Saturday, June 21, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ದೇಶದ ಕ್ಷಮೆ ಕೇಳಬೇಕು | ಸಾಹಿತಿಗಳ ಆಗ್ರಹ

ಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕ ಅಭಿವೃದ್ಧಿ ಹೊಂದುವುದಿಲ್ಲʼ ಎಂಬ ಬೆದರಿಕೆಯನ್ನು ಮತದಾರರಿಗೆ ಹಾಕುವುದರ ಜೊತೆಗೆ ಪಕ್ಷ ರಾಜಕಾರಣದಿಂದ ಹೊರಗೆ ಇರಬೇಕಾಗಿರುವ ಪ್ರಧಾನಿ ಹುದ್ದೆಯ ಘನತೆಯನ್ನು ನಡ್ಡಾ ಸಂಕುಚಿತಗೊಳಿಸಿದ್ದಾರೆ.

ಕರ್ನಾಟಕ ರಾಜ್ಯವು ನರೇಂದ್ರ ಮೋದಿಯವರ ಆಶೀರ್ವಾದದಿಂದ ದೂರವಿರಬಾರದು, ಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕ ಅಭಿವೃದ್ಧಿ ಹೊಂದುವುದಿಲ್ಲʼ ಎಂಬ ಬೆದರಿಕೆಯನ್ನು ಮತದಾರರಿಗೆ ಒಡ್ಡಿದ  ಬಿಜೆಪಿ ಅಧ್ಯಕ್ಷ  ಜೆಪಿ  ನಡ್ಡಾ ಅವರು ಕೂಡಲೇ ಭಾರತದ ಮತದಾರರ ಕ್ಷಮೆ ಯಾಚಿಸಬೇಕು ಎಂದು ರಾಜ್ಯದ ಸಾಹಿತಿಗಳು,  ಕಲಾವಿದರು ಒತ್ತಾಯಿಸಿದ್ದಾರೆ.

ಪ್ರೊ. ಕೆ ಎಂ ಮರುಳಸಿದ್ದಪ್ಪ, ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು, ಡಾ. ವಿಜಯಾ, ಲೇಖಕಿ, ಬೆಂಗಳೂರು ಪ್ರೊ. ಎಸ್‌ ಜಿ ಸಿದ್ದರಾಮಯ್ಯ, ಪೂರ್ವಾಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪ್ರೊ. ಕಾಶೀನಾಥ ಅಂಬಲಗಿ, ಕವಿಗಳು, ಲೇಖಕರು, ಕಲಬುರ್ಗಿ, ದಿನೇಶ್‌ ಅಮೀನ್‌ ಮಟ್ಟು, ಪತ್ರಕರ್ತರು, ಬೆಂಗಳೂರು, ಗಿರಿಧರ ಕಾರ್ಕಳ, ಕಲಾವಿದರು, ಬೆಂಗಳೂರು, ಪುರುಷೋತ್ತಮ ಬಿಳಿಮಲೆ, ನಿವೃತ್ತ ಪ್ರಾಧ್ಯಾಪಕರು, ದೆಹಲಿ, ಶ್ರೀನಿವಾಸ ಕಾರ್ಕಳ, ಅಂಕಣಕಾರರು, ಮಂಗಳೂರು ಇವರೆಲ್ಲರು ಜಂಟಿಹೇಳಿಕೆ ನೀಡಿ ತಮ್ಮ  ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ಏಪ್ರಿಲ್‌ 19, 2023ರಂದು ಕರ್ನಾಟಕದ ಚುನಾವಣಾ ಸಭೆಯೊಂದರಲ್ಲಿ ಭಾಷಣ ಮಾಡಿದ  ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ʼ ಕರ್ನಾಟಕದಲ್ಲಿ ಅಭಿವೃದ್ಧಿಯು ನಿರಂತರವಾಗಿ ಹರಿಯಲು ನಿಮಗೆ ಮೋದೀಜಿಯವರ ಆಶೀರ್ವಾದ ಬೇಕು. ಆದ್ದರಿಂದ ರಾಜ್ಯವು ಮೋದಿ ಜಿ ಅವರ ಆಶೀರ್ವಾದದಿಂದ ದೂರವಿರಬಾರದುʼ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತಿನ ಮೂಲಕ ನಡ್ಡಾ ಅವರು ʼಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕ ಅಭಿವೃದ್ಧಿ ಹೊಂದುವುದಿಲ್ಲʼ ಎಂಬ ಬೆದರಿಕೆಯನ್ನು ಮತದಾರರಿಗೆ ಹಾಕುವುದರ ಜೊತೆಗೆ ಪಕ್ಷ ರಾಜಕಾರಣದಿಂದ ಹೊರಗೆ ಇರಬೇಕಾಗಿರುವ ಪ್ರಧಾನಿ ಹುದ್ದೆಯ ಘನತೆಯನ್ನು ಸಂಕುಚಿತಗೊಳಿಸಿದ್ದಾರೆ. ನಡ್ಡಾ ಅವರ ಮಾತುಗಳು ಪ್ರಜಾಪ್ರಭುತ್ವದ ಮೇಲಿನ ಧಾಳಿ ಹೇಗೋ ಹಾಗೆ ಸಂವಿಧಾನದ ಮೇಲಿನ ಆಕ್ರಮಣವೂ ಹೌದು ಎಂದು ನಾವು ಭಾವಿಸುತ್ತೇವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಕರ್ನಾಟಕವೂ ಸೇರಿದಂತೆ ದೇಶದ ಯಾವ ರಾಜ್ಯವಾದರೂ ತನಗೆ ಬೇಕಾದ ಪಕ್ಷವನ್ನು ಚುನಾವಣೆಯ ಮೂಲಕ ಅಧಿಕಾರಕ್ಕೆ ತರುವ ಹಕ್ಕನ್ನು ಸಂವಿಧಾನವು ಮತದಾರರಿಗೆ ನೀಡಿದೆ. ಮತದಾರರ ಅಯ್ಕೆಯನ್ನು ಕೇಂದ್ರದಲ್ಲಿರುವ ಒಕ್ಕೂಟ ಸರಕಾರ ಗೌರವಿಸಬೇಕು. ಸಂವಿಧಾನದ ಪರಿಚ್ಛೇದ XI, ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರಗಳ ನಡುವೆ ಹಂಚಿಕೊಟ್ಟಿರುವುದರಿಂದ ಭಾರತವು ಒಂದು ಒಕ್ಕೂಟ ರಾಷ್ಟ್ರವಾಗಿದೆ. ಇಲ್ಲಿ ಒಂದು ಇನ್ನೊಂದನ್ನು ದುರ್ಬಲಗೊಳಿಸುವುದಿಲ್ಲ ಬದಲು ಬಲಗೊಳಿಸುತ್ತದೆ. ಆದರೆ ನಡ್ಡಾ ಅವರ ಮಾತುಗಳು ಒಕ್ಕೂಟ ಸರಕಾರದ ಮೂಲ ತತ್ವಗಳಿಗೆ ವಿರೋಧವಾಗಿದ್ದು, ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎಂದೂ ಹೇಳಿಕೆಯಲ್ಲಿ  ವಿವರಿಸಲಾಗಿದೆ.

ಈಗ ಕೇಂದ್ರದಲ್ಲಿರುವ ಎನ್‌ ಡಿ ಎ ಸರಕಾರವು ಹಂತ ಹಂತವಾಗಿ ರಾಜ್ಯ ಸರಕಾರಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಲೇ ಬರುತ್ತಿದೆ. ಇದಕ್ಕೆ ಪೂರಕವಾಗಿಯೇ ನಡ್ಡಾ ಅವರ ಮಾತುಗಳು ಬಂದಿವೆ. ಇದು ಅಂತಿಮವಾಗಿ ಭಾರತದ ಬಹುತ್ವವನ್ನು ನಾಶ ಮಾಡುತ್ತದೆ. ಕಾರಣ, ಸಂವಿಧಾನ ವಿರೋಧಿ ಮಾತುಗಳನ್ನಾಡಿದ ಜೆ ಪಿ ನಡ್ಡಾ ಅವರು ಕೂಡಲೇ ಭಾರತದ ಮತದಾರರ ಕ್ಷಮೆ ಯಾಚಿಸಬೇಕು ಮತ್ತು ತಮ್ಮ ಮುಂದಿನ ಭಾಷಣಗಳಲ್ಲಿ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಅವರು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page