ಟಮಕ, ಕೋಲಾರ: ಪದವಿ ಕಾಲೇಜುಗಳು ಆರಂಭಗೊಂಡಿವೆ, ಆದರೆ ಕನ್ನಡ ಪಠ್ಯಪುಸ್ತಕವೇ ಇಲ್ಲ. ಪಠ್ಯಪುಸ್ತಕವಿರಲಿ, ಕನಿಷ್ಠ ಸಿಲಬಸ್ ಕೂಡ ನೀಡುತ್ತಿಲ್ಲ. ಇದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದುರ್ಗತಿ. ವಿಶ್ವವಿದ್ಯಾಲಯದ ನಿರ್ಲಕ್ಷ್ಯ, ಬೇಜವಾಬ್ದಾರಿತನಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಆದರೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಇತರೆಲ್ಲ ಭಾಷೆಗಳ ಪಠ್ಯಪುಸ್ತಕಗಳು ಸಿದ್ಧವಾಗಿ ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ತಲುಪಿವೆ. ಆದರೆ ಕನ್ನಡ ಭಾಷೆಯ ಪಠ್ಯಪುಸ್ತಕ ಮಾಯವಾಗಿದೆ. ತೆಲುಗು, ಪರ್ಷಿಯನ್, ಅರೆಬಿಕ್, ಉರ್ದು, ಸಂಸ್ಕೃತ ಭಾಷೆಯ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿರುವ ವಿಶ್ವವಿದ್ಯಾಲಯ ಕನ್ನಡ ಪಠ್ಯಪುಸ್ತಕ ಮುದ್ರಿಸಲು ಮೀನಮೇಷ ಎಣಿಸುತ್ತಿದೆ. ಹೀಗಾಗಿ ಕಾಲೇಜುಗಳು ಆರಂಭವಾದರೂ ಪಠ್ಯಪುಸ್ತಕವಿಲ್ಲದೆ ವಿದ್ಯಾರ್ಥಿಗಳು ನರಳುವಂತಾಗಿದೆ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಡಿಯಲ್ಲಿ ಇನ್ನೂರಕ್ಕೂ ಹೆಚ್ಚು ಪದವಿ ಕಾಲೇಜುಗಳು ಇದ್ದು, ಈ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಲೇಬೇಕಾದ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಈ ಸಂಬಂಧ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವಲ್ಲದೆ, ಬೆಂಗಳೂರು ಸೆಂಟ್ರಲ್ ಮತ್ತು ಜ್ಞಾನಭಾರತಿ ವಿಶ್ವವಿದ್ಯಾಲಯಗಳಲ್ಲೂ ಕನ್ನಡ ಭಾಷೆಯ ಪಠ್ಯಪುಸ್ತಕಗಳು ಇನ್ನೂ ಸಿದ್ಧವಾಗಿಲ್ಲ ಎಂದು ತಿಳಿದುಬಂದಿದ್ದು, ಪ್ರೊ.ಬಿ. ಗಂಗಾಧರ್ ಅವರ ನೇತೃತ್ವದ ಪಠ್ಯಪುಸ್ತಕ ಸಮಿತಿ ಇತರ ವಿಷಯಗಳ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದರೂ, ಕನ್ನಡ ಭಾಷೆಯ ಪಠ್ಯಪುಸ್ತಕವನ್ನು ತಡವಾಗಿ ಸಿದ್ಧಪಡಿಸುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.
ಪದವಿ ವಿದ್ಯಾರ್ಥಿಗಳಿಗೆ ಇದುವರೆಗೆ ಕನ್ನಡ ಪಠ್ಯಪುಸ್ತಕಗಳನ್ನು ಮತ್ತು ಸಿಲಬಸ್ ನೀಡದೇ ಇರುವುದರ ಕುರಿತು ʻಪೀಪಲ್ ಮೀಡಿಯಾʼ ವಿಶ್ವವಿದ್ಯಾಲಯದ ಕುಲಸಚಿವ ಡೊಮಿನಿಕ್ ಡಿ. ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ʻʻಈ ಕುರಿತು ನಾನು ನಿಮಗೆ ಯಾವುದೇ ಮಾಹಿತಿಯನ್ನು ದೂರವಾಣಿ ಮೂಲಕ ನೀಡುವುದಿಲ್ಲ. ಮಾಹಿತಿ ಬೇಕಿದ್ದರೆ ಕಚೇರಿಗೆ ಬಂದು ಅರ್ಜಿ ಕೊಟ್ಟು ಪಡೆಯಿರಿʼʼ ಎಂದು ಹೇಳಿದರು. ಕನ್ನಡ ಪಠ್ಯಪುಸ್ತಕಗಳು ಯಾವಾಗ ಬರುತ್ತವೆ ಎಂದು ಪದೇಪದೇ ಕೇಳಿದಾಗ, ಪಠ್ಯಪುಸ್ತಕಗಳು ಮುದ್ರಣವಾಗಿದೆ, ವಿದ್ಯಾರ್ಥಿಗಳಿಗೆ ತಲುಪಲಿವೆ ಎಂದಷ್ಟೇ ಹೇಳಿ ಸಂಪರ್ಕ ಕಡಿತಗೊಳಿಸಿದರು.
ಈ ಸಂಬಂಧ ಮಾಹಿತಿ ಪಡೆಯಲು ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಾನಳ್ಳಿ ಅವರನ್ನು ಸಂಪರ್ಕಿಸಲು ʻಪೀಪಲ್ ಮೀಡಿಯಾʼ ಪ್ರಯತ್ನಿಸಿದಾದರೂ, ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿಳಂಬನೀತಿಯಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಪಠ್ಯಪುಸ್ತಕವಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.