ಹನೂರು: ಲೋಕೋಪಯೋಗಿ ಇಲಾಖೆ ವತಿಯಿಂದ 9.5 ಕೋಟಿ ರೂ. ವೆಚ್ಚದಲ್ಲಿ ನೆಲ್ಲೂರು ಹಾಗೂ ಹುಗ್ಯಂ ಗ್ರಾಮದಲ್ಲಿ ಸೇತುವೆ ನಿರ್ಮಾಣ, ಟಿಎಸ್ಪಿ ಅನುದಾನದಲ್ಲಿ ಕೂಡ್ಲೂರು ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದ ಮೆಟ್ಲಿಂಗ್ ರಸ್ತೆ ಹಾಗೂ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಂಬಾಡಿ ಡ್ಯಾಂನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕಾಮಗಾರಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನೆಲ್ಲೂರು ಮತ್ತು ಹುಗ್ಯಂ ಸೇತುವೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಸೇತುವೆ ನಿರ್ಮಾಣದಿಂದ ಜನರಿಗೆ ಹಾಗೂ ವಾಹನ ಸವಾರರಿಗೆ ಬಹಳ ಅನುಕೂಲವಾಗಲಿದೆ. ಅನುದಾನ ನೀಡಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಿಣ್ಯಂ ವ್ಯಾಪ್ತಿಯ ಯರಂಬಾಡಿ ಡ್ಯಾಂನಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಶಾಸಕರ ಅನುದಾನದಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮಳೆಗಾಗಿ ಕಾಯುತ್ತಿದ್ದೇವೆ, ಪ್ರಕೃತಿ ಮನಸ್ಸು ಮಾಡಿ ಹಲವು ಕಡೆ ನೀರಿನ ಸಮಸ್ಯೆ ಬಗೆಹರಿಯಲಿ ಎಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
490 ಕೋಟಿ ಅನುದಾನ ಪತ್ರಿಕೆಗಳಿಗಷ್ಟೇ ಸೀಮಿತ ಎಂದ ಜನಧ್ವನಿ ವೇಕಟೇಶ್ ಗೆ ಶಾಸಕ ಮಂಜುನಾಥ್ ಟಾಂಗ್
ಭೂಮಿ ಪೂಜೆ ನೆರವೇರಿಸುವ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ಎರಡು ಮೂರು ದಿನದ ಹಿಂದೆ ಬಿಜೆಪಿ ಮುಖಂಡ ಜನಧ್ವನಿ ಹನೂರು ವೆಂಕಟೇಶ್ ರವರು ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟದಲ್ಲಿ ಹನೂರು ನೀರಾವರಿ ಯೋಜನೆಗೆ 490 ಕೋಟಿ ಅನುದಾನ ಘೋಷಣೆಯಾಗಿರುವುದು ಕೇವಲ ಪತ್ರಿಕೆ ಹೇಳಿಕೆಗಷ್ಟೇ ಸೀಮಿತವಾಗಿದೆ ಎಂಬ ಹೇಳಿಕೆಗೆ ಶಾಸಕ ಮಂಜುನಾಥ್ ರವರು ಪ್ರತಿಕ್ರಿಯೆ ನೀಡಿ ಅವರಿಗೆ ಮಾಹಿತಿ ಕೊರತೆ ಇದೆ ತಿಳಿದುಕೊಂಡು ಮಾತಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಇಂಜಿನಿಯರ್ ಸಂತೋಷ ಸೇರಿದಂತೆ ಹುಚ್ಚಯ್ಯ, ಪಳನಿಸ್ವಾಮಿ, ತಂಗವೇಲು, ಶಿವಣ್ಣ, ಕಾಮರಾಜು, ನಾಗರಾಜು, ಮುರುಗೇಶ್, ಅರುಲ್ ಸ್ವಾಮಿ, ಮಹಾದೇವ, ಕುಮಾರ್, ಮುನಿಯಪ್ಪ, ಶಿವು, ಬಸವಣ್ಣ, ಬಸವರಾಜು, ವಸಂತ್ ಕುಮಾರ್, ರಾಜು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
