ಬಿಜೆಪಿ ಕಾರ್ಯಕ್ರಮಗಳಲ್ಲಿ ರೌಡಿ ಶೀಟರ್ಗಳ ಉಪಸ್ಥಿತಿಯ ಗದ್ದಲದ ನಡುವೆ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ ರೌಡಿಶೀಟರ್ ಒಬ್ಬನನ್ನು ಪುರಸಭೆ ಸದಸ್ಯನನ್ನಾಗಿ ನಾಮನಿರ್ದೇಶನ ಮಾಡಿದೆ. ಬೆಂಗಳೂರಿನ ಆನೇಕಲ್ ಭಾಗದ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನು ಆನೇಕಲ್ ಪುರಸಭೆ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಿದೆ.
ಕಳೆದ ಒಂದು ವಾರದಿಂದ ಬಿಜೆಪಿ ಪಕ್ಷದ ವಲಯದಲ್ಲಿ ರೌಡಿ ರಾಜಕಾರಣದ ಮಾತೇ ಹೆಚ್ಚು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿ ನಾಯಕರ ಜೊತೆ ರೌಡಿ ಶೀಟರ್ ಕಾಣಿಸಿಕೊಂಡ ಸುದ್ದಿಯಲ್ಲಿ ಇದು ಐದನೇ ಬಾರಿ. ಬೆಂಗಳೂರು ನಗರದ ಹೊರವಲಯದಲ್ಲಿ ಇರುವ ಆನೇಕಲ್ ರಿಯಲ್ ಎಸ್ಟೇಟ್ನಲ್ಲಿ ಹಂತಹಂತವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ಮತ್ತು ಹಲವು ಕೊಲೆ ಪ್ರಕರಣದ ಆರೋಪದಲ್ಲಿ ಕೇಳಿ ಬಂದ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ಉಪ್ಪಿಯನ್ನು ಸರ್ಕಾರ ನಾಮ ನಿರ್ದೇಶನ ಮಾಡಿದ್ದು ಮತ್ತೊಮ್ಮೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಸಿಸಿಬಿ ಪೊಲೀಸರ ವಾಂಟೆಡ್ ಪಟ್ಟಿಯಲ್ಲಿ ಇರುವ, ಸಿಸಿಬಿ ದಾಖಲೆಗಳಲ್ಲಿ ಪರಾರಿಯಾಗಿರುವ ರೌಡಿ ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಬಿಜೆಪಿಯ ಹಿರಿಯ ನಾಯಕರೊಂದಿಗೆ ವೇದಿಕೆ ಹಂಚಿಕೊಂಡ ನಂತರ ಕರ್ನಾಟಕದಲ್ಲಿ ರೌಡಿ ರಾಜಕಾರಣದ ವಿವಾದ ಭುಗಿಲೆದ್ದಿದೆ. ನವೆಂಬರ್ 29 ರಂದು ನಡೆದ ರಕ್ತದಾನ ಶಿಬಿರದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಸೇರಿದಂತೆ ಮುಂತಾದ ಬಿಜೆಪಿ ಮುಖಂಡರು ಇದ್ದ ವೇದಿಕೆಯಲ್ಲಿ ಸೈಲೆಂಟ್ ಸುನೀಲ ಕಾಣಿಸಿಕೊಂಡಿದ್ದರು. ಸ್ವತಃ ಕರ್ನಾಟಕ ಪೊಲೀಸರ ಭದ್ರತೆಯಲ್ಲೇ ಈ ಕಾರ್ಯಕ್ರಮ ನಡೆದದ್ದು ಹೆಚ್ಚು ಸುದ್ದಿಯಾಗಿತ್ತು.
ನಂತರ ಮಂಡ್ಯದ ಫೈಟರ್ ರವಿ ಬಿಜೆಪಿ ಸೇರ್ಪಡೆ ಮತ್ತು ಜೆಡಿಎಸ್ ಪಕ್ಷದ ಸದಸ್ಯರೊಬ್ಬರಿಗೆ ಧಮಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಸುದ್ದಿ ಕೂಡಾ ಹೆಚ್ಚು ಸುದ್ದಿಯಾಗಿತ್ತು. ಇಂತಹ ವ್ಯಕ್ತಿಗೂ ಬಿಜೆಪಿ ಮಣೆ ಹಾಕಿ ಆತಿಥ್ಯ ನೀಡಿದ್ದು ಜಗಜ್ಜಾಹೀರಾಗಿದೆ. ಇದರ ಜೊತೆಗೆ ರೌಡಿಶೀಟರ್ ಬೆತ್ತನಗೆರೆ ಶಂಕರ ಕೂಡಾ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದ. ಸದ್ಯ ಈ ಇಬ್ಬರೂ ರೌಡಿಗಳು ಬಿಜೆಪಿ ಸೇರ್ಪಡೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಂದಿತ್ತು.
ಇದರ ನಂತರ ಕಳೆದ ಎರಡು ದಿನಗಳಿಂದ ಬಿಜೆಪಿಯ ಹಿರಿಯ ಮುಖಂಡ ಸಚಿವ ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ನಾಗರಾಜ್ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ ಬಂದು ಹೋಗಿದ್ದು ಮತ್ತೊಮ್ಮೆ ಬಿಜೆಪಿ ಪಕ್ಷದ ಕಡೆಯಿಂದ ಹೆಚ್ಚು ಪ್ರಚಾರಕ್ಕೆ ಬಂದಿದೆ. ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಭೇಟಿ ನಂತರ ಪ್ರತಿಕ್ರಿಯಿಸಿದ ಸಚಿವ ವಿ ಸೋಮಣ್ಣ ಯಾವ ನಾಗ ಯಾರೂ ನನಗೆ ಗೊತ್ತಿಲ್ಲ ಎಂದು ಉಚ್ಚರಿಸಿದ್ದಾರೆ.
ಈಗ ಮತ್ತೆ ಬಿಜೆಪಿ ಸರ್ಕಾರವೇ ಆನೇಕಲ್ ಭಾಗದಲ್ಲಿ ಪುರಸಭೆಗೆ ರೌಡಿಶೀಟರ್ ಒಬ್ಬನನ್ನು ನಾಮನಿರ್ದೇಶನ ಮಾಡಿರುವುದು ಮತ್ತೆ ಸುದ್ದಿಗೆ ಬಂದಿದೆ. ಬಿಜೆಪಿ ಪಕ್ಷ ಮುಂಬರುವ ಚುನಾವಣೆ ಸಂದರ್ಭದಲ್ಲಿ ರೌಡಿಗಳನ್ನು ಒಟ್ಟುಮಾಡುತ್ತಿದೆ. ಆ ಮೂಲಕ ಜನರಲ್ಲಿ ಭಯಭೀತಿ ಹುಟ್ಟಿಸಲು ತೊಡಗಿದೆ ಎಂಬುದನ್ನು ಬಿಜೆಪಿ ವಿರೋಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.