ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಗುಲ್ಲೆದ್ದ ಬೆನ್ನಲ್ಲೇ ವಿರೋಧ ಪಕ್ಷ ಮತ್ತು ಅಧಿಕಾರ ರೂಢ ಕಾಂಗ್ರೆಸ್ ಪಕ್ಷಗಳು ಪರಸ್ಪರ ಆರೋಪದಲ್ಲಿ ತೊಡಗಿವೆ. ಈಗ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರು ಬಿಜೆಪಿ ನಿಜಕ್ಕೂ ಪಾಕಿಸ್ತಾನವನ್ನು ದ್ವೇಷಿಸುತ್ತದೆ ಎಂದಾದರೆ ಅದು ಆ ದೇಶವನ್ನು ಶತ್ರು ದೇಶ ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು X ಜಾಲತಾಣ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಅದರಲ್ಲಿ ಬಿಜೆಪಿಯನ್ನು ತೀವ್ರವಾಗಿ ಜರಿದಿದ್ದಾರೆ. “ಬಿಜೆಪಿ ಪಕ್ಕಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ. ಪಾಕಿಸ್ತಾನದ ಜಪ ಮಾಡದೆ ಬಿಜೆಪಿ ಚುನಾವಣೆ ಎದುರಿಸಿದ ಇತಿಹಾಸವೇ ಇಲ್ಲ. ಪಾಕಿಸ್ತಾನದ ಮೇಲೆ ಬಿಜೆಪಿಗೆ ನಿಜಕ್ಕೂ ರೋಷ,ವೇಷ ಇದ್ದರೆ “ಶತೃರಾಷ್ಟ್ರ” ಎಂದು ಘೋಷಿಸಲಿ.!” ಎಂದು ಅವರು ಕಿಡಿಕಾರಿದ್ದಾರೆ.
“ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ ಎಂದು ಚುನಾವಣೆಯ ಭಾಷಣ ಬೀಗಿದ್ದ ನರೇಂದ್ರ ಮೋದಿಯವರು, ಪಾಕಿಸ್ತಾನದ ಪ್ರಧಾನಿಯ ಮೊಮ್ಮಗಳ ಮದುವೆಗೆ ಆಹ್ವಾನವೇ ಇಲ್ಲದೆ, ರಹಸ್ಯವಾಗಿ ಬಿರಿಯಾನಿ ತಿಂದು ಬಂದಿದ್ದು ನೆಂಟಸ್ತನ ಅಲ್ಲವೇ?
ಪಾಕಿಸ್ತಾನವನ್ನು ‘ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮಂಡಿಸಿದ್ದ ಖಾಸಗಿ ಮಸೂದೆಯನ್ನು ವಾಪಾಸ್ ಪಡೆದಿದ್ದು ಯಾಕೆ? 56 ಇಂಚಿನ ಎದೆಯಲ್ಲಿ ದೈರ್ಯವೇ ಇರಲಿಲ್ವೇ? ಯಾರ ಒತ್ತಡದಿಂದ ಮಸೂದೆ ವಾಪಾಸ್ ಪಡೆಯಲಾಯಿತು?
ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವ ಸಕ್ಕರೆ ಸೇರಿದಂತೆ ಎಲ್ಲಾ ವ್ಯವಹಾರವನ್ನು ನಿಲ್ಲಿಸಲು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧೈರ್ಯ ಇದ್ಯಾ? ಬೀದಿಯಲ್ಲಿ ನಿಂತು ಬೊಬ್ಬೆ ಹಾಕುತ್ತಿರುವ ಬಿಜೆಪಿ, ಪಾಕಿಸ್ತಾನದ ನಂಟಸ್ತನದಿಂದ ರಾಜಕೀಯ ಬೇಳೆ ಬೆಳೆಸುತ್ತಿರುವುದು ಪುಲ್ವಾಮ ದಾಳಿಯಲ್ಲೇ ಸಾಬೀತಾಗಿದೆ. ರಾಜ್ಯದ ಜನರನ್ನ ಮೂರ್ಖರನ್ನಾಗಿ ಮಾಡಲು ಹೋಗಿ, ಮುಖವಾಡ ಬಯಲಾಗುತ್ತಿರುವುದು ಸ್ಪಷ್ಟವಾಗಿದೆ” ಎಂದು ಅವರು ಬಿಜೆಪಿಯನ್ನು ಟೀಕಿಸಿದ್ದಾರೆ.
ಗುಡ್ ಟಚ್ ಬ್ಯಾಡ್ ಟಚ್: ಇದನ್ನು ಮಕ್ಕಳಿಗೆ ಹೇಗೆ ಹೇಳಿಕೊಡುವುದು ಮತ್ತು ಈ ವಿಷಯದಲ್ಲಿ ಪೋಷಕರ ಪಾತ್ರವೇನು?