ಮಧ್ಯಪ್ರದೇಶ ಸರ್ಕಾರದ ಸಚಿವ ಕುನ್ವರ್ ವಿಜಯ್ ಷಾ ಅವರು ಕರ್ನಲ್ ಸೋಫಿಯಾ ಖುರೇಷಿ ಅವರನ್ನು ‘ಭಯೋತ್ಪಾದಕರ ಸಹೋದರಿ’ ಎಂದು ಗುರುತಿಸುವ ಮೂಲಕ ಸೇನೆ ಮತ್ತು ಸೈನಿಕರ ಬಗೆಗಿನ ನಿರ್ಲಕ್ಷ್ಯವನ್ನು ಹೊರಹಾಕಿದ್ದಾರೆ. ಬಿಜೆಪಿ ನಾಯಕ ಕುನ್ವರ್ ವಿಜಯ್ ಷಾ ಬೇಜವಾಬ್ದಾರಿ ಹೇಳಿಕೆ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಚಿವ ಕುನ್ವರ್ ವಿಜಯ್ ಷಾ, ‘ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಒರೆಸುವ ಮೂಲಕ ಅಗೌರವ ತೋರಿದ್ದರು. ಅವರಿಗೆ ಸೂಕ್ತ ಉತ್ತರ ನೀಡಲು ಮೋದಿಜಿ ಅವರದ್ದೇ ಜಾತಿಯವರಾದ ಅವರ ಸಹೋದರಿಯನ್ನೇ ಕಳುಹಿಸಿ ಅವರ ಬಟ್ಟೆಬಿಚ್ಚಿ ಹೊಡೆದರು’ ಎಂದು ಹೇಳಿದ್ದಾರೆ.
ಸಚಿವ ಕುನ್ವರ್ ವಿಜಯ್ ಷಾ ಅವರು ತಮ್ಮ ಭಾಷಣದಲ್ಲಿ ಆಡಿದ ಮಾತು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ತಮ್ಮ ಭಾಷಣದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಉಲ್ಲೇಖಿಸದೇ ಧರ್ಮದ ಆಧಾರದಲ್ಲಿ ಅವರನ್ನು ಗುರುತಿಸುವ ಮೂಲಕ ಕೋಮುವಾದಿ ನಿಲುವಿನ ಮೂಲಕ ಮುಸಲ್ಮಾನ ಎಂದರೆ ಭಯೋತ್ಪಾದಕ ಎಂಬರ್ಥದಲ್ಲಿ ಗುರುತಿಸಿ ವಿವಾದ ಸೃಷ್ಟಿಸಿದ್ದಾರೆ.
ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸೇನಾಧಿಕಾರಿಯ ವಿರುದ್ಧ ಅವರು ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸೈನಿಕರ ಅವಹೇಳನ ಮಾಡಿದ ಬಿಜೆಪಿ ನಾಯಕನ ಹೇಳಿಕೆ ಖಂಡನಾರ್ಹ. ಇದು ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಹೇಳಿದೆ.