ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ದೇಶಾದ್ಯಂತ ಎಲ್ಲ ರಾಜಕೀಯ ಪಕ್ಷಗಳು ಅಲರ್ಟ್ ಆಗಿವೆ. ಮುಂಬರುವ ಚುನಾವಣೆಗೆ ಅಸ್ತ್ರಗಳನ್ನು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟ ಕೂಡ ಚುನಾವಣಾ ಕಣವನ್ನು ತುಂಬಲು ಸಿದ್ಧತೆ ನಡೆಸಿದೆ. ಕೇಂದ್ರದ ಮೋದಿ ಸರಕಾರವನ್ನು ಕಿತ್ತೊಗೆಯುವ ಗುರಿ ಹೊಂದಿರುವ ಮೈತ್ರಿಕೂಟ ಆ ನಿಟ್ಟಿನಲ್ಲಿ ಕಾರ್ಯತಂತ್ರದ ಪ್ರತಿತಂತ್ರಗಳನ್ನು ಸಿದ್ಧಪಡಿಸುತ್ತಿದೆ.
ಇಂದು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಇಡೀ ಮೈತ್ರಿಕೂಟ ಒಂದೇ ವೇದಿಕೆಯಲ್ಲಿ ಸೇರಲಿದೆ. ಮುಂಬೈನಲ್ಲಿ ಬೃಹತ್ ಸಾರ್ವಜನಿಕ ಸಭೆಗೆ ಇಂಡಿಯಾ ಅಲಯನ್ಸ್ ವ್ಯವಸ್ಥೆ ಮಾಡುತ್ತಿದೆ. ಈ ವೇದಿಕೆಯ ಮೇಲೆಯೇ ಮೈತ್ರಿಕೂಟ ಲೋಕಸಭೆ ಚುನಾವಣೆ ಸಿದ್ಧತೆ ಘೋಷಿಸಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಚಂಪೈ ಸೊರೆನ್, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ದೆಹಲಿ ಸಚಿವ ಸೌರಭ್ ಭಾರದ್ವಾಜ್, ಸಿಪಿಐ, ನ್ಯಾಷನಲ್ ಕಾನ್ಫರೆನ್ಸ್, ಶಿವಸೇನೆ ಮತ್ತು ಎನ್ಸಿಪಿ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇದಿಕೆಯಿಂದಲೇ ಲೋಕಸಭೆ ಚುನಾವಣಾ ಪ್ರಚಾರ ಆರಂಭಿಸಲಾಗುವುದು.