ಬೆಂಗಳೂರು: ಹಿಂದೆ ಯುಪಿಎ ಸರ್ಕಾರ ಇದ್ದಾಗ ರಾಜ್ಯಗಳಿಗೆ ಕೇವಲ ಶೇ 20 ರಷ್ಟು ಮಾತ್ರ ಅನುದಾನ ಬರುತ್ತಿತ್ತು. ಆದರೆ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳಿಗೆ ಶೇ 42% ರಷ್ಟು ಅನುದಾನ ಬರುತ್ತಿದೆ. ಕಾಂಗ್ರೆಸ್ ನವರು ಕೇಂದ್ರದ ವಿರುದ್ದ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ಮಂಡಿಸಿರುವ ನಿರ್ಣಯದ ವಿರುದ್ಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಕೇಂದ್ರ ಸರಕಾರದ ವಿರುದ್ದ ನಿರ್ಣಯ ಮಂಡಿಸಿ ವಿಧಾನಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಿ ಸುಳ್ಳು ಹೇಳುವ ದಾಷ್ಟ್ಯ ತೋರಿಸಿದ್ದಾರೆ. ಕೇಂದ್ರದಿಂದ ಅನ್ಯಾಯವಾಗಿದೆ ಅಂತ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸ್ವಾತಂತ್ರ್ಯ ಬಂದಾಗಿನಿಂದ 55 ವರ್ಷ ದೇಶ ಆಳಿರುವ ಕಾಂಗ್ರೆಸ್ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ 20% ರಷ್ಟು ಮಾತ್ರ ಇತ್ತು. ಆಗ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ದಕ್ಷಿಣ ಭಾರತದ ಅನೇಕ ನಾಯಕರು ಸೇರಿ ರಾಜ್ಯಗಳ ತೆರಿಗೆ ಹೆಚ್ಚಳ ಮಾಡುವಂತೆ ಹೋರಾಟ ಮಾಡಿದರು. ಆದರೆ, ಯುಪಿಎ ಅವಧಿಯಲ್ಲಿ ರಾಜ್ಯಗಳ ತೆರಿಗೆ ಅನುದಾನ ಹೆಚ್ಚಳ ಮಾಡಲು ನಿರಾಕರಿಸಿದ್ದರು. ನರೇಂದ್ರ ಮೋದಿಯವರು ಬಂದು ಕೆಲವೇ ವರ್ಷದಲ್ಲಿ ರಾಜ್ಯಗಳ ತೆರಿಗೆ ಪಾಲನ್ನು ಶೇ 32% ರಿಂದ ಶೇ 42% ಕ್ಕೆ ಹೆಚ್ಚಳ ಮಾಡಿದ್ದಾರೆ ಎಂದು ಹೇಳಿದರು.
ಕೇಂದ್ರದಿಂದ ರಾಜ್ಯಕ್ಕೆ ಕೇವಲ ಜಿಎಸ್ ಟಿ ಪರಿಹಾರ, ಅನುದಾನ ಅಷ್ಟೇ ಅಲ್ಲದೇ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬರುತ್ತದೆ. ಅಲ್ಲದೇ, ಕೇಂದ್ರ ಸರಕಾರ ಫಲಾನುಭವಿಗಳ ಅಕೌಂಟ್ ಗೆ ನೇರವಾಗಿ ಹಣ ಹಾಕುತ್ತದೆ. ರಾಜ್ಯ ಸರಕಾರ ಅದೆಲ್ಲವನ್ನು ಮುಚ್ಚಿಟ್ಟು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸುಳ್ಳು ಹೇಳುತ್ತಿದೆ. ಬೆಂಗಳೂರಿನ ಫೆರಿಪೆರಲ್ ರಿಂಗ್ ರೊಡ್ ಗೆ ಕೇಂದ್ರದಿಂದ ಈಗಲೂ ಹಣ ಬರುತ್ತದೆ. ಆದರೆ, ರಾಜ್ಯ ಸರಕಾರ ಯೋಜನೆ ಆರಂಭಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ಸುಮಾರು 13 ಸಾವಿರ ಕೋಟಿ ರೂ. ಕೇಂದ್ರ ಸರಕಾರ ನೀಡಿದೆ. ರೈಲ್ವೆ ಯೋಜನೆಗಳಿಗೆ ಕೇಂದ್ರದ ಅನುದಾನ ಬಂದಿದೆ. ಪ್ರಧಾನಮಂತ್ರಿ ಅವಾಸ್ ಯೋಜನೆ, ಸ್ವಚ್ಚ ಭಾರತ್, ಆಯುಷ್ಮಾನ್ ಭಾರತ, ಅಮೃತ ನಗರ ಯೊಜನೆ ಅಡಿಯಲ್ಲಿ ರಾಜ್ಯಕ್ಕೆ ಹಣ ಬಂದಿದೆ ಎಂದು ಅವರು ಮಾಹಿತಿ ನೀಡಿದರು.