ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ

75 ನೇ ಸ್ವಾತಂತ್ರ್ಯೋತ್ಸವವನ್ನು ದೇಶ ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ. ಈ ಬಾರಿ ವಿಶೇಷವೆಂಬಂತೆ, ದೇಶದ ಉದ್ದಗಲಕ್ಕೂ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕರೆಕೊಡಲಾಗಿದೆ. ಇಂತಹ ಹೊತ್ತಿನಲ್ಲಿ, ಈ ತ್ರಿವರ್ಣ ಧ್ವಜ ಹೇಗೆ ಅಸ್ತಿತ್ವಕ್ಕೆ ಬಂತು, ಅದರ ಹಿಂದಿನ ಚರಿತ್ರೆ ಏನು, ಎಂಬುದನ್ನು ಸ್ಥೂಲವಾಗಿಯಾದರೂ ತಿಳಿದುಕೊಳ್ಳುವುದು ಉಚಿತವಲ್ಲವೇ? ಬನ್ನಿ…
ಧ್ವಜ ಸಮಿತಿ
ತ್ರಿವರ್ಣ ಧ್ವಜಕ್ಕೂ ಭಾರತದ ಸಂವಿಧಾನಕ್ಕೂ ನಿಕಟ ಸಂಬಂಧವಿದೆ. ಭಾರತದ ರಾಷ್ಟ್ರೀಯ ಧ್ವಜ ಯಾವುದಾಗಬೇಕು ಎಂಬುದನ್ನು ನಿರ್ಧರಿಸಲು ಸಂವಿಧಾನ ಸಭೆಯು 12 ಮಂದಿಯ ಒಂದು ಹಂಗಾಮಿ ಸಮಿತಿಯನ್ನು ಜೂನ್ 1947 ರಲ್ಲಿ ರಚಿಸಿತ್ತು. ಧ್ವಜ ಸಮಿತಿ (ಫ್ಲಾಗ್ ಕಮಿಟಿ) ಎನ್ನುವುದು ಆ ಸಮಿತಿಯ ಹೆಸರು. ಅದರ ಅಧ್ಯಕ್ಷರು ರಾಜೇಂದ್ರ ಪ್ರಸಾದ್. ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಂ ಅಜಾದ್, ಫ್ರಾಂಕ್ ಆಂಟನಿ, ಸರೋಜಿನಿ ನಾಯ್ಡು, ಸಿ ರಾಜಗೋಪಾಲಾಚಾರಿ, ಕೆ ಎಂ ಮುನ್ಶಿ, ಕೆ ಎಂ ಪಣಿಕ್ಕರ್, ಪಟ್ಟಾಭಿ ಸೀತಾರಾಮಯ್ಯ, ಹೀರಾಲಾಲ್ ಶಾಸ್ತ್ರಿ, ಬಲದೇವ್ ಸಿಂಗ್, ಸತ್ಯನಾರಾಯಣ ಸಿನ್ಹಾ ಮತ್ತು ಎಸ್ ಎನ್ ಗುಪ್ತಾ ಇದರ ಸದಸ್ಯರು. ಚರಕಾದ ಜಾಗದಲ್ಲಿ ಅಶೋಕ ಚಕ್ರವನ್ನು ಇರಿಸಿ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಅಳವಡಿಸಿಕೊಳ್ಳುವ ಪ್ರಸ್ತಾವ ಮಾಡುವುದು ಎಂದು ಆ ಸಮಿತಿಯಲ್ಲಿ ನಿರ್ಧಾರವಾಯಿತು.
ತ್ರಿವರ್ಣ ಬಾವುಟವನ್ನು 1931 ರಲ್ಲಿ ಮೊದಲು ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡಿತ್ತಾದರೂ, ಬಳಕೆಯಲ್ಲಿ ಮುಂದೆ ಇದು ಕಾಂಗ್ರೆಸ್ ಪಕ್ಷದಾಚೆ ಸರಿದು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯರ ಕೈಯ ಬಾವುಟವಾಯಿತು. ಸಂವಿಧಾನ ಸಭೆಯ ಚರ್ಚೆಯಲ್ಲಿ ‘ಸ್ವತಂತ್ರ ಭಾರತಕ್ಕಾಗಿ ಮಾಡಿದ ತ್ಯಾಗದ ಸಂಕೇತ ಈ ಬಾವುಟ’ ಎಂದು ಸಮಿತಿಯ ಸದಸ್ಯರು ಮತ್ತೆ ಮತ್ತೆ ಹೇಳಿದರು. “ಭಾರತದ ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಮಂದಿ ಬಲಿದಾನ ಗೈದರು! ಈ ಬಾವುಟವನ್ನು ನಾಶಪಡಿಸಲು ಬ್ರಿಟಿಷ್ ಚಕ್ರಾಧಿಪತ್ಯ ತನ್ನೆಲ್ಲ ಶಕ್ತಿಯನ್ನು ಬಳಸಿತು. ಆದರೂ ನಾವು ಈ ದೇಶದ ಜನರು ಅದನ್ನು ಹೃದಯದಲ್ಲಿರಿಸಿಕೊಂಡೆವು ಮತ್ತು ಸಂರಕ್ಷಿಸಿದೆವು” ಎಂದರು ಎಚ್ ಕೆ ಖಾಂಡೇಕರ್.
ಹಾಗೆ ನೋಡಿದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಬಳಕೆಯಲ್ಲಿದ್ದುದು ಈ ತ್ರಿವರ್ಣ ಬಾವುಟ ಮಾತ್ರವಲ್ಲ. ಇತರ ಬಾವುಟಗಳೂ ಇದ್ದವು. ಕಮ್ಯುನಿಸ್ಟರು, ಕಾರ್ಮಿಕರು ಮತ್ತು ರೈತರು ತಮ್ಮ ಹೋರಾಟದ ಉದ್ದಕ್ಕೂ ಕೆಂಪು ಬಾವುಟ ಬಳಸಿದ್ದರು. ಅದು ಅವರ ಪ್ರಕಾರ ಸಂಘರ್ಷ ಮತ್ತು ತ್ಯಾಗದ ಸಂಕೇತವಾಗಿತ್ತು. ಇನ್ನು ಆದಿವಾಸಿಗಳು ಕೂಡಾ ಬ್ರಿಟಿಷ್ ರ ವಿರುದ್ಧದ ತಮ್ಮ ದಂಗೆಗಳಲ್ಲಿ ತಮ್ಮದೇ ಪ್ರತ್ಯೇಕ ಬಾವುಟ ಬಳಸಿದ್ದರು. ಆದರೆ, ಅಂತಿಮವಾಗಿ ತ್ರಿವರ್ಣ ಧ್ವಜವನ್ನು ಎಲ್ಲರೂ ರಾಷ್ಟ್ರಧ್ವಜ ಎಂದು ಒಪ್ಪಿ, ಸ್ವೀಕರಿಸಿದ್ದರು.
ಬಾವುಟದ ಬಣ್ಣಕ್ಕೆ ಮತೀಯವಾದಿ ಮಹತ್ವವಿಲ್ಲ
ಸಂವಿಧಾನ ಸಭೆಯ ಚರ್ಚೆಯಲ್ಲಿ ಕಾಣಿಸಿಕೊಂಡ ಇನ್ನೊಂದು ಅಂಶವೆಂದರೆ, ಈ ಬಾವುಟದಲ್ಲಿರುವ ಬಣ್ಣವು ಯಾವುದೇ ಒಂದು ಧಾರ್ಮಿಕ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂಬ ವಿಚಾರ. ಇದೊಂದು ಧರ್ಮ ನಿರಪೇಕ್ಷ ಬಾವುಟ. ರಾಷ್ಟ್ರ ಧ್ವಜವನ್ನು ಕುರಿತ ಪ್ರಸ್ತಾವನೆ ಮಂಡಿಸುತ್ತಾ ಜವಾಹರಲಾಲ್ ನೆಹರೂ ಅವರು, “ಕೆಲವರು ಇದರ ಮಹತ್ವದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಅದನ್ನು ಮತೀಯವಾದಿ (ಕಮ್ಯುನಲ್) ಕೋನದಲ್ಲಿ ಆಲೋಚಿಸಿದ್ದಾರೆ. ಅದರ ಕೆಲ ಭಾಗ ಈ ಸಮುದಾಯವನ್ನು, ಇನ್ನು ಕೆಲ ಭಾಗ ಆ ಸಮುದಾಯವನ್ನು ಬಿಂಬಿಸುತ್ತದೆ ಎಂದೆಲ್ಲ ಭಾವಿಸಿದ್ದಾರೆ. ಆದರೆ ಈ ಬಾವುಟವನ್ನು ರಚಿಸುವಾಗ ಯಾವುದೇ ತೆರನ ಮತೀಯವಾದಿ ಆಲೋಚನೆ ನಮ್ಮಲ್ಲಿ ಇರಲಿಲ್ಲ ಎಂದರು. ಇನ್ನೊಬ್ಬ ಸದಸ್ಯ ಶಿಬನ್ ಲಾಲ್ ಸಕ್ಸೇನಾ, “ಮೂರು ಬಣ್ಣಗಳಿಗೆ ಯಾವುದೇ ಮತೀಯವಾದಿ ಮಹತ್ವ ಇಲ್ಲ ಎಂಬುದನ್ನು ಸ್ಪಷ್ಟ ಪದಗಳಲ್ಲಿ ಘೋಷಿಸುತ್ತೇವೆ. ಮತೀಯವಾದದ ಹುಚ್ಚುಹಿಡಿಸಿಕೊಂಡವರು ಈ ಬಾವುಟವನ್ನು ಮತೀಯವಾದಿ ಬಾವುಟ ಎಂದು ಪರಿಗಣಿಸಬಾರದು” ಎಂದರು. ಇದರ ಮುಂದುವರಿದ ಚರ್ಚೆಯಲ್ಲಿ ಬಾವುಟದ ಬಣ್ಣದ ಬಗ್ಗೆ ಅನೇಕ ಸೃಜನಶೀಲ ವ್ಯಾಖ್ಯಾನಗಳು ಕೂಡಾ ಕಾಣಿಸಿಕೊಂಡವು. ಕೇಸರಿ ಎಂದರೆ ತ್ಯಾಗ, ಶಾಂತಿ, ಹಸಿರು ಎಂದರೆ ಪ್ರಕೃತಿಗೆ ಹತ್ತಿರವಿರುವುದು, ಬಿಳಿಯೆಂದರೆ ಶಾಂತಿ ಮತ್ತು ಅಹಿಂಸೆ ಹೀಗೆ. ಸದರಿ ಬಾವುಟಕ್ಕೆ ಮತೀಯವಾದಿ ಬಣ್ಣ ಇಲ್ಲ ಎಂಬುದು ಮಾತ್ರ ಎಲ್ಲರ ಸಹಮತದ ಅಭಿಪ್ರಾಯವಾಗಿತ್ತು. ಬಾವುಟದ ಬಗ್ಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು, “ ಸದಾ ಎಚ್ಚರಿರು, ಚಲಿಸುತ್ತಲೇ ಇರು, ಕ್ರಿಶ್ಚಿಯನ್ನರು, ಸಿಖ್ಖರು, ಮುಸ್ಲಿಮರು, ಹಿಂದೂಗಳೂ, ಬೌದ್ಧರು ಎಲ್ಲರಿಗೂ ಸುರಕ್ಷಿತ ಆಶ್ರಯ ಇರುವ ಮುಕ್ತ, ಸಹಾನುಭೂತಿಯಿಂದ ಕೂಡಿರುವ, ಸಭ್ಯ, ಪ್ರಜಾತಾಂತ್ರಿಕ ಸಮಾಜ ನಿರ್ಮಿಸಲು ಮುಂದಡಿ ಇಡು, ಶ್ರಮಿಸು” ಎಂದು ವ್ಯಾಖ್ಯಾನಿಸಿದರು.
ಬಾವುಟವು ಸಾಮಾಜಿಕ ನ್ಯಾಯ , ತುಳಿತ ಹಾಗೂ ಹಸಿವಿನಿಂದ ಮುಕ್ತಿಯ ಪ್ರತೀಕ
ಈ ಚರ್ಚೆಯಲ್ಲಿನ ಮೂರನೇ ಅಂಶವೆಂದರೆ, ಸಾಮಾಜಿಕ ನ್ಯಾಯ ಮತ್ತು ತುಳಿತ ಮತ್ತು ಹಸಿವಿನಿಂದ ಮುಕ್ತಿ. ಈ ಬಾವುಟವು ಸ್ವಾತಂತ್ರ್ಯದ ಪ್ರತೀಕ ಎಂಬುದನ್ನು ವಿವರಿಸುತ್ತ ನೆಹರೂ ಅವರು, “ ದೇಶದಲ್ಲಿ ಉಪವಾಸ, ಹಸಿವು, ಉಡುಪಿನ ಕೊರತೆ, ಬದುಕಿನ ಅಗತ್ಯಗಳ ಕೊರತೆ ಮತ್ತು ಪ್ರತಿಯೋರ್ವನಿಗೂ ಬೆಳವಣಿಗೆ ಹೊಂದುವ ಅವಕಾಶದ ಕೊರತೆ ಇರುವವರೆಗೂ ಸಂಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ” ಎಂದರು. ಇತರ ಅನೇಕರ ಭಾಷಣಗಳಲ್ಲಿಯೂ ಈ ಅಂಶ ಪ್ರತಿಧ್ವನಿಸಿತು.
ಜುಲೈ 22, 1947 ರಂದು ತ್ರಿವರ್ಣ ಧ್ವಜವನ್ನು ಸಂವಿಧಾನ ಸಭೆಯು ಅಂಗೀಕರಿಸಿದಾಗ ದೇಶದ ಸ್ವಾತಂತ್ರ್ಯ, ಅದನ್ನು ಸಾಧಿಸಲು ಒಗ್ಗಟ್ಟು ಮತ್ತು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಈ ವಿಷಯಗಳನ್ನು ಸಾಮಾನ್ಯವಾಗಿ ಮತ್ತೆ ಮತ್ತೆ ಉಲ್ಲೇಖಸಿಲಾಗಿತ್ತು. ದುರದೃಷ್ಟವಶಾತ್ ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ದೇಶದ ಎಲ್ಲ ಪ್ರಜೆಗಳೂ ತ್ರಿವರ್ಣ ಬಾವುಟ ಹಾರಿಸಲಾರದಂತಹ ಪರಿಸ್ಥಿತಿ ಇದೆ. ಯಾಕೆಂದರೆ ಅವರಲ್ಲಿ ಅನೇಕರು ಮನೆಯೇ ಇಲ್ಲದವರು, ಭೂರಹಿತರು, ಕನಿಷ್ಠ ಆದಾಯವಿರುವವರು. ಆಳುವವರ ತಪ್ಪು ಆರ್ಥಿಕ ನೀತಿಯಿಂದಾಗಿ ಮತ್ತು ಬಂಡವಾಳಶಾಹಿ ಶಕ್ತಿಗಳ ಅಬ್ಬರದಿಂದಾಗಿ ದೇಶದಲ್ಲಿ ಆರ್ಥಿಕ ಅಸಮಾನತೆ ವಿಪರೀತವಿದೆ. ಬಡವರು ಮತ್ತು ಧನಿಕರ ನಡುವಿನ ಕಂದಕ ಇನ್ನಷ್ಟು ಹಿಗ್ಗಿದೆ.
ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದ ಆರ್ ಎಸ್ ಎಸ್
ಈ ನಡುವೆ, ಭಾರತ ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದ ಒಂದು ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘದ ಮುಖವಾಣಿ ‘ಆರ್ಗನೈಸರ್’ 1947 ರಲ್ಲಿ ಹೀಗೆ ಬರೆಯಿತು, “ಅದೃಷ್ಟವಶಾತ್ ಅಧಿಕಾರಕ್ಕೆ ಬಂದವರು ನಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ಹಿಂದೂಗಳು ಅದನ್ನು ಎಂದಿಗೂ ಗೌರವಿಸುವುದಿಲ್ಲ,ಅದನ್ನು ತಮ್ಮದು ಎಂದು ಪರಿಗಣಿಸುವುದೂ ಇಲ್ಲ. ಮೂರು ಎಂಬ ಸಂಖ್ಯೆಯೇ ಅಪಶಕುನದ್ದು. ಮೂರು ಬಣ್ಣಗಳನ್ನು ಹೊಂದಿರುವ ಬಾವುಟ ಖಂಡಿತವಾಗಿಯೂ ಕೆಟ್ಟ ಮಾನಸಿಕ ಪರಿಣಾಮ ಬೀರುತ್ತದೆ ಮತ್ತು ಅದು ದೇಶಕ್ಕೆ ಹಾನಿಕರ”.
ಮಹಾತ್ಮಾ ಗಾಂಧಿಯವರ ಹತ್ಯೆ ನಡೆದ ಬೆನ್ನಿಗೇ ಆರ್ ಎಸ್ ಎಸ್ ಮೇಲೆ ನಿಷೇಧ ಹೇರಲಾಯಿತು. ಒಂದು ವರ್ಷದ ಬಳಿಕ ಅನೇಕ ಷರತ್ತುಗಳನ್ನು ವಿಧಿಸಿ ಆ ನಿಷೇಧವನ್ನು ಹಿಂದೆಗೆಯಲಾಯಿತು. ಆ ಷರತ್ತುಗಳಲ್ಲಿ ಒಂದು ಷರತ್ತೆಂದರೆ ‘ರಾಷ್ಟ್ರ ಧ್ವಜವನ್ನು ಒಪ್ಪಿಕೊಳ್ಳುವುದು’. 1949 ರ ಮೇ ತಿಂಗಳಲ್ಲಿ ಆಗಿನ ಗೃಹ ಕಾರ್ಯದರ್ಶಿ ಎಚ್ ವಿ ಆರ್ ಐಯ್ಯಂಗಾರ್ ಅವರು ಆಗಿನ ಆರ್ ಎಸ್ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವಾಲ್ಕರ್ ಅವರಿಗೆ ಹೀಗೆ ಬರೆದರು, “ಪ್ರಭುತ್ವಕ್ಕೆ ವಿಧೇಯವಾಗಿರಲು ಯಾವುದೇ ಅಭ್ಯಂತರ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ, ರಾಷ್ಟ್ರ ಧ್ವಜವನ್ನು ನಿಶ್ಶರ್ತವಾಗಿ ಒಪ್ಪಿಕೊಳ್ಳುವುದು ಅತ್ಯಗತ್ಯ”. ಇದನ್ನು ಒಪ್ಪಿಕೊಳ್ಳದೆ ಆರ್ ಎಸ್ ಎಸ್ ಗೆ ಬೇರೆ ಆಯ್ಕೆಯೇ ಇರಲಿಲ್ಲ.
ರಾಷ್ಟ್ರ ಧ್ವಜದ ಮೌಲ್ಯಗಳನ್ನು ರಕ್ಷಿಸಿಕೊಳ್ಳಬೇಕಿದೆ.
ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಬಾವುಟ ಹಾರಾಟ ಅಭಿಯಾನವು ಸಂವಿಧಾನದ ಪೀಠಿಕಾ ಭಾಗದ ಜತೆ ಜತೆಯಲ್ಲಿಯೇ ಸಾಗಬೇಕು. ಪೀಠಿಕಾ ಭಾಗದ ಮಹತ್ವದ ಸಾಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಅಂದರೆ, ‘ನಾವು ಭಾರತದ ಜನತೆ’ ಎನ್ನುತ್ತದೆಯೇ ಹೊರತು, ‘ಹಿಂದೂಗಳಾದ ನಾವು, ಮುಸ್ಲಿಮರಾದ ನಾವು’ ಎಂದು ಹೇಳುವುದಿಲ್ಲ. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ.
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಗುಲಾಬಿ ಬಿಳಿಮಲೆ
ಮಂಗಳೂರು ಮೂಲದವರಾದ ಇವರು,
ವೃತ್ತಿಯಿಂದ ಪತ್ರಕರ್ತೆ ಹಾಗು ಪ್ರವೃತ್ತಿಯಿಂದ ಬರಹಗಾರ್ತಿಯಾಗಿದ್ದಾರೆ.