Friday, June 20, 2025

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್ ಬಾನು ಪರ ನಿಲ್ಲದ ಭಾರತೀಯ ಸಮಾಜದ ಮೇಲೆ ನಟಿ ಪೂಜಾ ಬೇಡಿ ಆಕ್ರೋಶ

ಗರ್ಭಿಣಿ ಹೆಣ್ಣಾದ ಬಿಲ್ಕಿಸ್ ಬಾನು ಮೇಲಿನ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ‘ಸನ್ನಡತೆ’ ಆಧಾರದ ಬಿಡುಗಡೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚು ಸೂಕ್ಷ್ಮತೆ ಪಡೆದುಕೊಳ್ಳುತ್ತಿದೆ. ಗುಜರಾತ್ ಸರ್ಕಾರದ ಈ ಒಂದು ನಿರ್ಧಾರ ಮತ್ತು ಅಪರಾಧಿಗಳ ಬಿಡುಗಡೆ ಬಗ್ಗೆ ಬಿಜೆಪಿ ಪಕ್ಷದ ನಾಯಕರ ಸಮರ್ಥನೆ ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದೆ. ಬ್ರಾಹ್ಮಣ ಎಂದ ಮಾತ್ರಕ್ಕೆ ಎಂತಹ ಅಪರಾಧ ಮಾಡಿದರೂ ಕ್ಷಮೆಗೆ ಅರ್ಹನೇ ಅಥವಾ ಜಾತಿ ಮಾನದಂಡವೇ ಬಿಡುಗಡೆಗೆ ಪ್ರಮುಖ ಕಾರಣವಾಯಿತೇ ಎಂಬುದು ಅತ್ಯಂತ ಸೂಕ್ಷ್ಮವಾಗಿ ಚರ್ಚಿತ ವಿಚಾರವಾಗಿದೆ.

ಈ ಬಗ್ಗೆ ನಟಿ ಪೂಜಾ ಬೇಡಿಯವರು ತೀವ್ರವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂಡಿಯಾ ಟುಡೇ ರಾಷ್ಟ್ರೀಯ ಸುದ್ದಿ ವಾಹಿನಿ ನಟಿ ಪೂಜಾ ಬೇಡಿಯವರನ್ನು ಸಂಪರ್ಕಿಸಿ ಅತ್ಯಾಚಾರ ಅಪರಾಧಿಗಳ ಬಿಡುಗಡೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಲಾಗಿ, ‘ಈ ಪ್ರಕರಣ ಭಾರತ ಸರ್ಕಾರಕ್ಕೇ ನಾಚಿಕೆ ತರಿಸುವಂತದ್ದು. ಒಂದು ಸರ್ಕಾರವಾಗಿ ಸರ್ವ ಜನಾಂಗಗಳನ್ನೂ ಸಮಾನತೆಯ ಅಡಿಯಲ್ಲಿ ನೋಡಬೇಕು. ಒಂದು ಮುಸ್ಲಿಂ ಕುಟುಂಬಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ. ಅದು ಕೇವಲ ಬಿಲ್ಕಿಸ್ ಬಾನು ಒಬ್ಬರ ಮೇಲಾದ ಅತ್ಯಾಚಾರ ಅಲ್ಲ, ತಾಯಿಯ ಎದುರು ಮಗಳ ಮೇಲೆ, ಮಗಳ ಎದುರು ತಾಯಿಯ ಮೇಲೆ, ಅಕ್ಕ ತಂಗಿಯರ ಮೇಲಾದಂತಹ ಸಾಮೂಹಿಕ ಅತ್ಯಾಚಾರ. ಎಲ್ಲಕ್ಕಿಂತ ಹೆಚ್ಚಾಗಿ ತುಂಬು ಗರ್ಭಿಣಿ ಎಂದೂ ನೋಡದೇ ಅವರ ಮೇಲೆ ಕ್ರೌರ್ಯ ಎಸಗಿದ ಪ್ರಕರಣ. ಇಂತಹ ಪ್ರಕರಣದ ಅಪರಾಧಿಗಳು ಜಾತಿಯ ಮಾನದಂಡದ ಮೇಲೆ ಬಿಡುಗಡೆ ಆಗುತ್ತಾರೆ ಎಂದರೆ ಇಡೀ ದೇಶಕ್ಕೆ ದೇಶವೇ ಈ ಬಗ್ಗೆ ಆಕ್ರೋಶ ಹೊರಹಾಕಬೇಕಿತ್ತು. ಆದರೆ ಇಡೀ ದೇಶವೇ ಈ ಪ್ರಕರಣದ ಬಗ್ಗೆ ಮೌನ ತಳೆದಿರುವುದು ಆತಂಕದ ಮತ್ತು ಅಸಹ್ಯದ ಬೆಳವಣಿಗೆ’ ಎಂದು ತಿಳಿಸಿದ್ದಾರೆ.

ಮುಂದುವರೆದು ‘ಒಂದು ಮುಸ್ಲಿಂ ಫ್ಯಾಮಿಲಿ ಗ್ಯಾಂಗ್ ರೇಪ್ ಮಾಡಿರೋ ವ್ಯಕ್ತಿಗಳು ಬ್ರಾಹ್ಮಣರು ಮತ್ತು ಸನ್ನಡತೆ ಉಳ್ಳವರು ಎಂದು ನಿರ್ದರಿಸಿ ಸ್ವಾತಂತ್ರ್ಯ ದಿನಾಚರಣೆ ದಿನ ಬಿಡುಗಡೆ ಮಾಡುತ್ತಾರೆ, ಅದೇ ಜಾಗದಲ್ಲಿ ನಿಮ್ಮ ತಾಯಿ, ಅಕ್ಕ, ತಂಗಿ, ಹೆಂಡತಿ ಅಥವಾ ಇನ್ನಾವುದೇ ಸದಸ್ಯೆ ಆಗಿದ್ದರೆ ಸರ್ಕಾರದ ಈ ನಡತೆ ಸರಿ ಅನ್ನಿಸುತ್ತಿತ್ತಾ, ಈ ಬಗ್ಗೆ ಯಾಕೆ ಯಾರೂ ಮಾತನಾಡುತ್ತಿಲ್ಲ, ಆ ಫ್ಯಾಮಿಲಿ ಮುಸ್ಲಿಂ ಎನ್ನುವ ಕಾರಣಕ್ಕಾ ಅಥವಾ ರೇಪಿಸ್ಟ್ ಗಳು ಬ್ರಾಹ್ಮಣರು ಎನ್ನುವ ಕಾರಣಕ್ಕಾ? ದುರಂತ ಎಂದರೆ ಸರ್ಕಾರವೇ ಇವರ ಪರ ನಿಂತು ಆ ಕುಟುಂಬಕ್ಕಾದ ಅನ್ಯಾಯಕ್ಕೆ ನ್ಯಾಯ ಕೊಡಬೇಕಿತ್ತು. ಆದರೆ ಅದೇ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಯಂದೇ ಅವರನ್ನು ಬಿಡುಗಡೆ ಮಾಡಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು’ ಎಂದು ತಿಳಿಸಿದ್ದಾರೆ.

ಇನ್ನು ಬಾಲಿವುಡ್ ನಟನಟಿಯರು ಸಂತ್ರಸ್ತೆ ಬಿಲ್ಕಿಸ್ ಬಾನು ಪರವಾಗಿ ಇದ್ದೇವೆ ಎಂದು ವಯಕ್ತಿಕವಾಗಿ ಕರೆ ಮಾಡಿ ಹೇಳಿದ್ದಾರೆ, ಬಿಲ್ಕಿಸ್ ಬಾನು ಹೊರಬಂದು ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದೂ ಹೇಳಿದ್ದಾರೆ. ದುರಂತ ಎಂದರೆ ಈ ವರೆಗೂ ಯಾರೂ ಪ್ರತ್ಯಕ್ಷ ಮತ್ತು ಬಹಿರಂಗವಾಗಿ ಬಿಲ್ಕಿಸ್ ಬಾನು ಪರ ನಿಂತಿಲ್ಲ. ಕಾರಣ ಏನೆಂದರೆ ಹಲವಾರು ಬಾಲಿವುಡ್ ನಟನಟಿಯರ ಸಿನಿಮಾ ರಿಲೀಸ್ ಆಗೋ ಹಂತದಲ್ಲಿದೆ. ಈ ಪ್ರಕರಣದ ಬಗ್ಗೆ ದನಿ ಎತ್ತಿದರೆ ಎಲ್ಲಿ ತಮ್ಮ ಸಿನೆಮಾ ಬಾಯ್ಕಾಟ್ ಆಗಬಹುದು ಎಂಬ ಭಯ ಇದೆ. ನಾಳೆ ನಿಮ್ಮ ಕುಟುಂಬಕ್ಕೆ ಈ ತರ ಆದರೆ ಮುಂದೆ ಯಾರೂ ಮಾತಾಡೋರು ಇಲ್ಲ, ಈಗ ಮಾತನಾಡಿದರೆ ಮಾತ್ರ ನಿಮ್ಮ ಬೆಂಬಲಕ್ಕೆ ಜನ ನಿಲ್ಲುತ್ತಾರೆ ಎಂದಿದ್ದಾರೆ. ಇದನ್ನು ನಿರ್ಭಯಾ ಪ್ರಕರಣಕ್ಕೆ ಹೋಲಿಸಿ ಮಾತನಾಡಿ, ನಿರ್ಭಯಾ ಪರವಾಗಿ ಇಡೀ ದೇಶಕ್ಕೆ ದೇಶವೇ ದನಿ ಎತ್ತಿದ್ದು, ಈಕೆ ಮುಸ್ಲಿಂ ಎಂಬ ಕಾರಣಕ್ಕೆ ದನಿ ಎತ್ತದೆ ಇರುವುದು ಆತಂಕ ಸೃಷ್ಟಿ ಮಾಡಿದೆ ಎಂದಿದ್ದಾರೆ.

ಸಧ್ಯ ಈ ಬಿಡುಗಡೆ ಪ್ರಶ್ನಿಸಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮೊಹುವಾ ಮೋಯಿತ್ರಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಬಿಡುಗಡೆ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ದುರಂತ ಎಂದರೆ ಗುಜರಾತ್ ಸರ್ಕಾರದ ಈ ನಿರ್ಧಾರದ ಬಗ್ಗೆ ಆಡಳಿತಾರೂಢ ಬಿಜೆಪಿ ಪಕ್ಷದ ಯಾವ ಮಹಿಳಾ ಸದಸ್ಯರು ಕೂಡ ಈ ವರೆಗೆ ಖಂಡಿಸದೇ ಇರುವುದು.

ಪಕ್ಷ ಪಂಥಗಳ ಆಚೆಗೂ ಬಿಜೆಪಿ ಮಹಿಳಾ ಸದಸ್ಯರು ಸ್ತ್ರೀ ಸಂವೇದನೆಗೆ ದನಿಗೂಡಿಸಬಹುದಿತ್ತು. ಇನ್ನೇನು ಡಿಸೆಂಬರ್ ತಿಂಗಳಲ್ಲಿ ಎದುರಾಗುವ ಗುಜರಾತ್ ಚುನಾವಣೆಗೆ ಈ ಪ್ರಕರಣ ಬಿಜೆಪಿಗೆ ಮುಳುವಾಗಬಹುದು ಎಂದು ಬಿಡುಗಡೆಗೆ ಆಕ್ಷೇಪಿಸಬಹುದಿತ್ತು. ಬಹಿರಂಗವಾಗಿ ಅಲ್ಲದಿದ್ದರೂ ಪಕ್ಷದ ಆಂತರಿಕ ಮಟ್ಟದಲ್ಲಿ ಸರ್ಕಾರದ ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿ ಇದರ ಮುಂದಿನ ಪರಿಣಾಮದ ಬಗ್ಗೆ ಬೆಳಕು ಚೆಲ್ಲಬಹುದಿತ್ತು. ಆದರೆ ಪಕ್ಷದ ನಿರ್ಧಾರವೇ ಅಂತಿಮ ಎಂಬ ಮಟ್ಟಕ್ಕೆ ಬಿಜೆಪಿ ಮಹಿಳಾ ಸದಸ್ಯರು, ನಾಯಕರು ನಿಂತಿದ್ದು ಮಾತ್ರ ದೇಶವೇ ತಲೆ ತಗ್ಗಿಸುವಂತದ್ದು.

ಸಮಾಧಾನ ಎಂದರೆ ಯಾವಾಗ ಬಿಡುಗಡೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತೋ ಬಿಜೆಪಿ ಪಕ್ಷದ ಇಬ್ಬರು ಪ್ರಮುಖ ನಾಯಕರು ಈ ಬಗ್ಗೆ ದನಿ ಎತ್ತಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ವಕ್ತಾರೆ ಖುಷ್ಬು ಗುಜರಾತ್ ಸರ್ಕಾರದ ನಿರ್ಧಾರ ಸರಿಯಲ್ಲ, ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ‌.

Related Articles

ಇತ್ತೀಚಿನ ಸುದ್ದಿಗಳು

You cannot copy content of this page