Home ಜನ-ಗಣ-ಮನ ಧರ್ಮ- ಸಂಸ್ಕೃತಿ ಭೂತಾರಾಧನೆಯಲ್ಲೂ ಜಾತಿ-ಅಸ್ಪೃಶ್ಯತೆಯ ಆಳ ಒಳಸುಳಿ

ಭೂತಾರಾಧನೆಯಲ್ಲೂ ಜಾತಿ-ಅಸ್ಪೃಶ್ಯತೆಯ ಆಳ ಒಳಸುಳಿ

0

ಭೂತದ ಪಾತ್ರಿಗಳ  ಮೈಯಲ್ಲಿ ಭೂತ-ದೈವ ಆವಾಹಿಸಿರುವಾಗಲೂ ಇವರು ಅಸ್ಪೃಶ್ಯರೇ ಆಗಿರುತ್ತಾರೆ. ಯಾರೂ ಇವರಿಗೆ ಕೈಮುಗಿಯುವುದಿಲ್ಲ, ಕಾಲು ಮುಟ್ಟಿ ಆಶೀರ್ವಚನ ಪಡೆಯುವುದಿಲ್ಲ ಎನ್ನುತ್ತಾ ಭೂತಾರಾಧನೆಯಲ್ಲೂ ಜಾತಿ-ಅಸ್ಪೃಶ್ಯತೆಯ ಆಳ ಒಳಸುಳಿ ಇರುವುದನ್ನು ಗುರುತಿಸುತ್ತಾರೆ ಹಿರಿಯ ಲೇಖಕರಾದ ಪ್ರವೀಣ್‌ ಶೆಟ್ಟಿ.

ಕಾಂತಾರ ಕನ್ನಡ ಚಿತ್ರ ನೋಡಿದ ಮೇಲೆ ಒಳನಾಡಿನ ಕನ್ನಡಿಗರಲ್ಲೂ ಕರಾವಳಿಯ ಮೂಲನಿವಾಸಿಗಳ ಭೂತಾರಾಧನೆಯ ಬಗ್ಗೆ ಅರಿಯುವ ಆಸಕ್ತಿ ಮೂಡಿದೆಯಂತೆ. ಹಲವು ಮುಸ್ಲಿಂ ಭೂತಗಳ ಸಹಿತ 1300 ಕ್ಕೂ ಹೆಚ್ಚು ಚಿತ್ರವಿಚಿತ್ರ ರೂಪದ ಭೂತಗಳನ್ನು ಆರಾಧಿಸುವ ಕರಾವಳಿಯ ಈ ಭೂತಾರಾಧನೆಯಲ್ಲೂ ಜಾತಿ-ಅಸ್ಪೃಶ್ಯಯ ಆಳ ಒಳಸುಳಿ ಇರುವ ವಿಷಯ ಒಳನಾಡಿಗರಿಗೆ ಗೊತ್ತಿಲ್ಲ!

ಇವರು ಅಸ್ಪೃಶ್ಯರೇ!

ಭೂತದ ಕೋಲ-ನೇಮಗಳಲ್ಲಿ ಮುಸ್ಲಿಂ ಭೂತಗಳ ಸಹಿತ ಎಲ್ಲಾ ಭೂತದ “ಪಾತ್ರಿಗಳು” ಮಾತ್ರ ದಲಿತರೇ!  ಪಂಬದ, ನಲಿಕೆ, ಮುಂಡಾಲ, ಪರವ, ಕೊರಗ ಎಂದು ಕರೆಯುವ ದಲಿತರೇ ಭೂತದ ಪಾತ್ರಿ ಆಗಿರುತ್ತಾರೆ!  ಇವರ ಮೈಯಲ್ಲಿ ಭೂತ-ದೈವ ಆವಾಹಿಸಿರುವಾಗಲೂ ಇವರು ಅಸ್ಪೃಶ್ಯರೇ! ಯಾರೂ ಇವರಿಗೆ ಕೈಮುಗಿಯುವುದಿಲ್ಲ, ಪಾತ್ರಿಯ ಕಾಲು ಮುಟ್ಟಿ ಆಶೀರ್ವಚನ ಪಡೆಯುವುದಿಲ್ಲ, ಸಣ್ಣ ಮಕ್ಕಳೇನಾದರೂ ಮುಗ್ಧತನದಿಂದ ಭೂತದ ಪಾತ್ರಿಯ ಕಾಲು ಮುಟ್ಟಿದರೆ ಆ ಮಗುವಿಗೆ ತಾಯಿಯಿಂದ ಪೆಟ್ಟು ಖಂಡಿತಾ!  ಕೋಲ-ನೇಮದಲ್ಲಿ ಗಂಧ ಪ್ರಸಾದ ವಿತರಿಸಲೆಂದೇ ಒಬ್ಬ ಮೇಲ್ಜಾತಿಯವನು ಇರುತ್ತಾನೆ.

ಅಸುರ-ಕೋಲ ಮತ್ತು ಸುರ-ಕೋಲ!

ಊರಲ್ಲಿ ನಡೆಯುವ ಕೋಲ-ನೇಮಗಳಿಗೆ ಕ್ರೈಸ್ತ-ಮುಸ್ಲಿಂ ಸಹಿತ ಜಾತಿ ಬೇಧವಿಲ್ಲದೆ ಊರಿನ ಎಲ್ಲಾ ಜಾತಿಯವರು ಬರುತ್ತಾರೆ. ಆದರೆ ಬ್ರಾಹ್ಮಣರು ಅಪ್ಪಿತಪ್ಪಿಯೂ ಬರುವುದಿಲ್ಲ!  ಹೆಚ್ಚಿನ ಭೂತದ ಪಾತ್ರಿಗಳು ಮೈಮೇಲೆ ದೈವದ ಆವೇಶ ಬಂದಿರುವಾಗ ಜೀವಂತ ಕೋಳಿ ಪಡೆದು ಅದನ್ನು ಬಾಯಿಂದ ಕಚ್ಚಿ ಅದರ ಬಿಸಿ ರಕ್ತ ಕುಡಿಯುತ್ತಾರೆ (ಕೋಳಿಯ ಹಸಿ ರಕ್ತ ಕುಡಿದು ಕುಡಿದು ಪಾತ್ರಿಗಳ ಆರೋಗ್ಯ ಕ್ಷೀಣಿಸುತ್ತದೆ). ಕಾಂತಾರ ಚಿತ್ರದಲ್ಲಿ ತೋರಿಸಿರುವ ‘ಗುಳಿಗ’ ಅಂತಹಾ ಕೋಳಿಯ ರಕ್ತ ಕೇಳುವ ದೈವಗಳಲ್ಲಿ ಒಂದು. ಹಾಗಾಗಿ ಗರ್ಭಿಣಿ ಸ್ತ್ರೀಯರು ‘ರಾವುಗುಳಿಗನ’ ಕೋಲಕ್ಕೆ ಹೋಗುವುದಿಲ್ಲ. ಭಕ್ತರು ಮಾಂಸಾಹಾರ ತಿಂದು ವೈದಿಕ ದೇವಾಲಯಗಳಿಗೆ ಹೋಗಬಾರದು ಎಂದು ಸಸ್ಯಾಹಾರಿ ಬ್ರಾಹ್ಮಣರೇ ಮಾಡಿರುವ ಪೆದ್ದ ನಿಯಮ ಇರುವಂತೆ, ಭೂತ-ದೈವಗಳ ಕೋಲ-ನೇಮಕ್ಕೆ ಕೋಳಿ-ಮೀನು ತಿಂದು ಹೋಗಬಾರದು ಎನ್ನುವ ಮೂರ್ಖ ನಿಯಮವೇನಿಲ್ಲ!  ಇತ್ತೀಚಿನ ವರ್ಷಗಳಲ್ಲಿ ಕೆಲವು ಮಡಿವಂತರು ಕೋಲಗಳಲ್ಲಿಯೂ “ಅಸುರ-ಕೋಲ ಮತ್ತು ಸುರ-ಕೋಲ” ಎಂದು ವಿಂಗಡಣೆ ಮಾಡಿ ಮಾಂಸಾಹಾರಿ ತಂಬಿಲ, ಸಸ್ಯಾಹಾರಿ ತಂಬಿಲ ಎಂದು ವಿಭಜನೆ ಮಾಡಿದ್ದಾರೆ! (ಭೂತ ಪೂಜೆಯ ಭಾಗವಾದ “ತಂಬಿಲ ಮತ್ತು ಅಗೇಲು” ಎಂದು ಕರೆಯುವ ನೈವೇದ್ಯಗಳು ಮೂಲನಿವಾಸಿ/ ದ್ರಾವಿಡ ಆಹಾರ ಪದ್ಧತಿಯಂತೆ ಮಾಂಸಾಹಾರವೇ ಆಗಿರಬೇಕು ಎಂಬ ನಿಯಮವಿದೆ).

ನಾಗಾರಾಧನೆಯಲ್ಲಿ?

ಕರಾವಳಿಯ ಇನ್ನೊಂದು ವೈಶಿಷ್ಠ್ಯ ನಾಗಾರಾಧನೆ.  ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುವ ನಾಗಮಂಡಲ- ಢಕ್ಕೆ ಬಲಿ ಎಂಬ ನಾಗಪೂಜೆಯಲ್ಲಿ ಪ್ರಮುಖ ‘ಗಂಡು ನಾಗನ’ ಪಾತ್ರಿ ಬ್ರಾಹ್ಮಣನಾಗಿರುತ್ತಾನೆ, ಮತ್ತು ‘ಹೆಣ್ಣು ನಾಗಿಣಿಯ’ ಪಾತ್ರಿ ಬೋಲ್ಯ-ಪಂಬದ ಅಥವಾ ವೈದ್ಯ ಎಂಬ (ಬಿಲ್ಲವ ಉಪಜಾತಿ) ಕೆಳಜಾತಿಯವನು ಆಗಿರುತ್ತಾನೆ. ರಾತ್ರಿಯಿಡೀ ನಡೆಯುವ ಈ ನಾಗ ಪೂಜೆಯಲ್ಲಿ ನಾಗ- ನಾಗಿಣಿ ಪಾತ್ರಿಗಳು ಒಬ್ಬರನ್ನೊಬ್ಬರು ಅಪ್ಪಿ ಹಿಡಿದುಕೊಂಡು ರಾತ್ರಿಯಿಡೀ ನಾಗ-ನಾಗಿಣಿಯ ರಾಸಕ್ರೀಡೆಯ ನೃತ್ಯ ಮಾಡುತ್ತಾರೆ. ಆದರೆ ಪೂಜೆ ಮುಗಿದ ಮೇಲೆ ಅಲ್ಲಿ ನೆರೆದಿರುವ ಭಕ್ತರು ಕೇವಲ ಬ್ರಾಹ್ಮಣ ಪಾತ್ರಿಯ ಕಾಲು ಮುಟ್ಟಿ ಅವನ ಕೈಯಿಂದ ಮಾತ್ರ ಗಂಧ ಪ್ರಸಾದ ಪಡೆಯುತ್ತಾರೆ, ಆದರೆ ಭಕ್ತರು ವೈದ್ಯ-ಬಿಲ್ಲವ ನಾಗಿಣಿ ಪಾತ್ರಿಯ ಕಾಲು ಮುಟ್ಟುವುದು ಬಿಡಿ ಅವನ ಕೈಯಿಂದ ಭಕ್ತರು ಪ್ರಸಾದವನ್ನೂ ಪಡೆಯುವುದಿಲ್ಲ! ಬೆಂಗಳೂರು, ಮುಂಬೈ, ದುಬೈ, ಅಮೇರಿಕಾದಲ್ಲಿ ನೆಲೆಸಿರುವ ಉನ್ನತ ವಿದ್ಯಾವಂತ ಕರಾವಳಿಗರೂ ಈ ಮೇಲುಕೀಳು ಜಾತಿ ತಾರತಮ್ಯದ ಮೌಢ್ಯ ಅನುಸರಿಸುತ್ತಾರೆ!

ಜಾತಿ ಅಸ್ಪೃಶ್ಯತೆಯ ಮನಸ್ಥಿತಿ

ತುಳುನಾಡಿನ ವಿದ್ಯಾವಂತ ಜನರಲ್ಲಿ ಇಂದಿಗೂ ಆಳವಾಗಿರುವ ಈ ಜಾತಿ ಅಸ್ಪೃಶ್ಯತೆಯ ಮನಸ್ಥಿತಿಯನ್ನು ಹಾಗೂ ಭೂತ-ದೈವ-ನಾಗ ದೇವರೂ ಸಹಾ ಮನುಷ್ಯ ನಿರ್ಮಿತ ಶುದ್ಧ ಅವೈಜ್ಞಾನಿಕ ಅನಿಷ್ಟ ಜಾತಿ ಪದ್ಧತಿಯ ಬಲೆಯಲ್ಲಿ ಸಿಕ್ಕಿ ಬಿದ್ದಿರುವುದನ್ನು ಕಾಂತಾರ ಚಿತ್ರದಲ್ಲಿ ಪರೋಕ್ಷವಾಗಿ ತೋರಿಸಿದ್ದರೆ ಉಚಿತವಾಗಿರುತ್ತಿತ್ತು. (ಕಾಂತಾರ ಚಿತ್ರದಲ್ಲಿ ದಲಿತ ಶಿವನು ಜಮೀನುದಾರನ ಮನೆಯಲ್ಲಿ ಬಂಟ ಜಾತಿಯ ಜಮೀನುದಾರ ದೇವೇಂದ್ರನಿಗೆ ಸರಿಸಮವಾಗಿ ಊಟದ ಟೇಬಲ್ ನಲ್ಲಿಯೇ ಕುಳಿತು ಕೋಳಿ ಕಾಲು ತಿನ್ನುವುದು ಕೇವಲ ಸಿನಿಮಾದಲ್ಲಿ ಮಾತ್ರ ಸಾಧ್ಯ. ನಿಜ ಜೀವನದಲ್ಲಿ ದಲಿತನು ಬಂಟ ಜಮೀನುದಾರನ ಊಟದ ಕೋಣೆ ಬಿಡಿ ಚಾವಡಿ ಮೇಲೂ ಕಾಲಿಡಲು ಸಾಧ್ಯವಿಲ್ಲ. ಏನೇ ಕೆಲಸವಿದ್ದರೂ ಅಂಗಳದಲ್ಲಿ ಇಟ್ಟಿರುವ ಪ್ಲಾಸ್ಟಿಕ್ ಕುರ್ಚಿಯಲ್ಲಿ ಮಾತ್ರ ದಲಿತರು ಕುಳಿತುಕೊಳ್ಳಲು ಸಾಧ್ಯ!) 

ಪಾತ್ರಿಗಳ ಕುಟುಂಬದ ದಯನೀಯ ಸ್ಥಿತಿ ಬದಲಾಗುವುದೇ?

ಇಡೀ ಭಾರತದಲ್ಲಿಯೇ ನಮ್ಮ ಕರಾವಳಿಯ ಜನರು ಅತಿ ಹೆಚ್ಚು ಮೂಢನಂಬಿಕೆ ಹೊಂದಿರುವವರು ಎಂಬ ಕುಖ್ಯಾತಿ ಇದೆ. ತುಳುವ ಮಹಿಳೆಯರಂತೂ ಮೌಢ್ಯದ ಗಣಿಗಳು! (ನನ್ನ ಮನೆಯ ಹೆಂಗಸರೂ ಇದಕ್ಕೆ ಹೊರತಲ್ಲ!). ಕಾಂತಾರ ಚಿತ್ರದ ಯಶಸ್ಸು ಕರಾವಳಿಯಲ್ಲಿ ಮಡುಗಟ್ಟಿರುವ ಮೌಢ್ಯವನ್ನು ಇನ್ನೂ ಹೆಚ್ಚಿಸಬಹುದು. ಪರವೂರಿನಲ್ಲಿ ದೊಡ್ಡ ಉದ್ಯಮ ಹೊಂದಿರುವ ತುಳುವರ ಹಣವು ಭೂತ ಸ್ಥಾನಗಳತ್ತ ದೊಡ್ಡ ಮಟ್ಟದಲ್ಲಿ ಹರಿದು ಬರಬಹುದು, ಪಾಳು ಬಿದ್ದಿದ್ದ ಭೂತದ ಹಳೆಯ ಕಾಲದ ಗುಡಿಗಳು ದೊಡ್ಡ ದೇವಾಲಯವಾಗಿ ಪರಿವರ್ತಿತವಾಗ ಬಹುದು. ಆದರೆ ಎಲ್ಲ ಭೂತ ಸ್ಥಾನಗಳ ಯಜಮಾನರು ಮೇಲ್ಜಾತಿಯವರೇ ಆಗಿರುವುದರಿಂದ ಈ ಹೊಸ ಉತ್ಸಾಹದ ಹಣವೂ ಸ್ಥಾಪಿತ ಹಿತಾಸಕ್ತಿಗಳತ್ತವೇ ಹರಿಯುವುದು ಖಂಡಿತ.  ಆದರೆ ದಲಿತ ಪಾತ್ರಿಗಳ ಕುಟುಂಬದ ದಯನೀಯ ಸ್ಥಿತಿ ಇದ್ದ ಹಾಗೆ ಇರುತ್ತದೆ.

ಉಜಿರೆಯ ಸೌಜನ್ಯ ಎಂಬ ಕಾಲೇಜು ಹುಡುಗಿ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾಗಿ ಇಂದಿಗೆ 10 ವರ್ಷ ಕಳೆಯಿತು. ಕಾಂತಾರ ಚಿತ್ರದಲ್ಲಿ ತೋರಿಸಿದಂತೆ ಪಂಜುರ್ಲಿ ಅಷ್ಟು ಕಾರ್ಣಿಕದ ಭೂತ ಆಗಿದ್ದರೆ ಧರ್ಮಸ್ಥಳದಲ್ಲಿಯೇ ನೆಲೆಸಿರುವ ಅಣ್ಣಪ್ಪ ಪಂಜುರ್ಲಿ ಇನ್ನೂ ಯಾಕೆ ಸೌಜನ್ಯಳ ಹೆತ್ತವರಿಗೆ ನ್ಯಾಯ ಕೊಡಿಸಿಲ್ಲ?

ಕಾಂತಾರ ಚಿತ್ರದಲ್ಲಿ ಹಿನ್ನೆಲೆಯ ಸಂಸ್ಕೃತ ಮಂತ್ರದ ಅರ್ಥ ಇಂಗ್ಲಿಷ್ ಸಬ್-ಟೈಟಲ್ ನಲ್ಲಿ ತೋರಿಸುವಾಗ ಪಂಜುರ್ಲಿಯು ವಿಷ್ಣುವಿನ ಮೂರನೆಯ ಅವತಾರ (ವರಾಹಮೂರ್ತಿ) ಹಾಗೂ ವಿಷ್ಣು ಎಲ್ಲಾ ದೇವರಿಗಿಂತ ಶ್ರೇಷ್ಠ (ವಿಷ್ಣು ಸುಪ್ರೀಂ ಎಮಂಗ್ ಆಲ್ ಗಾಡ್ಸ್) ಎಂದು ಬರೆದು ಮಾಧ್ವ, ವೈಷ್ಣವರನ್ನು ಖುಷಿಪಡಿಸಿದ್ದು ಹೆಚ್ಚಿನ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ತುಳುವ ಮೂಲ ನಿವಾಸಿಗಳ ನಂಬುಗೆಗಳಲ್ಲಿ ವಿಷ್ಣುವಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ! ಇಲ್ಲಿ ದ್ರಾವಿಡರ ದೇವರುಗಳಾದ ಶಿವ, ಸುಬ್ರಹ್ಮಣ್ಯ ಮತ್ತು ದುರ್ಗೆಗೆ ಹೆಚ್ಚು ಪ್ರಾಶಸ್ತ್ಯ!  ಇಲ್ಲಿಯ ಜನರ ನಂಬುಗೆಯಂತೆ ಪಂಜುರ್ಲಿ ಗುಳಿಗ ಮಾತ್ರವಲ್ಲ ಎಲ್ಲಾ ಭೂತ-ದೈವಗಳೂ ಶಿವಭಕ್ತರು!

ಪ್ರವೀಣ್ ಎಸ್ ಶೆಟ್ಟಿ
ಹಿರಿಯ ಲೇಖಕರು

You cannot copy content of this page

Exit mobile version