Friday, June 20, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ತಳಮಳ | ವಿರೋಧ ಪಕ್ಷದ ನಾಯಕನ ಆಯ್ಕೆ: ಬಿಎಸ್‌ವೈ ಮೊರೆ ಹೋದ ಶಾಸಕರು

ಬೆಂಗಳೂರು: ಹೊಸ ಸರ್ಕಾರ ರಚನೆಯಾಗಿ ಸುಮಾರು ಆರು ತಿಂಗಳು ಕಳೆದರೂ ಪ್ರತಿಪಕ್ಷ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಘೋಷಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಮುಂಬರುವ ಡಿಸೆಂಬರ್‌ ತಿಂಗಳಿನಲ್ಲಿ ನಡೆಯಲಿರುವ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರಿಲ್ಲದೆ ಕಾಂಗ್ರೆಸ್‌ ಪಕ್ಷವನ್ನು ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿರುವ ಪಕ್ಷದ ಶಾಸಕರಿಗೆ ಇದು ಮುಜುಗರವನ್ನುಂಟು ಮಾಡಿದೆ ಎಂದು ವರದಿಯಾಗಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಬೇಕು ಎಂದು ಬಿಜೆಪಿ ಶಾಸಕರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಇದರೊಂದಿಗೆ ರಾಜ್ಯ ಬಿಜೆಪಿ ಪೂರ್ತಿಯಾಗಿ ಯಡಿಯೂರಪ್ಪ ನಿಯಂತ್ರಣಕ್ಕೆ ಬಂದಂತೆ ತೋರುತ್ತಿದೆ.

ಬಿಜೆಪಿ ಶಾಸಕರ ಗುಂಪಿನ ಒತ್ತಾಯದ ಮೇರೆಗೆ ಯಡಿಯೂರಪ್ಪ ಅವರು ಪಕ್ಷದ ಕೆಲವು ಮುಖಂಡರೊಂದಿಗೆ ಸಭೆ ನಡೆಸಿ ಪಕ್ಷದ ವಿವಿಧ ಕಾರ್ಯತಂತ್ರಗಳನ್ನು ಪರಿಶೀಲಿಸಿದರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಸಭೆಯಲ್ಲಿ, ಬಿಜೆಪಿ ಶಾಸಕರು ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಎರಡನೇ ವಿಧಾನಸಭೆ ಅಧಿವೇಶನಕ್ಕೆ ಮುನ್ನ ವಿರೋಧ ಪಕ್ಷದ ನಾಯಕನನ್ನು ನೇಮಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಯಡಿಯೂರಪ್ಪ ಅವರನ್ನು ಕೋರಿದರು ಎನ್ನಲಾಗಿದೆ. ವರದಿಗಳ ಪ್ರಕಾರ, ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರ ಹೆಸರನ್ನು ಹೇಳದೆ ಕಾಂಗ್ರೆಸ್ ನಾಯಕರ ಮುಜುಗರ ಮತ್ತು ಲೇವಡಿಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಯಡಿಯೂರಪ್ಪ ಅವರಿಗೆ ಹೇಳಿದ್ದಾರೆ.

ಈ ಕುರಿತು ಕೇಂದ್ರದ ನಾಯಕರೊಂದಿಗೆ ಮಾತನಾಡುವುದಾಗಿ ಯಡಿಯೂರಪ್ಪ ಶಾಸಕರಿಗೆ ಮಾತು ನೀಡಿರುವುದಾಗಿ ಹೇಳಲಾಗುತ್ತಿದೆಯಾದರೂ, ಹೈಕಮಾಂಡ್‌ ರಾಜ್ಯದ ಬಿಜೆಪಿ ನಾಯಕರಿಗೆ ಸೊಪ್ಪು ಹಾಕುವುದನ್ನೇ ನಿಲ್ಲಿಸಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಎದುರಿಸಿದ ಮೋದಿ ತಂಡವು ನಾಯಕರ ಮೇಲೆ ಭಯಂಕರ ಸಿಟ್ಟಿನಲ್ಲಿದೆ ಎನ್ನಲಾಗುತ್ತಿದೆ. ಇತ್ತೀಚಿಗಿನ ಜೆಡಿಎಸ್‌ ಮೈತ್ರಿ ಮಾತುಕತಗೂ ರಾಜ್ಯದ ನಾಯಕರನ್ನು ಬಿಟ್ಟು ಗೋವಾ ಮುಖ್ಯಮಂತ್ರಿಯನ್ನು ಅವಲಂಬಿಸಿತ್ತು. ಆದರೆ ಇದರಿಂದ ಬೇಸತ್ತಿರುವ ಬಿಜೆಪಿ ನಾಯಕರು ಯಾವುದೇ ಕ್ಷಣದಲ್ಲಿ ಸಿಡಿದೇಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಅವರು ಪ್ರಸ್ತುತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಉಳಿದಂತೆ ಸುನಿಲ್‌ ಕುಮಾರ್‌ ಮತ್ತು ಯತ್ನಾಳ್‌ ಹೆಸರುಗಳು ಕೇಳಿಬರುತ್ತಿದ್ದು ಇವೆರಡೂ ಆಯ್ಕೆಗಳನ್ನು ಯಡಿಯೂರಪ್ಪ ಒಪ್ಪುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page