Home ರಾಜಕೀಯ ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ: ರಾಜ್ಯ ಬಿಜೆಪಿ ನಾಯಕರನ್ನು ಕಡೆಗಣಿಸಿತೇ ಹೈಕಮಾಂಡ್?

ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ: ರಾಜ್ಯ ಬಿಜೆಪಿ ನಾಯಕರನ್ನು ಕಡೆಗಣಿಸಿತೇ ಹೈಕಮಾಂಡ್?

0

ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆಂದು ದೆಹಲಿಗೆ ಹೋಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಿಜೆಪಿ ವರಿಷ್ಠರು ದಿನವಿಡೀ ಭೇಟಿಗೆ ಅವಕಾಶ ನೀಡದೆ ಸತಾಯಿಸಲಾಗಿತ್ತು. ಇದೇವೇಳೆ, ಜೆಡಿಎಸ್ ನಾಯಕರು ಬಿಜೆಪಿ ವರಿಷ್ಠರನ್ನು ಸುಲಭವಾಗಿ ಭೇಟಿಯಾಗಿ ಬರುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಜೆಡಿಎಸ್ ನಾಯಕರ ಮೇಲಿರುವ ಒಲವು ರಾಜ್ಯ ಬಿಜೆಪಿ ನಾಯಕರ ಮೇಲೆ ಇಲ್ಲವಾ? – ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ ಹೊಸ ತಿರುವು ಪಡೆದಿದೆ. ಪಕ್ಷದ ಸ್ಥಳೀಯ ನಾಯಕರು ಮತ್ತು ಶಾಸಕರನ್ನು ಹೊರಗಿಟ್ಟು ಎರಡೂ ಪಕ್ಷಗಳ ವರಿಷ್ಠರು ನೇರವಾಗಿ ಈ ಚರ್ಚೆಯ ಕುರಿತು ತೀರ್ಮಾನಕ್ಕೆ ಬಂದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಜೆಡಿಎಸ್ ಪಕ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರುಗಳಾದ ಶರಣಗೌಡ ಕಂದಕೂರ  (ಗುರುಮಠಕಲ್) ಹಾಗೂ ಕರೆಮ್ಮ (ದೇವದುರ್ಗ) ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿಯೊಳಗೆ ಹೈಕಮಾಂಡ್ ವಿರುದ್ಧ ಧ್ವನಿ ಬಿಚ್ಚುವ ವಾತಾವರಣ ಇಲ್ಲವಾದರೂ, ಬಿ.ಎಸ್.ಯಡಿಯೂರಪ್ಪನವರು ಸೇರಿದಂತೆ ರಾಜ್ಯದ ನಾಯಕರನ್ನು ಸಂಪೂರ್ಣ ನಿರ್ಲಕ್ಷಿಸಿ, ಹೈಕಮಾಂಡ್ ಏಕಪಕ್ಷೀಯವಾಗಿ ಮೈತ್ರಿ ತೀರ್ಮಾನಕ್ಕೆ ಬಂದಿರುವುದು ಸ್ಪಷ್ಟವಾಗುತ್ತಿದೆ. 

ಮೈತ್ರಿಯ ಕುರಿತಂತೆ ಬಿಜೆಪಿ ನಾಯಕರು ನೀಡುತ್ತಿರುವ ಗೊಂದಲಮಯ ಹೇಳಿಕೆಗಳು ಇದನ್ನು ಪುಷ್ಠೀಕರಿಸುತ್ತವೆ. ಮೈತ್ರಿಯ ಬಗ್ಗೆ ಮೊಟ್ಟಮೊದಲು ಬಾರಿಗೆ ಅಧಿಕೃತ ಹೇಳಿಕೆ ನೀಡಿದ್ದು ಯಡಿಯೂರಪ್ಪನವರು. “ಜೆಡಿಎಸ್ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲು ಮೋದಿ-ಅಮಿತ್ ಶಾ ಒಪ್ಪಿದ್ದು, ಇದರಿಂದ ಬಿಜೆಪಿಗೆ ಹೆಚ್ಚಿನ ಶಕ್ತಿ ಲಭಿಸಲಿದೆ” ಎಂದು ಅವರು ಹೇಳಿದ್ದರು. ಆದರೆ ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಂತೆ ಬೇರಾವ ರಾಜ್ಯ ಬಿಜೆಪಿ ನಾಯಕರೂ ದೃಢವಾದ ದನಿಯಲ್ಲಿ ಇದುವರೆಗೆ ಮಾತಾಡಿಲ್ಲ. ಇನ್ನು ಇತ್ತೀಚೆಗಷ್ಟೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಂಡು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವ ಸಿಟಿ ರವಿಯವರು “ಮೈತ್ರಿಯ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲ. ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದರೆ, ಎಲ್ಲಾ ಯೋಚಿಸಿಯೇ ತೀರ್ಮಾನಕ್ಕೆ ಬಂದಿರುತ್ತಾರೆ. ಆದ್ರೆ ಮೋದಿ ಮತ್ತೆ ಬರ್ಬೇಕು” ಎಂದು ಪ್ರತಿಕ್ರಿಯಿಸಿದ್ದರು. ಇನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು “ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ಸುದೀರ್ಘ ಚರ್ಚೆ ನಡೆಯಬೇಕಿದೆ. ಮೈತ್ರಿ ಮಾತುಕತೆ ಇನ್ನೂ ಪೂರ್ಣಗೊಂಡಿಲ್ಲ. ಬಳಿಕ ಮಾತ್ರವೇ ಅಂತಿಮ ಹಂತದ ನಿರ್ಧಾರವಾಗಲಿದೆ” ಎಂದು ಹೇಳಿದ್ದಾರೆ. “ಕೇಂದ್ರದ ನಾಯಕರು ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಅಥವಾ ಹೊಂದಾಣಿಕೆ ಆಗಿಲ್ಲ. ಯಾವುದೇ ಪಕ್ಷದ ಜೊತೆ ಮೈತ್ರಿ ಆಗಬೇಕಾದರೆ ಕೇಂದ್ರ ಸಮಿತಿ ಸರ್ವೇ ಮಾಡಬೇಕು. ಸರ್ವೇ ಆಧಾರದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಂದ್ರ ನಾಯಕರು ಮೈತ್ರಿ ಬಗ್ಗೆ ನಿರ್ಧರಿಸುತ್ತಾರೆ” ಎಂದು ಮಾಜಿ ಸಚಿವ ಆರ್ ಅಶೋಕ್ ಅವರು ಮಂಡ್ಯದಲ್ಲಿ ಸುದ್ದಿಗಾರರ ಸಮ್ಮುಖದಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪನವರು ಮೈತ್ರಿಯ ಬಗ್ಗೆ ಹಾಗೂ ನಾಲ್ಕು ಸ್ಥಾನಗಳ ಸೀಟು ಹಂಚಿಕೆಯ ಬಗ್ಗೆ ಸ್ಪಷ್ಟವಾಗಿ ಹೇಳಿಕೆ ನೀಡಿದ ನಂತರವೂ, ಬಿಜೆಪಿಯ ಬೇರೆಬೇರೆ ನಾಯಕರು ಮೈತ್ರಿಯ ಕುರಿತಾಗಿ ಒಮ್ಮತದ ಸ್ಪಷ್ಟ ಮಾತುಗಳನ್ನು ಆಡುತ್ತಿಲ್ಲ. ಇತ್ತ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ  ಮೈತ್ರಿಯ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರೇ ಖುದ್ದಾಗಿ ಹೇಳಿದ್ದರೂ ಸಹಾ, ರಾಜ್ಯ ಬಿಜೆಪಿ ವಲಯದಲ್ಲಿ ಸ್ಪಷ್ಟತೆ ಇಲ್ಲದಿರುವುದನ್ನು ಗಮನಿಸಿದಾಗ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರನ್ನು ಸಂಪೂರ್ಣವಾಗಿ ಹೊರಗಿಟ್ಟು ಏಕಪಕ್ಷೀಯವಾಗಿ ಈ ಕುರಿತು ತೀರ್ಮಾನ ತೆಗೆದುಕೊಂಡಿರುವುದು ಸಾಬೀತಾಗುತ್ತದೆ. ಮೈತ್ರಿಯ ಕುರಿತು ಜೆಡಿಎಸ್ ವರಿಷ್ಠರಿಗಿರುವ ಸ್ಪಷ್ಟತೆ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಅವರ ಅಭಿಪ್ರಾಯವನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲದೇ, ಮೈತ್ರಿ ಕುರಿತು ಸ್ಪಷ್ಟ ಮಾಹಿತಿಯನ್ನು ಸಹಾ ಹೈಕಮಾಂಡ್ ರಾಜ್ಯ ನಾಯಕರಿಗೆ ನೀಡಿಲ್ಲ.

ಇದರ ಬೆನ್ನಲ್ಲೇ, ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಗೆ ಬಂದಿಳಿದ ಯಡಿಯೂರಪ್ಪನವರು ಮೈತ್ರಿ ವಿಚಾರವಾಗಿ ಇದ್ದಕ್ಕಿದ್ದಂತೆ ವ್ಯತಿರಿಕ್ತ ಹೇಳಿಕೆ ನೀಡಿ, “ಮೈತ್ರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನಿರ್ಧಾರ ಮಾಡ್ತಾರೆ. ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿರುವುದು ಅವರೇ. ಮೈತ್ರಿ ಬಗ್ಗೆ ನಾನೇನು ಪ್ರಸ್ತಾಪ ಮಾಡುವುದಿಲ್ಲ. ಅಂದು ನನಗೆ ತಿಳಿದಿದ್ದ ಪ್ರಾಥಮಿಕ ಮಾಹಿತಿಯನ್ನಷ್ಟೇ ಹೇಳಿದ್ದೆ” ಎಂದಿರುವುದು, ಹೈಕಮಾಂಡ್ ಮುಂದೆ ಯಡಿಯೂರಪ್ಪನವರ ಅಸಹಾಯಕತೆಯನ್ನು ತೆರೆದಿಟ್ಟಂತಿದೆ. 

ವಿಧಾನ ಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಮೋದಿ ಮತ್ತು ಅಮಿತ್ ಶಾ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ವಿರೋಧಪಕ್ಷದ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷ ಆಯ್ಕೆಯನ್ನೂ ಹೈಕಮಾಂಡ್ ವಿಳಂಬ ಮಾಡುತ್ತಿದೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆಂದು ದೆಹಲಿಗೆ ಹೋಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ದಿನವಿಡೀ ಭೇಟಿಗೆ ಅವಕಾಶ ನೀಡದೆ ಸತಾಯಿಸಲಾಗಿತ್ತು. ಇದೇವೇಳೆ, ಜೆಡಿಎಸ್ ನಾಯಕರು ಬಿಜೆಪಿ ವರಿಷ್ಠರನ್ನು ಸುಲಭವಾಗಿ ಭೇಟಿಯಾಗಿ ಬರುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ಗೆ ಜೆಡಿಎಸ್ ನಾಯಕರ ಮೇಲಿರುವ ಒಲವು ರಾಜ್ಯ ಬಿಜೆಪಿ ನಾಯಕರ ಮೇಲೆ ಇಲ್ಲವಾ? ಎಂಬ ಪ್ರಶ್ನೆಯೂ ಇಲ್ಲಿ ಕಾಡದಿರದು. ಒಟ್ಟಿನಲ್ಲಿ, ಮೈತ್ರಿಯ ವಿಚಾರದಲ್ಲಿ ರಾಜ್ಯ ನಾಯಕರನ್ನು ದಿಲ್ಲಿ ಬಿಜೆಪಿ ವರಿಷ್ಠರು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಇದು ಬಿಜೆಪಿಯೊಳಗೆ ಭಿನ್ನಮತಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.

ಮಾಚಯ್ಯ ಎಂ ಹಿಪ್ಪರಗಿ

ರಾಜಕೀಯ ವಿಶ್ಲೇ಼ಷಕರು

ಇದನ್ನೂ ಓದಿ:ದೈತ್ಯರೊಂದಿಗೆ ಮೈತ್ರಿ; ಪ್ರಾದೇಶಿಕ ಪಕ್ಷದ ವಿನಾಶ ಖಾತ್ರಿ

ಮುಖವಾಡಗಳನ್ನೆಲ್ಲ ಕಳಚಿ ಹಾಕುತ್ತಿರುವ ಸಾಮಾಜಿಕ ಮಾಧ್ಯಮ

You cannot copy content of this page

Exit mobile version