Saturday, December 14, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯವರೇ ಸದನದಲ್ಲಿ ಸಾವರ್ಕರ್‌ ಅವರನ್ನು ಅವಮಾನಿಸುತ್ತಿದ್ದಾರೆ: ರಾಹುಲ್ ಗಾಂಧಿ

ದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರು ಸಂವಿಧಾನದ ಕುರಿತಾಗಿ ಮಾಡಿದ್ದ ಹಿಂದಿನ ಟೀಕೆಗಳನ್ನು ಉಲ್ಲೇಖಿಸಿದ್ದಾರೆ.

ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಎನ್ ಡಿಎ ಸರ್ಕಾರವನ್ನು ಟೀಕಿಸಿದರು. ಸಂವಿಧಾನ ಮತ್ತು ಮನುಸ್ಮೃತಿಯ ನಡುವಿನ ಸಂಘರ್ಷವನ್ನು ವಿವರಿಸಿದರು. ಸಂವಿಧಾನವು ಮನುಸ್ಮೃತಿಯ ಆಧಾರದ ಮೇಲೆ ರಚನೆಯಾಗಬೇಕು ಎಂದು ಸಾವರ್ಕರ್ ನಂಬಿದ್ದರು, ಆದರೆ ಸಂವಿಧಾನವನ್ನು ತೆರೆದಾಗ ಅದರಲ್ಲಿ ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಚಿಂತನೆಗಳು ಮತ್ತು ಮಾತುಗಳು ಗೋಚರಿಸುತ್ತವೆ ಎಂದು ಹೇಳಿದರು.

ಶುಕ್ರವಾರ ನಡೆದ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಕೇಂದ್ರ ಸಚಿವ ರಿಜಿಜು ಅವರು, ಐತಿಹಾಸಿಕ ದೋಷಗಳನ್ನು ಮರೆಮಾಚುತ್ತಾ ಅಂದಿನ ಕಾಂಗ್ರೆಸ್ ಸಂವಿಧಾನಾತ್ಮಕ ಅಂಶಗಳನ್ನು ಆಯ್ಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ಟೀಕಿಸುವ ಮೂಲಕ ಶನಿವಾರ ಚರ್ಚೆ ಆರಂಭಿಸಿದರು. ಈ ಬಗ್ಗೆ ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು. “ಸಂವಿಧಾನವು ಆಧುನಿಕ ಭಾರತದ ದಾಖಲೆ. ಆದರೆ ಅದರಲ್ಲಿ ಪ್ರಾಚೀನ ಭಾರತೀಯ ಮೌಲ್ಯಗಳೂ ಇವೆ. ಇಂತಹ ಸಂವಿಧಾನವನ್ನು ಸಾವರ್ಕರ್ ಟೀಕಿಸಿದ್ದರು. ಆದರೆ ನೀವು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಿದ್ದೀರಿ. ಹೀಗೆ ಮಾತನಾಡುವುದು ನಿಮ್ಮ ಆತ್ಮ ಸಂಗಾತಿಗೆ ಅವಮಾನವಾದಂತೆ ಅನಿಸುತ್ತಿಲ್ಲವೇ?” ಎಂದು ರಾಹುಲ್ ಕಟುವಾಗಿ ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಎನ್‌ಡಿಎ ಸರ್ಕಾರದ ಕ್ರಮಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದರು. ಇದುವರೆಗೆ ದೇಶಾದ್ಯಂತ ಸುಮಾರು 70 ಪರೀಕ್ಷಾ ಪತ್ರಿಕೆಗಳು ಸೋರಿಕೆಯಾಗಿವೆ. ಇದರಿಂದ ಸಾವಿರಾರು ಪ್ರತಿಭಾವಂತರಿಗೆ ಉದ್ಯೋಗ ಸಿಗದಂತಾಗಿದೆ. ಇದಕ್ಕೆಲ್ಲಾ ಯಾರು ಹೊಣೆ? ಇತ್ತೀಚೆಗೆ ನಾನು ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದೆ. ಅಪರಾಧಿಗಳು ನಿರ್ಭೀತಿಯಿಂದ ಬೀದಿಗಿಳಿಯುತ್ತಾರೆ. ಸಂತ್ರಸ್ತರು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಸಂವಿಧಾನ ಎಲ್ಲರಿಗೂ ರಕ್ಷಣೆ ನೀಡುತ್ತದೆ. ಆದರೆ ಬಿಜೆಪಿ ದಾಳಿ ಮಾಡುತ್ತಲೇ ಇದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಭಾರತದಲ್ಲಿ ಇದೀಗ ಯುದ್ಧ ನಡೆಯುತ್ತಿದೆ ಎಂದು ಹೇಳುತ್ತಾ.. ಏಕಲವ್ಯ ತನ್ನ ಹೆಬ್ಬೆರಳನ್ನು ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ನೀಡಿದ ಕಥೆಯನ್ನು ರಾಹುಲ್ ಪ್ರಸ್ತಾಪಿಸಿದರು. ”ಧಾರಾವಿ ಯೋಜನೆಯನ್ನು ಅದಾನಿ ಸಂಸ್ಥೆಗೆ ವಹಿಸಿದಾಗ ಅಲ್ಲಿನ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಹೆಬ್ಬೆರಳನ್ನು ಪ್ರಧಾನಿ ಮೋದಿ ಕತ್ತರಿಸಿದಂತೆ ಆಯಿತು. ಇತ್ತೀಚಿಗೆ ಬೆಂಬಲ ಬೆಲೆ ಕೇಳಿದ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿದರು. ಇದಕ್ಕಿಂತ ಕೆಟ್ಟದ್ದು ಇನ್ನೇನು ನಡೆಯಬೇಕಿದೆ?” ಎಂದು ರಾಹುಲ್ ಪ್ರಶ್ನಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಜಾತಿಗಣತಿ ನಡೆಸುತ್ತೇವೆ ಎಂದು ರಾಹುಲ್‌ ಗಾಂಧಿ ಪುನರುಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page