Home ಬ್ರೇಕಿಂಗ್ ಸುದ್ದಿ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಬಿಜೆಪಿಯಿಂದ ಗಲಭೆ ಎಬ್ಬಿಸುವ ಹುನ್ನಾರವೇ?

ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಬಿಜೆಪಿಯಿಂದ ಗಲಭೆ ಎಬ್ಬಿಸುವ ಹುನ್ನಾರವೇ?

0

ಹುಬ್ಬಳ್ಳಿ, ಸಪ್ಟೆಂಬರ್.‌14: ಗಣೇಶ ಚತುರ್ಥಿ ಹತ್ತಿರ ಬರುತ್ತಿದ್ದಂತೆ ಹುಬ್ಬಳ್ಳಿಯ ಈದ್ಗಾದಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಬಗ್ಗೆ ಮತ್ತೆ ಗದ್ದಲ ಎದ್ದಿದೆ. 11 ದಿನ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿರುವ ಹಿಂದುತ್ವ ಸಂಘಟನೆಗಳಿಂದ  ಮಹಾನಗರ ಪಾಲಿಕೆಗೆ ತಲೆನೋವು ಬಂದಿದೆ.ಗಣೇಶ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆಗಳು ಹೈಕೋರ್ಟ್‌ ಮಟ್ಟಿಲು ಏರಿವೆ.

ಹುಬ್ಬಳ್ಳಿಯ ಅಂಜುಮನ್‌ ಎ- ಇಸ್ಲಾಂ ಸಂಸ್ಥೆಯು ಧಾರವಾಡ ಹೈಕೋರ್ಟ್‌ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಆರಂಭವಾಗುವ ಮೊದಲೇ ಮುಸ್ಲೀಂ ಸಂಘಟನೆ ಹೈಕೋರ್ಟ್‌ ಮೆಟ್ಟಿಲೇರಿದೆ.  

ಕಳೆದ ವರ್ಷ ಹಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಿಂದುತ್ವ ಸಂಘಟನೆಗಳಿಗೆ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿತ್ತು. ಆಗಲೂ ಮುಸ್ಲೀಂ ಸಂಘಟನೆಗಳು ಮೊರೆ ಹೋಗಿದ್ದವು. ಆ ಸಂದರ್ಭದಲ್ಲಿ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ಪಾಲಿಕೆಯ ವಿವೇಚನೆಗೆ ಬಿಟ್ಟಿತ್ತು.  ಆ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಗಣೇಶೋತ್ಸವ ನಡೆದಿತ್ತು.

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಯವೊಂದಿಗೆ ಶಾಸಕ ಅರವಿಂದ ಬೆಲ್ಲದ ಅವರ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಸಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಒತ್ತಡ ಹಾಕಿತ್ತು. ಈಗ ಅನುಮತಿ ನೀಡುವವರೆಗೂ ಅಹೋರಾತ್ರಿ ಹೋರಾಟ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಬೆಲ್ಲದ “ಈದ್ಗಾದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ಸಿಕ್ಕಿದರೂ ಆಯುಕ್ತರು ಅಧಿಕೃತವಾಗಿ ಅನುಮತಿ ನೀಡಿಲ್ಲ. ಅವರು ಮುಖ್ಯಮಂತ್ರಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಅನುಮತಿ ನೀಡುವ ತನಕ ಅವರ ಕಚೇರಿಯ ಮುಂದೆಯೇ ಧರಣಿ ಕೂರುತ್ತೇವೆ. ಅನುಮತಿ ಕೊಡುವವರೆಗೂ ನಾವು ಪಾಲಿಕೆ ಬಿಟ್ಟು ಹೋಗೋದಿಲ್ಲ ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಿಡಿಕಾರಿರುವ ಬೆಲ್ಲದ “ಕಾಂಗ್ರೇಸ್‌ ಸರ್ಕಾರ ಹಿಂದೂಗಳ ಭಾವನೆಯ ಜೊತೆಗೆ ಚೆಲ್ಲಾಟ ಆಡುತ್ತಿದೆ. ಮುಸ್ಲೀಮರು ಮಾತ್ರವಲ್ಲ, ಹಿಂದೂಗಳೂ ಅವರಿಗೆ ಮತ ನೀಡಿದ್ದಾರೆ. ಈದ್ಗಾ ಮೈದಾನ ಮಹಾನಗರ ಪಾಲಿಕೆಯ ಆಸ್ತಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಾವು ಗಣೇಶೋತ್ಸವ ನಡೆಸಲು ಪಾಲಿಕೆಯ ಅನುಮತಿ ಕೇಳುತ್ತಿದ್ದೇವೆ. ಇಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಮುಸ್ಲಿಮರಿಗೆ ನಮಾಜ್ ಮಾಡೋಕೆ ಸರ್ಕಾರ ಅವಕಾಶ  ನೀಡಿದೆ. ಆದರೆ, ಗಣೇಶ ಹಬ್ಬಕ್ಕೆ ಸಿದ್ದರಾಮಯ್ಯ ಸರ್ಕಾರ ಅನುಮತಿ ಕೊಡುತ್ತಿಲ್ಲ,” ಎಂದು ಹೇಳಿದ್ದಾರೆ.

You cannot copy content of this page

Exit mobile version