Monday, April 14, 2025

ಸತ್ಯ | ನ್ಯಾಯ |ಧರ್ಮ

ವಾಡಿಯಲ್ಲಿ ಬೈಕ್ ಜಾಥಾಕ್ಕೆ ಚಾಲನೆ: ಏ.26ಕ್ಕೆ ಸಂವಿಧಾನ ಸಂರಕ್ಷಕರ ಸಮಾವೇಶ

ಕಲಬುರಗಿ,ವಾಡಿ: ಬಾಬಾಸಾಹೇಬ್‌ ಡಾ. ಬಿಆರ್‌ ಅಂಬೇಡ್ಕರ್‌ ಅವರು ಬೇಟಿ ನೀಡಿದ್ದ ವಾಡಿಯಲ್ಲಿ ನಡೆದ ದೇಶಪ್ರೇಮಿ ಯುವಾಂದೋಲನ ಬೈಕ್ ಜಾಥಾವನ್ನು ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಏ.14ರಂದು (ಸೋಮವಾರ) ಉದ್ಘಾಟಿಸಿದರು.

ಬಾಬಾಸಾಹೇಬರ ಒಡನಾಟದಲ್ಲಿದ್ದು ಬಾಬಾಸಾಹೇಬರ ಜೊತೆಯೇ ಬೌದ್ಧ ಧಮ್ಮ ಸ್ವೀಕರಿಸಿದ ವಾಡಿಯ ಅಮೃತರಾವ್ ಕೋಮಟೆ ಅವರ ಮಗ ಟೋಪಣ್ಣ ಕೋಮಟೆ ಅವರು ಯುವ ತಂಡಕ್ಕೆ ಬಾಬಾಸಾಹೇಬರ ಬಾವುಟ ನೀಡಿ ಉದ್ಘಾಟಿಸಿ.

ನಂತರ ಜಾಥಾದ ತಂಡವು ಪುರಸಭೆಯ ನೌಕರರು, ಲಾರಿ ಒಕ್ಕೂಟದ ಸಂಘದವರ ಜೊತೆ ಸಭೆಗಳನ್ನು ನಡೆಸಿ, ಏ.26ರಂದು ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದ ಮಹತ್ವ ಕುರಿತು ತಿಳಿಸಿ, ಸಮಾವೇಶಕ್ಕೆ ಆಹ್ವಾನ ಮಾಡಿತು. ಅಂದು ದಾವಣಗೆರೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಸುಮಾರು 10,000ಕ್ಕೂ ಹೆಚ್ಚು ಸಂವಿಧಾನ ಸಂರಕ್ಷಕ ಹೋರಾಟಗಾರರು ಸೇರಲಿದ್ದಾರೆ ಎಂದು ತಂಡದವರು ತಿಳಿಸಿದ್ದಾರೆ.

ಈ ಸಮಾವೇಶದ ಉದ್ದೇಶ ಅಪಾಯದಲ್ಲಿರುವ ಸಂವಿಧಾನವನ್ನು ರಕ್ಷಿಸಿಕೊಳ್ಳುವುದೇ ಆಗಿದೆ. ಕಾಂಗ್ರೆಸ್ಸಿನ ವೈಫಲ್ಯಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅಧಿಕಾರಕ್ಕೆರಿದ ಬಿಜೆಪಿ ಭಾರತವನ್ನು ನೈತಿಕವಾಗಿ, ಆರ್ಥಿಕವಾಗಿಯೂ, ರಾಜಕೀಯವಾಗಿ ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ. ಸಂತ-ಶರಣರ ಬೀಡಾಗಿದ್ದ ಭಾರತವನ್ನು ಜಾತಿ, ಧರ್ಮಗಳ ಹೆಸರಲ್ಲಿ ಕಚ್ಚಾಡುವ ಕುರುಕ್ಷೇತ್ರವನ್ನಾಗಿ ಪರಿವರ್ತಿಸಲಾಗಿದೆ. ಜನರ ಗಮನವನ್ನೆಲ್ಲಾ ದಿಕ್ಕುತಪ್ಪಿಸಿ ದೇಶದ ಬೃಹತ್ ಸಂಪತ್ತನ್ನು ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಕುಳಗಳ ತೆಕ್ಕೆಗೆ ಅರ್ಪಿಸಲಾಗಿದೆ. ಸಂವಿಧಾನ ಮೌಲ್ಯಗಳಿಗೆ ತದ್ವಿರುದ್ದ ದಿಕ್ಕಿನಲ್ಲಿ ದೇಶವನ್ನು ಅಪಹರಿಸಿ ಕೊಂಡೊಯ್ಯಲಾಗುತ್ತಿದೆ. ಸ್ವಾತಂತ್ರ್ಯದ ಜಾಗದಲ್ಲಿ ಸರ್ವಾಧಿಕಾರ, ಸಮಾನತೆಯ ಜಾಗದಲ್ಲಿ ಬಲಾಢ್ಯರ ಅಭಿವೃದ್ಧಿ, ಸೋದರತ್ವದ ಜಾಗದಲ್ಲಿ ಸನಾತನವಾದ, ಸಾಮಾಜಿಕ ನ್ಯಾಯದ ಜಾಗದಲ್ಲಿ ಮೇಲ್ವರ್ಗದವರಿಗೆ ಮೇಲ್ಪಂಕ್ತಿ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸಂವಿಧಾನ ಈ ದೇಶದ ದುಡಿಯುವ ಜನರಾದ ರೈತ, ಕೂಲಿ, ಕಾರ್ಮಿಕ, ಸಾಮಾನ್ಯ ಜನರಿಗೆ ನೀಡಿದ್ದ ಹಕ್ಕುಗಳನ್ನೆಲ್ಲಾ ವೇಗಗತಿಯಲ್ಲಿ ರದ್ದುಗೊಳಿಸಲಾಗತ್ತಿದೆ. ಈ ದೇಶದ ದಮನಿತ ಸಮುದಾಯಗಳಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಅತಿ ಹಿಂದುಳಿದ, ಮಹಿಳಾ, ಲೈಂಗಿಕ ಅಲ್ಪಸಂಖ್ಯಾತ ಮುಂತಾದ ಜನ ವರ್ಗಗಳಿಗೆ ಸಾಮಾಜಿಕವಾಗಿ ಮುಂದೆ ಬರಲು ನೀಡಲಾಗಿದ್ದ ಅವಕಾಶಗಳ ಮಾರ್ಗಗಳನ್ನೆಲ್ಲಾ ಮುಚ್ಚಲಾಗುತ್ತಿದೆ. ಸರಕಾರಿ ಶಿಕ್ಷಣ, ಸರಕಾರಿ ಚಿಕಿತ್ಸೆ ಕಣ್ಮರೆಯಾಗುತ್ತಿವೆ. ಕೆಲಸಕ್ಕೆ ಯಾವ ಭದ್ರತೆಯೂ ಇಲ್ಲವಾಗಿದೆ. ಬೆಲೆಏರಿಕೆ, ಭ್ರಷ್ಟಾಚಾರ ದುಡಿದದ್ದನ್ನೆಲ್ಲಾ ಬಾಚಿ ತಿನ್ನುತ್ತಿವೆ. ರೈತರು, ಜನಸಾಮಾನ್ಯರು ಸಾಲದ ಸುಳಿಯಲ್ಲಿ ನಲುಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಮಿತಿಮೀರಿ ಬೆಳೆಯುತ್ತಿವೆ. ಜಾತಿ ಧರ್ಮದ ಹೆಸರಿನಲ್ಲಿ ನೆತ್ತರು ಹರಿದಾಡುತ್ತಿದೆ. ಒಟ್ಟಾರೆ ಸಂವಿಧಾನ ಅಪಾಯದಲ್ಲಿದೆ ಇದರ ರಕ್ಷಣೆಯೇ ನಮ್ಮ ಈ ಸಮಾವೇಶದ ಉದ್ದೇಶ ಎಂದು ಯುವಾಂದೋಲನ ತಂಡ ತಿಳಿಸಿದೆ.

“ಜನಸಾಮಾನ್ಯರ ಬಲ ಕುಗ್ಗಿದೊಡನೆ ಪ್ರಜಾಪ್ರಭುತ್ವ ಸತ್ವ ಕಳೆದುಕೊಳ್ಳುತ್ತದೆ. ಕಳೆದ 3 ದಶಕಗಳಲ್ಲಿ ಆದದ್ದು ಇದೇ. ನಾವು ಒಡೆದು ಹೋದೆವು. ಅವರು ನಮ್ಮ ಮೇಲೆರಿ ಕುಳಿತರು. ಆದ ಕಾರಣ ರಾಜ್ಯದಲ್ಲಿರುವ ಎಲ್ಲ ಜನಪರ ಸಂಘಟನೆಗಳು, ಜನಪರ ಮನಸ್ಸುಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೂತು ಮಾತನಾಡುತ್ತಿದ್ದೇವೆ. ಪರಸ್ಪರ ಕೈ ಕೈ ಜೋಡಿಸಿ ಕೆಲಸ ಮಾಡಲು ಶುರು ಮಾಡಿದ್ದೇವೆ. ನಮ್ಮ ನಮ್ಮದೇ ರೀತಿಯಲ್ಲಿ ಸರ್ವಾಧಿಕಾರಿ, ಷಡ್ಯಂತ್ರಕಾರಿ ಶಕ್ತಿಗಳನ್ನು ಪ್ರತಿರೋಧಿಸುತ್ತಿದ್ದೇವೆ. ಇದೊಂದು ಮಹಾಯಾನ, ನಾವು ನೀವೆಲ್ಲರೂ ಕೂಡಿ ಮುಂದ್ಸಾಗಿಸಬೇಕಾದ ನವಯಾನ. ದುಡಿಯುವ ವರ್ಗದ ಹೋರಾಟಗಳಿಗೆ ಹೆಸರಾಗಿದ್ದ ದಾವಣಗೆರೆ ಹೊಸ ತಲೆಮಾರಿನ ಮಹಾಯನಕ್ಕೆ ವೇದಿಕೆಯಾಗುತ್ತಿದೆ,” ಎಂದು ಆಯೋಜಕರು ತಿಳಿಸಿದ್ದಾರೆ.

ವಾಡಿಯಿಂದ ಪ್ರಾರಂಭವಾಗಿರುವ ಈ ನಮ್ಮ ಬೈಕ್ ಜಾಥಾವು ಇಂದಿನಿಂದ (ಏ.14) ಏ.26ರವರೆಗೆ ನಡೆಯಲಿದ್ದು, ಸುಮಾರು 20 ಜಿಲ್ಲೆಗಳ ಮೂಲಕ, ಸರಿ ಸುಮಾರು 2000 ಕಿ.ಮೀ. ಕ್ರಮಿಸಿ 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಸೇರಿಕೊಳ್ಳಲಿದೆ ಎಂದು ತಂಡದ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.

ದೇಶಪ್ರೇಮಿ ಯುವ ಆಂದೋಲನವು ಜಾಥಾದ ಉದ್ದಕ್ಕೂ ವಿದ್ಯಾರ್ಥಿ ಯುವಜನರ ಸಮಸ್ಯೆಗಳು ಮತ್ತು ಸಂವಿಧಾನದ ಸಂರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ಹಾಗೂ ಏಪ್ರಿಲ್ 26ರ ಸಮಾವೇಶದ ಪ್ರಚಾರವನ್ನು ನಡೆಸಲಿದೆ. ಏಪ್ರಿಲ್ 14ನೇ ತಾರೀಕು ಅಂಬೇಡ್ಕರ್ ಅವರು ನಮ್ಮ ರಾಜ್ಯದ ಗುಲ್ಬರ್ಗ ಜಿಲ್ಲೆಯ ಈ ವಾಡಿಗೆ ಭೇಟಿ ನೀಡಿದ ಸ್ಥಳವಾದ್ದರಿಂದ ಇಲ್ಲಿಂದಲೇ ನಮ್ಮ ಜಾಥವನ್ನು ಪ್ರಾರಂಭಿಸಲಾಗಿದೆ.

ಈ ಜಾಥಾವು ಸುಮಾರು 20 ಬೈಕ್ ಗಳಲ್ಲಿ 12 ದಿನಗಳು ನಡೆಯಲಿದ್ದು ಸುಮಾರು 20 ಜಿಲ್ಲೆಗಳನ್ನು ಮತ್ತು ಹಲವು ತಾಲೂಕುಗಳನ್ನು ಹಾಗೂ ಊರುಗಳನ್ನು ಸುತ್ತಾಡಿಕೊಂಡು ಏಪ್ರಿಲ್ 25 ನೇ ತಾರೀಕು ದಾವಣಗೆರೆಯನ್ನು ತಲುಪಲಿದೆ. ಇದು ಹಾದು ಹೋಗುವ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಊರುಗಳಲ್ಲಿ ಯುವಜನರೊಂದಿಗೆ ವಿದ್ಯಾರ್ಥಿ ಯುವಜನರೊಂದಿಗೆ ಸಂವಾದ ಮತ್ತು ಪತ್ರಿಕಾಗೋಷ್ಟಿ ನಡೆಸಲಿದೆ.

ಜಾಥಾದ ಇನ್ನೊಬ್ಬ ಯುವ ಮುಂದಾಳು, ವಿದ್ಯಾರ್ಥಿ ನಾಯಕ ಹೇಮಂತ್ ಸಕಲೇಶ್ ಪುರ, “ನಮ್ಮ ಜಾಥಾವು ಇಂದು ವಾಡಿಯಿಂದ ಆರಂಭಿಸಿ, ಸೇಡಂ, ಚಿಂಚೋಳಿಗೆ ಭೇಟಿ ನೀಡಲಿದೆ. ನಾಳೆ ಅಂದರೆ ಏ.15ರಂದು ಭಾಲ್ಕಿ, ಬಸವಕಲ್ಯಾಣ, ಹುಮ್ನಬಾದ್, ಕಲಬುರ್ಗಿಗಳಲ್ಲಿ ಸಂಚರಿಸಲಿದೆ. ಏ.16ರಂದು ಕಲಬುರ್ಗಿ, ಇಂಡಿ, ವಿಜಯಪುರ, ಏ.17ರಂದು ಸಿಂದಗಿ, ಗಹಾಪುರ, ಯಾದಗಿರಿ, ಏ.18 ದೇವದುರ್ಗ, ರಾಯಚೂರು, ಏ.19ರಂದು ಮಾನ್ವಿ, ಸಿಂಧನೂರು, ಗಂಗಾವತಿ, ಏ.20ರಂದು ಗಂಗಾವತಿ, ಕೊಪ್ಪಳ, ಗದಗ, ಅಥವಾ ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಗದಗ, ಏ.21ರಂದು ಹುಬ್ಬಳ್ಳಿ, ಧಾರವಾಡ, ಮುಂಡಗೋಡ, ಏ.22ರಂದು ಶಿಗ್ಗಾಂವಿ, ಹಾವೇರಿ, ರಾಣಿಬೆನ್ನೂರು, ಶಿಕಾರಿಪುರ, ಏ.23ರಂದು ತೀರ್ಥಹಳ್ಳಿ, ಕೊಪ್ಪ, ಜೈಪುರ, ಶೃಂಗೇರಿ, ಏ.24 ಮತ್ತು 25 ಕೊನೆಯ ದಿನದಂದು ಭದ್ರಾವತಿ, ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ದಾವಣಗೆರೆ ಸಂಚರಿಸಲಿದೆ,” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page