ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮೈತ್ರಿಕೂಟದ ಪಾಲುದಾರ ಜೆಡಿಎಸ್ಗೆ ಬಿಟ್ಟುಕೊಡುವ ಕುರಿತು ಬಿಜೆಪಿಯಲ್ಲಿ ಅಸಮಾಧಾನದ ವರದಿಗಳ ನಡುವೆ ಕರ್ನಾಟಕ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಸೋಮವಾರ ಬಿಜೆಪಿ ಮುಖಂಡ ಮತ್ತು ಮಾಜಿ ಸಚಿವ ಕೆಸಿ ನಾರಾಯಣ ಗೌಡ ಅವರು ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆಗಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಜೆಡಿಎಸ್ ಕೋಲಾರ, ಹಾಸನ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆದ್ದಿದ್ದಾರೆ.
“ಹೌದು, ನಾವು ನಾರಾಯಣ ಗೌಡ ಅವರೊಂದಿಗೆ ಮಾತನಾಡಿದ್ದೇವೆ, ಅವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಅವರು ಕೆಆರ್ ಪೇಟೆಯ ಹಿರಿಯ ನಾಯಕ ದಿವಂಗತ ಕೃಷ್ಣ ಅವರ ಹಲವಾರು ಬೆಂಬಲಿಗರು, ಈ ಹಿಂದೆ ಕಾಂಗ್ರೆಸ್ನಲ್ಲಿದ್ದರು ಮತ್ತು ಕಾರಣಾಂತರಗಳಿಂದ ನಾರಾಯಣಗೌಡ ಅವರ ಜೊತೆ ಹೋಗಿದ್ದರು, ಅವರು ನಮ್ಮೊಂದಿಗೆ ಸೇರುವ ಸಾಧ್ಯತೆಯಿದೆ,” ಎಂದು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಷರತ್ತುಗಳಿಲ್ಲದೆ ಮತ್ತು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ತೆಕ್ಕೆಗೆ ಬರಬಹುದು ಮತ್ತು ಸೇರ್ಪಡೆಯಾದ ನಂತರ, ಯಾರಿಗೆ ಯಾವ ಜವಾಬ್ದಾರಿಯನ್ನು ನೀಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ತಿಳಿಸಿದರು.
“ಯಾವುದೇ ಷರತ್ತುಗಳಡಿ ಚರ್ಚೆಗಳು ನಡೆದಿಲ್ಲ. ಮೊದಲ ಸುತ್ತಿನ ಚರ್ಚೆಗಳು ನಡೆದಿವೆ, ಅವರು ಸಂಪರ್ಕದಲ್ಲಿದ್ದಾರೆ, ಪಕ್ಷ ಸೇರುವ ದಿನಾಂಕವನ್ನು ನಿರ್ಧರಿಸುವ ಹಂತಕ್ಕೆ ಚರ್ಚೆಗಳು ತಲುಪಿಲ್ಲ” ಎಂದು ಅವರು ಹೇಳಿದರು.
ಗೌಡರು ಈ ಹಿಂದೆ ಜೆಡಿಎಸ್ನಲ್ಲಿದ್ದರು. ಅವರು ತಮ್ಮ ಪಕ್ಷಗಳನ್ನು ತೊರೆದ 17 ಕಾಂಗ್ರೆಸ್-ಜೆಡಿ (ಎಸ್) ಶಾಸಕರಲ್ಲಿ ಒಬ್ಬರು, ಇದು ಅಂತಿಮವಾಗಿ 2019 ಜುಲೈನಲ್ಲಿ ಆಗಿನ ಎಚ್ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಯಿತು. ನಂತರ ಅವರು ಬಿಜೆಪಿ ಟಿಕೆಟ್ನಲ್ಲಿ ಉಪಚುನಾವಣೆಯಲ್ಲಿ ಗೆದ್ದು ಸೇವೆ ಸಲ್ಲಿಸಿದ್ದರು. ಹಿಂದಿನ ಕೇಸರಿ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದರು.
ಬಹುಭಾಷಾ ನಟಿ ಸುಮಲತಾ ಅವರು ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಕ್ಷೇತ್ರದಿಂದ ಮರು ಚುನಾವಣೆಗೆ ಬಿಜೆಪಿ ಟಿಕೆಟ್ಗಾಗಿ ಅವರು ಬೇಡಿಕೆ ಇಟ್ಟಿದ್ದರು.
ನಾರಾಯಣ ಗೌಡ ಮತ್ತು ಕೆಲವು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಅವರ ಉಮೇದುವಾರಿಕೆಗೆ ಒತ್ತಾಯಿಸುತ್ತಿದ್ದಾರೆ ಮತ್ತು ಬಿಜೆಪಿಯು ಜೆಡಿಎಸ್ಗೆ ಸ್ಥಾನವನ್ನು ಬಿಟ್ಟುಕೊಡಬಾರದು ಎಂದು ಬಹಿರಂಗವಾಗಿ ಒತ್ತಾಯಿಸುತ್ತಿದ್ದಾರೆ.
2019ರ ವಿಧಾನಸಭಾ ಉಪಚುನಾವಣೆಯಲ್ಲಿ (ಕೃಷ್ಣರಾಜಪೇಟೆಯಲ್ಲಿ) ಮಂಡ್ಯ ಜಿಲ್ಲೆಯ ಒಕ್ಕಲಿಗ ಭದ್ರಕೋಟೆಯಲ್ಲಿ ಬಿಜೆಪಿಯ ಮೊದಲ ಗೆಲುವು ದಾಖಲಿಸುವ ಮೂಲಕ ಗೌಡರು ಇತಿಹಾಸ ಬರೆದಿದ್ದಾರೆ. ನಂತರ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.
ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಕರ್ನಾಟಕ ಚುನಾವಣಾ ಉಸ್ತುವಾರಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ ರಾಧಾ ಮೋಹನ್ ದಾಸ್ ಅಗರ್ವಾಲ್ ಶನಿವಾರ ಹೇಳಿದ್ದಾರೆ.
ಜೆಡಿಎಸ್ನ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಜೆಡಿಎಸ್ನಲ್ಲಿ ಹರಿದಾಡುತ್ತಿವೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಸಿಎಸ್ ಪುಟ್ಟರಾಜು ಅವರ ಹೆಸರುಗಳೂ ಕೇಳಿಬರುತ್ತಿವೆ.