Sunday, January 11, 2026

ಸತ್ಯ | ನ್ಯಾಯ |ಧರ್ಮ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ತುಷಾರ್ ಆಪ್ಟೆಯನ್ನು ಕೌನ್ಸಿಲರ್ ಆಗಿ ನೇಮಿಸಿದ ಬಿಜೆಪಿ

ಥಾಣೆ ಜಿಲ್ಲೆಯ ಬದ್ಲಾಪುರ ಶಾಲೆಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಹ-ಆರೋಪಿಯಾಗಿದ್ದ ತುಷಾರ್ ಆಪ್ಟೆyನ್ನು ಬಿಜೆಪಿ, ಕುಲಗಾಂವ್-ಬದ್ಲಾಪುರ ನಗರಸಭೆಗೆ ‘ಸಹ-ಆಯ್ಕೆಯ’ (Co-opted) ಕೌನ್ಸಿಲರ್ ಆಗಿ ನೇಮಕ ಮಾಡಿದೆ.

ನಗರಸಭೆಯ ಐವರು ಸಹ-ಆಯ್ಕೆಯ ಕೌನ್ಸಿಲರ್‌ಗಳ ಆಯ್ಕೆ ಪ್ರಕ್ರಿಯೆಯು ಶುಕ್ರವಾರ ಪೂರ್ಣಗೊಂಡಿದ್ದು, ಈ ಪೈಕಿ ಇಬ್ಬರನ್ನು ಬಿಜೆಪಿ, ಇಬ್ಬರನ್ನು ಶಿವಸೇನೆ ಮತ್ತು ಒಬ್ಬರನ್ನು ಎನ್‌ಸಿಪಿ ನಾಮನಿರ್ದೇಶನ ಮಾಡಿದೆ.

ದೌರ್ಜನ್ಯ ನಡೆದ ಶಾಲಾ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ತುಷಾರ್ ಆಪ್ಟೆ ವಿರುದ್ಧ, ಘಟನೆಯ ಬಗ್ಗೆ ಮಾಹಿತಿ ಇದ್ದರೂ ವರದಿ ಮಾಡದ ಕಾರಣ ಪೋಕ್ಸೋ ಕಾಯ್ದೆಯ ಸೆಕ್ಷನ್ 21(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ 44 ದಿನಗಳ ನಂತರ ಅವರನ್ನು ಬಂಧಿಸಲಾಗಿತ್ತು ಮತ್ತು 48 ಗಂಟೆಗಳ ಒಳಗಾಗಿ ಅವರು ಜಾಮೀನು ಪಡೆದಿದ್ದರು. ಸದ್ಯ ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

ಬಿಜೆಪಿ ಕೌನ್ಸಿಲರ್ ರಾಜನ್ ಘೋರ್ಪಡೆ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಆಪ್ಟೆ ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿದ್ದು ಶಾಲೆಯ ಮುಖ್ಯ ಆರೋಪಿಗೆ ಈಗಾಗಲೇ ಶಿಕ್ಷೆಯಾಗಿದೆ ಎಂದು ತಿಳಿಸಿದ್ದಾರೆ. ಆಪ್ಟೆ ಅವರ ಮೇಲಿನ ಅಪರಾಧ ಇನ್ನೂ ಸಾಬೀತಾಗಿಲ್ಲ ಮತ್ತು ಅವರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿರುವುದರಿಂದ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬದ್ಲಾಪುರದ ಶಾಲೆಯ ಶೌಚಾಲಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅಕ್ಷಯ್ ಶಿಂಧೆ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ್ದ ಘಟನೆಯು ದೇಶಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಮುಖ್ಯ ಆರೋಪಿ ಅಕ್ಷಯ್ ಶಿಂಧೆಯನ್ನು ಆಗಸ್ಟ್ 2024 ರಲ್ಲಿ ಬಂಧಿಸಲಾಗಿತ್ತು. ಆದರೆ, ಸೆಪ್ಟೆಂಬರ್ 23 ರಂದು ವಿಚಾರಣೆಗೆ ಕರೆದೊಯ್ಯುವಾಗ ಪೊಲೀಸರ ಬಂದೂಕು ಕಸಿದು ಗುಂಡು ಹಾರಿಸಲು ಯತ್ನಿಸಿದಾಗ ನಡೆದ ಎನ್‌ಕೌಂಟರ್‌ನಲ್ಲಿ ಆತ ಸಾವಿಗೀಡಾಗಿದ್ದನು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page