ಹೈದರಾಬಾದ್ನ ಶಂಷಾಬಾದ್ನಲ್ಲಿರುವ “ಕರಾಚಿ ಬೇಕರಿ”ಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ನಗರದ ಹೆಸರು ಹೊಂದಿರುವ “ಕರಾಚಿ ಬೇಕರಿ” ಈಗ ಕೇಸರಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
1953ರಲ್ಲಿ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಖಾಂಚಂದ್ ರಾಮನಾನಿ ಎಂಬ ಸಿಂಧಿ ಹಿಂದೂ ವ್ಯಕ್ತಿ ಕರಾಚಿ ಬೇಕರಿಯನ್ನು ಸ್ಥಾಪಿಸಿದ್ದರು. ಕಾಲಕ್ರಮೇಣ ಈ ಬೇಕರಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ ಈಚಿನ ದಿನಗಳಲ್ಲಿ ಭಾರತ ಪಾಕಿಸ್ತಾನದ ನಡುವೆ ಇರುವ ವೈಷಮ್ಯ ಮತ್ತಷ್ಟು ಹೆಚ್ಚಿದ ಹಿನ್ನಲೆಯಲ್ಲಿ ಕರಾಚಿ ಬೇಕರಿ ಹೆಸರಿನ ಕುರಿತಾಗಿ ಒಂದಷ್ಟು ಅಪಸ್ವರಗಳೂ ಕೇಳಿ ಬಂದಿದ್ದವು.
‘ಕರಾಚಿ ಬೇಕರಿ ಎಂಬ ಹೆಸರು ನಮ್ಮ ಕುಟುಂಬದ ಇತಿಹಾಸವನ್ನು ಪ್ರತಿನಿಧಿಸುತ್ತದೆ, ಇದು ರಾಷ್ಟ್ರೀಯತೆಯನ್ನು ಸಂಕೇತಿಸುವುದಿಲ್ಲ,’ ಎಂದು ವಿವಾದದ ಹಿನ್ನೆಲೆಯಲ್ಲಿ ಮಾಲಿಕರಾದ ರಾಜೇಶ್ ರಾಮ್ನಾನಿ ಮತ್ತು ಹರೀಶ್ ರಾಮ್ನಾನಿ ತಿಳಿಸಿದ್ದರು. ಅಷ್ಟೇ ಅಲ್ಲದೆ ‘ನಾವು ಭಾರತೀಯರಾಗಿ ದೇಶಕ್ಕೆ ಬದ್ಧರಾಗಿದ್ದೇವೆ. ದಯವಿಟ್ಟು ಈ ವಿಷಯವನ್ನು ರಾಜಕೀಯಗೊಳಿಸದೆ ನಮಗೆ ಸಹಕಾರ ನೀಡಿ,’ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ತಿಳಿಸಿದ್ದರು.
ಆದರೆ ಭಾನುವಾರ ಬಿಜೆಪಿ ಕಾರ್ಯಕರ್ತರು ಹೈದರಾಬಾದ್ ನ ಕರಾಚಿ ಬೇಕರಿಯನ್ನು ಧ್ವಂಸ ಮಾಡಿದ್ದಾರೆ. ಕೇಸರಿ ಸ್ಕಾರ್ಫ್ ಧರಿಸಿ ಭಾರತೀಯ ಧ್ವಜವನ್ನು ಹಿಡಿದಿದ್ದ ಗುಂಪೊಂದು ‘ಕರಾಚಿ’ ಕೃತಿಯನ್ನು ಪ್ರದರ್ಶಿಸುವ ಸೈನ್ ಬೋರ್ಡ್ಗೆ ಕೋಲುಗಳಿಂದ ಹೊಡೆದು ಹಾಕಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಪಡೆಗಳು ನಡೆಸಿದ ಮಿಲಿಟರಿ ದಾಳಿಯಾದ ಆಪರೇಷನ್ ಸಿಂಧೂರ್ ಮತ್ತು ಭಾರತೀಯ ಪಡೆಗಳನ್ನು ಸೂಚಿಸುತ್ತಾ ಅವರು ‘ಪಾಕಿಸ್ತಾನ್ ಮುರ್ದಾಬಾದ್’ ಮತ್ತು ‘ಜೈ ಜವಾನ್’ ಘೋಷಣೆಗಳನ್ನು ಕೂಗಿದರು.