿಯ ಸಂಶೋಧಕರು ನಂತರ ಮೂರು ವರ್ಷ ಹಿರಿಯ ಸಂಶೋಧಕರು ಎಂದು ಪರಿಗಣಿಸಿ ಶಿಷ್ಯವೇತನ ನೀಡಬೇಕು. ಎಸ್.ಸಿ/ಎಸ್.ಟಿ ಘಟಕದಿಂದ ನೀಡುವ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ವಿದ್ಯಾರ್ಥಿಗಳು ವಿಚಾರ ಸಂಕಿರಣ ನಡೆಸಬೇಕು. ರಾಷ್ಟ್ರೀಯ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಸಾರಿಗೆ ವಸತಿ,ತಗಲುವ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸಬೇಕು ಮತ್ತು ಉತ್ತಮವಾದ ಸಂಶೋಧನ ಪ್ರಬಂದವನ್ನು ಆಯ್ಕೆಮಾಡಿ ಅವರಿಗೆ ಬಾಬಾ ಸಾಹೇಬ್ ಡಾ.ಬಿ.ಅರ್. ಅಂಬೇಡ್ಕರ್ ಚಿನ್ನದ ಪದಕವನ್ನು ಪ್ರತಿ ಘಟಿಕೋತ್ಸವದಲ್ಲಿ ನೀಡಬೇಕು.
ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸುವ ಒಂದು ಉನ್ನತವಾದ ಸೆಲ್ ನ್ನು ತೆರೆಯಬೇಕು ಹಾಗೂ ಸಂಶೋಧನಾರ್ಥಿಗಳಿಗೆ ಕ್ಷೇತ್ರ ಕಾರ್ಯ ಮಾಡಲು ಹ್ಯಾನ್ಸ್ ಕ್ಯಾಮರ ಎಸ್.ಸಿ/ಎಸ್.ಟಿ ಘಟಕದಿಂದ ವಿಶ್ವ ವಿದ್ಯಾಲಯ ವಿತರಿಸಬೇಕು ಎಂದು ಒತ್ತಾಯಿಸಲಾಗಿದ್ದು, ಪ್ರತಿಭಟನೆಯ ನಂತರ ವಿದ್ಯಾರ್ಥಿಗಳು ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು.