ಬೆಂಗಳೂರು: ನವೆಂಬರ್ 11 ರಂದು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮತ್ತು ವಂದೇ ಭಾರತ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದು, ಈ ಕುರಿತು ʼಬಿಜೆಪಿ ಸರ್ಕಾರ ನಾಡಪ್ರಭು ಕೆಂಪೇಗೌಡರು ಮತ್ತು ಅವರ ಮೌಲ್ಯಗಳ ನಿಜವಾದ ಅನುಯಾಯಿಗಳೇ?ʼ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಲು ಬೆಂಗಳೂರಿಗೆ ಆಗಮಿಸುತ್ತಿರುವ
ನರೇಂದ್ರ ಮೋದಿಯವರಿಗೆ ಸ್ವಾಗತಿಸಿದ್ದು, ಬಿಜೆಪಿ ಮತ್ತು ಬಿಜೆಪಿ ಸರ್ಕಾರ ನಾಡಪ್ರಭು ಕೆಂಪೇಗೌಡರು ಮತ್ತು ಅವರ ಮೌಲ್ಯಗಳ ನಿಜವಾದ ಅನುಯಾಯಿಗಳೇ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನಾಡಪ್ರಭು ಕೆಂಪೇಗೌಡರ ಮೌಲ್ಯಗಳ ನೈಜ ಅನುಯಾಯಿಯಾಗಿದೆ. ಅವರ ಗೌರವಾರ್ಥ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದೇವೆ. ಬೆಂಗಳೂರಿನ ಮುಖ್ಯ ಮೆಟ್ರೋ ನಿಲ್ದಾಣಕ್ಕೂ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ವೈಭವೋಪೇತ ಸಂಪ್ರದಾಯಕ್ಕೆ ಚಾಲನೆ ನೀಡಿರುವುದು ಕಾಂಗ್ರೆಸ್ ಆಗಿದೆ ಎಂದು ಹೇಳಿ ಬೆಂಗಳೂರಿನ ಸಂಸ್ಥಾಪಕರಿಗೆ ಸಂಬಂಧಿಸಿದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸಿದ್ದೇವೆ. ಆದರೆ ಬಿಜೆಪಿ ಏಕೆ ಕೆಂಪೇಗೌಡರ ದಕ್ಷ ಆಡಳಿತ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಅನುಸರಿಸುತ್ತಿಲ್ಲ? ನಾಡಪ್ರಭು ನಿರ್ಮಿಸಿದ ಈ ಕನಸಿನ ನಗರ ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಗ ಬಿಜೆಪಿಯಿಂದ ಬೆಂಗಳೂರು 40% ಕಮಿಷನ್, ಗುಂಡಿಗಳು ಮತ್ತು ಪ್ರವಾಹಗಳಿಗೆ ಕುಖ್ಯಾತಿಯಾಗಿದೆ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.